ಮತ್ತೆ ಗೊಳ್ಳೆಂದುದು ನೃಪಾಲನ
ಮತ್ತಕಾಶಿನಿಯರು ಯುಧಿಷ್ಠಿರ
ನಿತ್ತದಿವ್ಯ ದುಕೂಲವನು ತಡಿಗಡರಿ ತೊಡಚಿದೆನು
ಬತ್ತಿತೆನ್ನಭಿಮಾನ ಜಲನಿಧಿ
ಮತ್ತೆ ಮಾರಿಯ ಮಸಕವನು ನೀ
ವ್ಚಿತ್ತವಿಸಿರೇ ಬೊಪ್ಪಯೆಂದನು ಕೌರವರ ರಾಯ (ಸಭಾ ಪರ್ವ, ೧೩ ಸಂಧಿ, ೩೯ ಪದ್ಯ)
ತಾತ್ಪರ್ಯ:
ಮತ್ತೆ ಯುಧಿಷ್ಠಿರನ ಅಂತಃಪುರದವರು ಘೊಳ್ಳನೆ ನಕ್ಕರು. ಅವನು ತರಿಸಿಕೊಟ್ಟ ಉತ್ತಮ ವಸ್ತ್ರವನ್ನು ಆ ನೀರಿನ ತಡಿಯನ್ನು ಹತ್ತಿ ಉಟ್ಟುಕೊಂಡೆನು. ನನ್ನ ಅಭಿಮಾನ ಸಮುದ್ರವು ಬತ್ತಿ ಹೋಯಿತು. ಇಷ್ಟೇ ಅಲ್ಲ ಅಪಮಾನ ಮಾರಿಯ ಹೊಡೆತವನ್ನು, ಅಪ್ಪ ನೀವು ಗಮನವಿಟ್ಟು ಕೇಳಿರಿ.
ಅರ್ಥ:
ಗೊಳ್ಳು: ನಗುವನ್ನು ಚಿತ್ರಿಸುವ ಪದ; ನೃಪಾಲ: ರಾಜ; ಮತ್ತಕಾಶಿನಿ: ಸುಂದರಿ; ದಿವ್ಯ: ಶ್ರೇಷ್ಠ; ದುಕೂಲ: ರೇಷ್ಮೆ ಬಟ್ಟೆ; ತಡಿಗಡರು: ದಡಕ್ಕೆ ಹತ್ತು; ತೊಡಚು: ಕಟ್ಟು, ಬಂಧಿಸು; ಬತ್ತು: ಒಣಗು, ಆರು, ಬರಿದಾಗು; ಅಭಿಮಾನ: ಹೆಮ್ಮೆ, ಅಹಂಕಾರ; ಜಲನಿಧಿ: ಸಾಗರ; ಮಾರಿ: ಮುಖ; ಮಸಕ: ಕಾಂತಿ, ತೇಜಸ್ಸು; ಚಿತ್ತವಿಸು: ಗಮನವಿಡು; ಬೊಪ್ಪ: ತಂದೆ; ರಾಯ: ರಾಜ;
ಪದವಿಂಗಡಣೆ:
ಮತ್ತೆ +ಗೊಳ್ಳೆಂದುದು +ನೃಪಾಲನ
ಮತ್ತಕಾಶಿನಿಯರು +ಯುಧಿಷ್ಠಿರನ್
ಇತ್ತ+ದಿವ್ಯ+ ದುಕೂಲವನು+ ತಡಿಗಡರಿ+ ತೊಡಚಿದೆನು
ಬತ್ತಿತ್+ಎನ್+ಅಭಿಮಾನ +ಜಲನಿಧಿ
ಮತ್ತೆ +ಮಾರಿಯ +ಮಸಕವನು +ನೀವ್
ಚಿತ್ತವಿಸಿರೇ +ಬೊಪ್ಪ+ಎಂದನು +ಕೌರವರ+ ರಾಯ
ಅಚ್ಚರಿ:
(೧) ಅಂತಃಪುರದ ಸ್ತ್ರೀಯರನ್ನು ಕರೆದ ಬಗೆ – ಮತ್ತಕಾಶಿನಿ
(೨) ದುರ್ಯೋಧನನ ದುಃಖವನ್ನು ತಿಳಿಸುವ ಪರಿ – ಬತ್ತಿತೆನ್ನಭಿಮಾನ ಜಲನಿಧಿ