ಪದ್ಯ ೭೫: ನಾರದರು ಧರ್ಮರಾಯನಿಗೇನು ಹೇಳಿದರು?

ಆ ಹರಿಯೆ ನಿಮಗಿಂದು ಜೀವ
ಸ್ನೇಹಿತನು ನಿಮಗಾವ ಚಿಂತೆ ವಿ
ಮೋಹ ಚೇಷ್ಟೆಗಳಿವನ ವಧೆಗೋ ಬಲ್ಲರಾರಿದನು
ಊಹಿಸಲು ಬೇಡೆಂದು ಮುನಿಪತಿ
ಗಾಹಿನಲಿ ಬೇಡೆಂದು ಘನ ಸ
ನ್ನಾಹರೆಚ್ಚಾಡಿದರು ಶಿಶುಪಾಲಕ ಮುರಾಂತಕರು (ಸಭಾ ಪರ್ವ, ೧೧ ಸಂಧಿ, ೭೫ ಪದ್ಯ)

ತಾತ್ಪರ್ಯ:
ನಾರದರು ಧರ್ಮರಾಯನ ಪ್ರಶ್ನೆಯನ್ನು ಉತ್ತರಿಸುತ್ತಾ, ಪರಮಾತ್ಮ ಕೃಷ್ಣನು ನಿಮಗೆ ಜೀವಸ್ನೇಹಿತನಾಗಿರಲು ನಿಮಗೆ ಯಾವ ಚಿಂತೆಯೂ ಬೇಡ. ಈ ಉತ್ಪಾತಗಳು ಶಿಶುಪಾಲನ ವಧೆಗೋ ಇನ್ನೇತಕ್ಕೋ ಎಂದು ಬಲ್ಲವರಾರು? ನೀನು ಊಹಿಸಲು ಹೋಗಬೇಡ ಎಂದು ನಾರದರು ಗಂಭೀರವಾಗಿಯೇ ಧರ್ಮರಾಯನಿಗೆ ಹೇಳಿದರು. ಶಸ್ತ್ರಸನ್ನದ್ಧರಾದ ಶ್ರೀಕೃಷ್ಣ ಶಿಶುಪಾಲರು ಯುದ್ಧ ಮಾಡಿದರು.

ಅರ್ಥ:
ಹರಿ: ವಿಷ್ಣು; ಜೀವ: ಉಸಿರು, ಬದುಕು; ಸ್ನೇಹಿತ: ಮಿತ್ರ; ಚಿಂತೆ: ಯೋಚನೆ; ವಿಮೋಹ: ಭ್ರಮೆ, ಭ್ರಾಂತಿ; ಚೇಷ್ಟೆ: ಚೆಲ್ಲಾಟ; ವಧೆ: ಸಾವು; ಬಲ್ಲರು: ತಿಳಿದವರು; ಊಹೆ: ಎಣಿಕೆ, ಅಂದಾಜು; ಮುನಿ: ಋಷಿ; ಮುನಿಪತಿ: ನಾರದ; ಗಾಹು: ತಿಳುವಳಿಕೆ, ಮೋಸ, ವಂಚನೆ; ಘನ: ಮಹತ್ತ್ವವುಳ್ಳ; ಸನ್ನಾಹ: ಬಂಧನ; ಎಚ್ಚು: ಬಾಣಪ್ರಯೋಗ ಮಾಡು; ಅಂತಕ: ಸಾವು, ಮೃತ್ಯುದೇವತೆ;

ಪದವಿಂಗಡಣೆ:
ಆ +ಹರಿಯೆ +ನಿಮಗಿಂದು +ಜೀವ
ಸ್ನೇಹಿತನು +ನಿಮಗಾವ+ ಚಿಂತೆ +ವಿ
ಮೋಹ +ಚೇಷ್ಟೆಗಳ್+ಇವನ +ವಧೆಗೋ +ಬಲ್ಲರಾರ್+ಇದನು
ಊಹಿಸಲು +ಬೇಡೆಂದು +ಮುನಿಪತಿ
ಗಾಹಿನಲಿ+ ಬೇಡೆಂದು +ಘನ +ಸ
ನ್ನಾಹರ್+ಎಚ್ಚಾಡಿದರು +ಶಿಶುಪಾಲಕ+ ಮುರಾಂತಕರು

ಅಚ್ಚರಿ:
(೧) ಕೃಷ್ಣನ ಲೀಲೆಯನ್ನು ಹೇಳುವ ಪರಿ – ವಿಮೋಹ ಚೇಷ್ಟೆಗಳಿವನ ವಧೆಗೋ ಬಲ್ಲರಾರಿದನು

ನಿಮ್ಮ ಟಿಪ್ಪಣಿ ಬರೆಯಿರಿ