ಪದ್ಯ ೫೩: ಇಂದ್ರನನ್ನು ಯಾರು ಸೋಲಿಸಿದರು?

ಅವರೊಳಗ್ಗದ ಕಾಲನೇಮಿ
ಪ್ರವರನಮರವಿಭಾಡ ವರದಾ
ನವಶಿರೋಮಣಿ ದಿವಿಜನಾಯಕ ಶರಭ ಭೇರುಂಡ
ಬವರದಲಿ ಶಕ್ರಾಗ್ನಿಯಮ ಶಶಿ
ರವಿ ಕುಬೇರ ಸಮೀರಣಾದ್ಯರ
ಸವರಿ ಸಪ್ತಾಂಗವನು ಕೊಂಡನು ಮೇಘವಾಹನನ (ಸಭಾ ಪರ್ವ, ೧೦ ಸಂಧಿ, ೫೩ ಪದ್ಯ)

ತಾತ್ಪರ್ಯ:
ಆ ರಾಕ್ಷಸರಲ್ಲಿ ಕಾಲನೇಮಿಯೆಂಬುವನು ದೇವತೆಗಳನ್ನು ಹೊಡೆದು ರಾಕ್ಷಸರ ನಾಯಕ ಶರಭ ಭೇರುಂಡ ಎಂಬ ಬಿರುದುಳ್ಳವನು, ಅವನು ಯುದ್ಧದಲ್ಲಿ ಇಂದ್ರ, ಅಗ್ನಿ, ಯಮ, ಚಂದ್ರ, ಸೂರ್ಯ, ಕುಬೇರ ವಾಯು ಮೊದಲಾದವರನ್ನು ಬಡಿದು ದೇವೇಂದ್ರನ ರಾಜ್ಯದ ಸಪ್ತಾಂಗಗಳನ್ನು ವಶಪಡಿಸಿಕೊಂಡನು.

ಅರ್ಥ:
ಅಗ್ಗ: ಶ್ರೇಷ್ಠ; ಪ್ರವರ: ಪ್ರಧಾನ ವ್ಯಕ್ತಿ; ಅಮರ: ವಿಭಾಡ: ನಾಶಮಾಡುವವನು; ವರ: ಶ್ರೇಷ್ಠ; ದಾನವ: ರಾಕ್ಷಸ; ಶಿರೋಮಣಿ: ಪ್ರಮುಖ, ಶ್ರೇಷ್ಠನಾದವನು; ದಿವಿಜ: ಸುರರು; ನಾಯಕ: ಒಡೆಯ; ಶರಭ: ನರಸಿಂಹನನ್ನು ಶಾಂತಗೊಳಿಸಲು ಶಿವನು ಧರಿಸಿದ ರೂಪ; ಬವರ: ಯುದ್ಧ; ಶಕ್ರ: ಇಂದ್ರ; ಅಗ್ನಿ: ಬೆಂಕಿ; ಯಮ: ಇಂದ್ರಿಯ ನಿಗ್ರಹ, ಸಂಯಮ, ಮೃತ್ಯುದೇವತೆ; ಶಶಿ: ಚಂದ್ರ; ರವಿ: ಸೂರ್ಯ; ಕುಬೇರ: ಅಷ್ಟದಿಕ್ಪಾಲಕರಲ್ಲಿ ಒಬ್ಬ, ಧನಪತಿ; ಸಮೀರ: ಗಾಳಿ, ವಾಯು; ಆದಿ: ಮುಂತಾದ; ಸವರು: ನಾಶಗೊಳಿಸು; ಸಪಾಂಗ: ಏಳು ಭಾಗ; ಕೊಂಡು: ತೆಗೆದುಕೊಳ್ಳು; ಮೇಘ: ಮೋಡ; ಮೇಘವಾಹನ: ಇಂದ್ರ;

ಪದವಿಂಗಡಣೆ:
ಅವರೊಳ್+ಅಗ್ಗದ +ಕಾಲನೇಮಿ
ಪ್ರವರನ್+ಅಮರ+ವಿಭಾಡ +ವರ+ದಾ
ನವ+ಶಿರೋಮಣಿ +ದಿವಿಜನಾಯಕ+ ಶರಭ+ ಭೇರುಂಡ
ಬವರದಲಿ+ ಶಕ್ರ+ಅಗ್ನಿ+ಯಮ + ಶಶಿ
ರವಿ+ ಕುಬೇರ +ಸಮೀರಣ್+ಆದ್ಯರ
ಸವರಿ+ ಸಪ್ತಾಂಗವನು +ಕೊಂಡನು +ಮೇಘವಾಹನನ

ಅಚ್ಚರಿ:
(೧) ಶಕ್ರ, ಮೇಘವಾಹನ – ಇಂದ್ರನ ಹೆಸರುಗಳು
(೨) ಅಮರ, ದಿವಿಜ – ಸಮನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ