ಕಾದಿದರು ವಿವಿಧಾಸ್ತ್ರ ವಿದ್ಯಾ
ಭೇದದಲಿ ರಥಭಂಗ ಚಾಪವಿ
ಭೇದ ಶಸ್ತ್ರಾಸ್ತ್ರೌಘ ಸಂಹರಣ ಪ್ರಪಂಚದಲಿ
ಈ ದುರಾತ್ಮನ ನಿಲಿಸಿ ನಿಮಿಷದೊ
ಳಾ ದಯಾಂಬುಧಿ ತುಡುಕಿದನು ತ್ರೈ
ವೇದಮಯ ಮೂರ್ತಿತ್ರಯಾತ್ಮಕ ವರ ಸುದರ್ಶನವ (ಸಭಾ ಪರ್ವ, ೧೧ ಸಂಧಿ, ೭೬ ಪದ್ಯ)
ತಾತ್ಪರ್ಯ:
ಶ್ರೀಕೃಷ್ಣ ಶಿಶುಪಾಲರು ಅನೇಕ ಅಸ್ತ್ರಗಳನ್ನು ಪ್ರಯೋಗಿಸಿ ಕಾದಿದರು. ಪರಸ್ಪರ ರಥಗಲನ್ನು ಬಿಲ್ಲುಗಳನ್ನೂ ಕತ್ತರಿಸುವುದು, ಎದುರಾಳಿಗಳ ಶಸ್ತ್ರಾಸ್ತ್ರಗಳನ್ನು ನಾಶಮಾಡುವುದು ಈ ರೀತಿಯಾಗಿ ಬಹಳ ಸಮಯ ಯುದ್ಧವಾಯಿತು. ಶ್ರೀಕೃಷ್ಣನು ಮೂರುವೇದಗಳು, ಮೂರುಮೂರ್ತಿಗಳು ಆತ್ಮವಾದ ಸುದರ್ಶನ ಚಕ್ರವನ್ನು ಹಿಡಿದನು.
ಅರ್ಥ:
ಕಾದಿದರು: ಕಾವಲಿರು, ನೋಡು; ವಿವಿಧ: ಹಲವಾರು; ಅಸ್ತ್ರ: ಶಸ್ತ್ರ, ಆಯುಧ; ವಿದ್ಯ: ಜ್ಞಾನ; ಭೇದ: ಮುರಿ, ಸೀಳು; ರಥ: ಬಂಡಿ; ಭಂಗ: ಮುರಿಯುವಿಕೆ, ಚೂರು ಮಾಡುವಿಕೆ; ಚಾಪ: ಬಿಲ್ಲು; ವಿಭೇದ: ಒಡೆಯುವಿಕೆ, ಬೇರ್ಪಡಿಸುವಿಕೆ; ಔಘ: ಗುಂಪು, ಸಮೂಹ; ಸಂಹರಣ: ಅಳಿವು, ನಾಶ; ಪ್ರಪಂಚ: ಜಗತ್ತು; ದುರಾತ್ಮ: ದುಷ್ಟ; ನಿಲಿಸು: ತಡೆ; ನಿಮಿಷ: ಕ್ಷಣ; ದಯೆ: ಕರುಣೆ; ಅಂಬುಧಿ: ಸಾಗರ; ತುಡುಕು: ಹೋರಾಡು, ಸೆಣಸು; ತ್ರೈ: ಮೂರು; ವೇದ: ಶೃತಿ; ಮೂರ್ತಿ: ಆಕಾರ, ಸ್ವರೂಪ; ಆತ್ಮ: ಜೀವ; ವರ: ಶ್ರೇಷ್ಠ; ಸುದರ್ಶನ: ಕೃಷ್ಣನ ಆಯುಧ, ಚಕ್ರ;
ಪದವಿಂಗಡಣೆ:
ಕಾದಿದರು+ ವಿವಿಧ+ಅಸ್ತ್ರ +ವಿದ್ಯಾ
ಭೇದದಲಿ+ ರಥಭಂಗ +ಚಾಪ+ವಿ
ಭೇದ +ಶಸ್ತ್ರಾಸ್ತ್ರ+ ಔಘ +ಸಂಹರಣ+ ಪ್ರಪಂಚದಲಿ
ಈ +ದುರಾತ್ಮನ +ನಿಲಿಸಿ+ ನಿಮಿಷದೊಳ್
ಆ+ ದಯಾಂಬುಧಿ +ತುಡುಕಿದನು +ತ್ರೈ
ವೇದಮಯ +ಮೂರ್ತಿತ್ರಯಾತ್ಮಕ+ ವರ+ ಸುದರ್ಶನವ
ಅಚ್ಚರಿ:
(೧) ಸುದರ್ಶನದ ವರ್ಣನೆ – ತ್ರೈವೇದಮಯ ಮೂರ್ತಿತ್ರಯಾತ್ಮಕ ವರ ಸುದರ್ಶನವ