ಉರಿಯನುಗುಳುವ ಬಾಣದಲಿ ಕ
ತ್ತರಿಸಿ ಕರ್ಣನನೆಸಲು ಸಮರದ
ಲುರವ ಕೀಲಿಸಿತಂಬು ಗರಿಗಡಿಯಾಗಿ ಗಾಢದಲಿ
ಹರಣ ತೊಲಗದ ಮರ್ಮವನು ಮುರ
ಹರನು ಕಂಡನು ರಥದ ವಾಘೆಯ
ನಿರಿಸಿ ಕರ್ಣನ ಹೊರೆಗೆ ಬಂದನು ವಿಪ್ರವೇಷದಲಿ (ಕರ್ಣ ಪರ್ವ, ೨೭ ಸಂಧಿ, ೧೪ ಪದ್ಯ)
ತಾತ್ಪರ್ಯ:
ಅರ್ಜುನನು ಬಿಟ್ಟ ಅಂಜಲಿಕ ಬಾಣವು ಉರಿಯನ್ನುಗುಳುತ್ತ ಕರ್ಣನ ಎದೆಯನ್ನು ಪೂರ್ಣಭೇದಿಸಿ ಗಟ್ಟಿಯಾಗಿ ನಾಟಿತು. ಆದರೆ ಅವನ ಪ್ರಾಣವು ಹೋಗಲಿಲ್ಲ, ಇದರ ಮರ್ಮವನ್ನು ಅರಿತ ಶ್ರೀಕೃಷ್ಣನು ತನ್ನ ಕುದುರೆಯ ಲಗಾಮನ್ನು ಬಿಟ್ಟು ಬ್ರಾಹ್ಮಣ ವೇಷದಲ್ಲಿ ಕರ್ಣನ ಬಳಿ ಬಂದನು.
ಅರ್ಥ:
ಉರಿ: ಬೆಂಕಿ; ಉಗುಳು: ಹೊರ ಸೂಸು; ಚಿಮ್ಮು; ಬಾಣ: ಶರ; ಕತ್ತರಿಸು: ಸೀಳು; ಎಸಲು: ಚಿಗುರು; ಸಮರ: ಯುದ್ಧ; ಉರ: ಎದೆ, ವಕ್ಷಸ್ಥಳ; ಕೀಲಿಸು: ತಾಟಿತು; ಅಂಬು: ಬಾಣ; ಗರಿಗಡಿ:ಪೂರ್ಣಭೇದಿಸಿ; ಗಾಢ: ಹೆಚ್ಚಳ, ಅತಿಶಯ; ಹರಣ: ಜೀವ, ಪ್ರಾಣ; ತೊಲಗು: ಹೊರಟುಹೋಗು; ಮರ್ಮ: ಒಳ ಅರ್ಥ, ಗುಟ್ಟು; ಮುರಹರ: ಕೃಷ್ಣ; ಕಂಡು: ನೋಡು; ರಥ: ಬಂಡಿ, ತೇರು; ವಾಘೆ: ಲಗಾಮು; ಇರಿಸು: ಇಟ್ಟು; ಹೊರೆ:ಹತ್ತಿರ, ಸಮೀಪ; ಬಂದು: ಆಗಮಿಸು; ವಿಪ್ರ: ಬ್ರಾಹ್ಮಣ; ವೇಷ: ಉಡುಗೆ ತೊಡುಗೆ;
ಪದವಿಂಗಡಣೆ:
ಉರಿಯನ್+ಉಗುಳುವ +ಬಾಣದಲಿ +ಕ
ತ್ತರಿಸಿ +ಕರ್ಣನನ್+ಎಸಲು +ಸಮರದಲ್
ಉರವ+ ಕೀಲಿಸಿತ್+ಅಂಬು +ಗರಿಗಡಿಯಾಗಿ +ಗಾಢದಲಿ
ಹರಣ+ ತೊಲಗದ+ ಮರ್ಮವನು +ಮುರ
ಹರನು +ಕಂಡನು +ರಥದ +ವಾಘೆಯನ್
ಇರಿಸಿ+ ಕರ್ಣನ +ಹೊರೆಗೆ +ಬಂದನು +ವಿಪ್ರವೇಷದಲಿ
ಅಚ್ಚರಿ:
(೧) ಕತ್ತರಿಸಿ, ಇರಿಸಿ – ಪ್ರಾಸ ಪದ
(೨) ಅಂಬು, ಬಾಣ – ಸಮನಾರ್ಥಕ ಪದ