ತೂಳಿದನು ಕಲಿ ಪಾರ್ಥನೀತನ
ಮೇಲೆ ಶಿವಶಿವ ಕಣೆಯ ಕಡೆವಳೆ
ಗಾಲ ತಪ್ಪಲ್ಲೆನುತ ಕಡಿದನು ಕರ್ಣನಂಬುಗಳ
ಮೇಲೆಮೇಲೆಚ್ಚಂಬುಗಳ ಸಲೆ
ಸೀಳಿ ಕರ್ಣಧ್ವಜದ ಕಂಭದ
ಕೂಲ ಮುರಿಯೆಸಲುಡಿದು ಬಿದ್ದುದು ವರ ರಥಾಗ್ರದಲಿ (ಕರ್ಣ ಪರ್ವ, ೨೭ ಸಂಧಿ, ೨ ಪದ್ಯ)
ತಾತ್ಪರ್ಯ:
ಶಿವ ಶಿವಾ, ಅರ್ಜುನನು ಇವನ ಮೇಲೆ ಪ್ರಳಯಕಾಲದ ಮಳೆಯಂತಹ ಬಾಣಗಳ ಮಳೆಯನ್ನು ಸುರಿಸಿದನು. ಕರ್ಣನು ಇದನ್ನು ನೋಡಿ, ಇದರಲ್ಲಿ ತಪ್ಪೇನು ಎಂದು ಹೇಳುತ್ತಾ ಆ ಬಾಣಗಳೆಲ್ಲವನ್ನು ಕಡೆದನು. ಮತ್ತೆ ಅರ್ಜುನನು ಮೇಲೆ ಮೇಲೆ ಬಿಟ್ಟ ಬಾಣಗಳು ಕರ್ಣನ ರಥದ ಧ್ವಜ, ಕಂಬಗಳನ್ನು ಕತ್ತರಿಸಲು, ಅದು ರಥದ ಮೇಲೆ ಮುರಿದು ಬಿತ್ತು.
ಅರ್ಥ:
ತೂಳು: ಆಕ್ರಮಣ; ಮೈದುಂಬು; ಕಲಿ: ಶೂರ; ಕಣೆ: ಬಾಣ; ಕಡೆ: ಕೊನೆ; ಕಡೆವಳೆಗಾಲ: ಪ್ರಳಯಕಾಲದ ಮಳೆ ಕಾಲ; ತಪ್ಪಲ್ಲ: ಸರಿಯಿದೆ; ಕಡಿ: ಸೀಳು; ಅಂಬು: ಬಾಣ; ಸಲೆ: ಒಂದೇ ಸಮನೆ; ಸೀಳು: ಕಡಿ; ಧ್ವಜ: ಬಾವುಟ; ಕಂಬ: ಆಧಾರಕ್ಕೆ ನಿಲ್ಲಿಸುವ ಮರ; ಕೂಲ: ರಾಶಿ, ಮೊತ್ತ; ಮುರಿ: ಸೀಳು; ಎಸು: ಬಾಣ ಪ್ರಯೋಗ ಮಾಡು; ಉಡಿ: ತುಂಡು ಮಾಡು; ಬಿದ್ದು: ಮೇಲೆ ಬೀಳು; ವರ: ಶ್ರೇಷ್ಠ; ರಥ: ಬಂಡಿ; ಅಗ್ರ: ಮೇಲ್ಭಾಗ;
ಪದವಿಂಗಡಣೆ:
ತೂಳಿದನು +ಕಲಿ +ಪಾರ್ಥನ್+ಈತನ
ಮೇಲೆ +ಶಿವಶಿವ+ ಕಣೆಯ+ ಕಡೆವಳೆ
ಕಾಲ+ ತಪ್ಪಲ್ಲ್+ಎನುತ+ ಕಡಿದನು +ಕರ್ಣನಂಬುಗಳ
ಮೇಲೆ+ಮೇಲ್+ಎಚ್ಚ್+ಅಂಬುಗಳ +ಸಲೆ
ಸೀಳಿ +ಕರ್ಣಧ್ವಜದ+ ಕಂಭದ
ಕೂಲ +ಮುರಿ+ಎಸಲ್+ಉಡಿದು+ ಬಿದ್ದುದು +ವರ+ ರಥಾಗ್ರದಲಿ
ಅಚ್ಚರಿ:
(೧) ಕಣೆ, ಅಂಬು – ಸಮನಾರ್ಥಕ ಪದ
(೨) ಕ ಕಾರದ ಜೋಡಿ ಪದಗಳು – ಣೆಯ ಕಡೆವಳೆಗಾಲ; ಕಡಿದನು ಕರ್ಣನಂಬುಗಳ; ರ್ಣಧ್ವಜದ ಕಂಭದ ಕೂಲ
(೩) ಪ್ರಳಯಕಾಲ ಎಂದು ಹೇಳಲು – ಕಡೆವಳೆಗಾಲ ಪದದ ಪ್ರಯೋಗ