ಪದ್ಯ ೪೮: ಕರ್ಣನು ಹೇಗೆ ಯುದ್ಧಕ್ಕೆ ಮರುಳಿದನು?

ನೋಡಿದನು ಕೆಲಬಲನನುಗಿದೀ
ಡಾಡಿದನು ನಟ್ಟಂಬುಗಳ ಹರಿ
ಜೋಡಬಿಟ್ಟನು ತೊಳೆದನಂಗೋಪಾಂಗ ಶೋಣಿತವ
ಕೂಡೆ ಕಸ್ತುರಿಗಂಧದಲಿ ಮುಳು
ಗಾಡಿ ದಿವ್ಯದುಕೂಲದಲಿ ಮೈ
ಗೂಡಿ ಮೆರೆದನು ಕರ್ಣನನುಪಮ ತೀವ್ರತೇಜದಲಿ (ಕರ್ಣ ಪರ್ವ, ೨೪ ಸಂಧಿ, ೪೮ ಪದ್ಯ)

ತಾತ್ಪರ್ಯ:
ಕರ್ಣನು ತನ್ನ ಮೂರ್ಛೆಯಿಂದ ಎಚ್ಚೆತ್ತು, ಅಕ್ಕಪಕ್ಕದಲ್ಲಿ ತನ್ನ ಸೈನ್ಯವನ್ನು ನೋಡಿ, ತನ್ನ ಮೈಗೆ ನೆಟ್ಟಿದ ಬಾಣಗಳನ್ನು ಕಿತ್ತು, ಹರಿದ ಕವಚವನ್ನು ತೆಗೆದುಕಾಕಿ, ಅಂಗೋಪಾಂಗಗಳಿಗೆ ಅಂಟಿದ್ದ ರಕ್ತವನ್ನು ತೊಳೆದು, ಕಸ್ತೂರಿ ಗಂಧವನ್ನು ಲೇಪಿಸಿಕೊಂಡು, ಹೊಸ ಬಟ್ಟೆಯನ್ನುಟ್ಟು ತೇಜಸ್ಸಿನಿಂದ ಕರ್ಣನು ಹೊಳೆದನು.

ಅರ್ಥ:
ನೋಡು: ವೀಕ್ಷಿಸು; ಕೆಲ: ಸ್ವಲ್ಪ; ಬಲ: ಸೈನ್ಯ; ಉಗಿದು: ಹೊರಹಾಕು; ಈಡಾಡು: ಕಿತ್ತು, ಒಗೆ, ಚೆಲ್ಲು; ನಟ್ಟ: ಚುಚ್ಚಿದ; ಅಂಬು: ಬಾಣ; ಹರಿ: ಸೀಳಿದ; ಜೋಡು: ಕವಚ; ಬಿಟ್ಟನು: ತೊರೆ; ತೊಳೆ: ಸ್ವಚ್ಛಗೊಳಿಸು; ಅಂಗೋಪಾಂಗ: ಅಂಗಗಳು; ಶೋಣಿತ: ರಕ್ತ; ಕೂಡು: ಸೇರು ; ಕಸ್ತುರಿ: ಸುಗಂಧ ದ್ರವ್ಯ; ಗಂಧ: ಚಂದನ; ಮುಳುಗು: ತೋಯು; ದಿವ್ಯ: ಶ್ರೇಷ್ಠ; ದುಕೂಲ: ಬಟ್ಟೆ; ಮೈಗೂಡಿ: ತೊಟ್ಟು; ಮೆರೆ: ಹೊಳೆ, ಅನುಪಮ: ಹೋಲಿಕೆಗೆ ಮೀರಿದ; ತೀವ್ರ: ಹೆಚ್ಚಾದ, ಅಧಿಕ; ತೇಜ: ಕಾಂತಿ;

ಪದವಿಂಗಡಣೆ:
ನೋಡಿದನು+ ಕೆಲಬಲನನ್+ಉಗಿದ್
ಈಡಾಡಿದನು +ನಟ್ಟ್+ಅಂಬುಗಳ+ ಹರಿ
ಜೋಡ+ಬಿಟ್ಟನು +ತೊಳೆದನ್+ಅಂಗೋಪಾಂಗ +ಶೋಣಿತವ
ಕೂಡೆ +ಕಸ್ತುರಿ+ಗಂಧದಲಿ+ ಮುಳು
ಗಾಡಿ +ದಿವ್ಯ+ದುಕೂಲದಲಿ +ಮೈ
ಗೂಡಿ +ಮೆರೆದನು +ಕರ್ಣನನ್+ಅನುಪಮ +ತೀವ್ರ+ತೇಜದಲಿ

ಅಚ್ಚರಿ:
(೧) ನೋಡಿ, ಈಡಾಡಿ, ಮೈಗೂಡಿ, ಮುಳುಗಾಡಿ – ಪ್ರಾಸ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ