ಬಾಣಹತಿಗಕ್ಕುಡಿಸಿ ರಾಜ್ಯ
ಶ್ರೇಣಿ ಜರುಗಿತು ಶೌರ್ಯನಗರದ
ವಾಣಿಯರು ಹೊಕ್ಕಿರಿದು ಹೋಗಾಡಿದರು ಪತಿರಿಣವ
ಗೋಣಕೊಯ್ಲಿನ ಕಾವಣಕೆ ಮುಂ
ಗೇಣಿಕಾರನು ಮೊಳಗಿದನು ಫಡ
ಕೇಣವಿನ್ನೇಕೆನುತ ಕೈದೋರಿತು ಭಟಸ್ತೋಮ (ಕರ್ಣ ಪರ್ವ, ೨೪ ಸಂಧಿ, ೪೨ ಪದ್ಯ)
ತಾತ್ಪರ್ಯ:
ಬಾಣಗಳ ಹೊಡೆತಕ್ಕೆ ನಡುಗಿ ರಾಜ್ಯವು ಕೈಬಿಡುವ ಸ್ಥಿತಿಗೆ ತಲುಪಿದೆ, ಈ ಶೌರ್ಯನಗರದ ವಣಿಜರು ಪರಾಕ್ರಮದಿಂದ ಹೋರಾಡಿ ತಮ್ಮ ಒಡೆಯನ ಋಣವನ್ನು ತೀರಿಸಿದರು. ಕತ್ತುಗಳ ಕಡಿತದ ಚಪ್ಪರಕ್ಕೆ ಗೇಣಿಕಾರನಾದ ಅರ್ಜುನನು ಬಂದಿದ್ದಾನೆ, ಇನ್ನೇಕೆ ಸಂಕೋಚ ಎಂದುಕೊಂಡು ವೀರರು ಹೋರಾಡಿದರು.
ಅರ್ಥ:
ಬಾಣ: ಶರ; ಹತಿ: ಹೊಡೆತ; ಅಕ್ಕು: ಆಗುತ್ತದೆ; ರಾಜ್ಯ: ರಾಷ್ಟ್ರ; ಶ್ರೇಣಿ:ಪಂಕ್ತಿ, ಸಾಲು, ಗುಂಪು; ಜರುಗು: ಪಕ್ಕಕ್ಕೆ ಸರಿ, ಜರಿ; ಶೌರ್ಯ: ಧೈರ್ಯ; ನಗರ: ಊರು; ವಾಣಿ: ಮಾತು; ವಣಿ: ವ್ಯಾಪಾರಿ; ಹೊಕ್ಕು: ಸೇರು; ಇರಿ: ಚುಚ್ಚು; ಹೋಗಾಡು: ಕಳೆದುಹಾಕು; ಪತಿ: ಒಡೆಯ; ರಿಣ: ಹಂಗು; ಗೋಣು: ಕುತ್ತಿಗೆ, ಗಳ; ಕೊಯ್ಲು: ಕೊಯ್ಯುವಿಕೆ ಕಟಾವು; ಕಾವಣ: ಹಂದರ, ಚಪ್ಪರ; ಗೇಣಿಕಾರ: ; ಮೊಳಗು: ಧ್ವನಿಮಾಡು, ಶಬ್ದ ಮಾಡು; ಫಡ: ತಿರಿಸ್ಕಾರದ ಮಾತು; ಕೇಣ: ಮತ್ಸರ, ಕೋಪ; ಕೈದೋರು: ಹೋರಾಡು; ಭಟ: ಸೈನಿಕ; ಸ್ತೋಮ: ಗುಂಪು;
ಪದವಿಂಗಡಣೆ:
ಬಾಣಹತಿಗ್+ಅಕ್ಕುಡಿಸಿ +ರಾಜ್ಯ
ಶ್ರೇಣಿ +ಜರುಗಿತು +ಶೌರ್ಯನಗರದ
ವಾಣಿಯರು +ಹೊಕ್ಕಿರಿದು+ ಹೋಗಾಡಿದರು+ ಪತಿರಿಣವ
ಗೋಣ+ಕೊಯ್ಲಿನ +ಕಾವಣಕೆ +ಮುಂ
ಗೇಣಿಕಾರನು+ ಮೊಳಗಿದನು +ಫಡ
ಕೇಣವಿನ್ನೇಕೆನುತ+ ಕೈದೋರಿತು+ ಭಟಸ್ತೋಮ
ಅಚ್ಚರಿ:
(೧) ಉಪಮಾನದ ಪ್ರಯೋಗ – ಶೌರ್ಯನಗರದ ವಾಣಿಯರು ಹೊಕ್ಕಿರಿದು ಹೋಗಾಡಿದರು ಪತಿರಿಣವ