ಸೇರುವುದು ಭೀಮನಲಿ ಸಾಹಂ
ಕಾರನಾತನ ಕೊಂಡು ನಡೆವುದು
ಕಾರಣಿಕೆ ನೀನಾದಡೀ ಸಹದೇವ ನಕುಲರನು
ಆರಯಿದು ಸಲಹುವುದು ದ್ರುಪದಕು
ಮಾರಿಯನು ಬೇಸರಿಸದೀ ಪರಿ
ವಾರವನು ಮನ್ನಿಸುವುದರ್ಜುನದೇವ ಕೇಳೆಂದ (ಕರ್ಣ ಪರ್ವ, ೧೭ ಸಂಧಿ, ೪೪ ಪದ್ಯ)
ತಾತ್ಪರ್ಯ:
ಎಲೈ ಅರ್ಜುನನೇ, ಭೀಮನು ಅಹಂಕಾರಿ, ಅವನೊಂದಿಗೆ ಹೊಂದಿಕೊಂಡು ಹೋಗು, ನಿನ್ನಲ್ಲಿ ಕರುಣೆಯಿದ್ದರೆ ನಕುಲ ಸಹದೇವರನ್ನು ಚೆನ್ನಾಗಿ ನೋಡಿಕೋ, ದ್ರುಪದನ ಮಗಳಾದ ದ್ರೌಪದಿಯನ್ನು ಬೇಸರವಾಗದಂತೆ ನೋಡಿಕೋ, ಈ ಪರಿವಾರವನ್ನು ಸಲಹಿ ಕಾಪಾಡು ಎಂದು ಹೇಳಿದನು.
ಅರ್ಥ:
ಸೇರು: ಜೊತೆಯಾಗು; ಅಹಂಕಾರ: ದರ್ಪ, ಗರ್ವ; ಕೊಂಡು: ತೆಗೆದು; ಕಾರಣಿಕ: ಗುರು, ವಿಮರ್ಶಕ; ಆರಯಿದು: ಆರೈಕೆ, ನೋಡಿಕೊಂಡು; ಸಲಹು: ಕಾಪಾಡು; ಕುಮಾರಿ: ಪುತ್ರಿ; ಬೇಸರ: ನೋವು; ಪರಿವಾರ: ಸಂಸಾರ; ಮನ್ನಿಸು: ಗೌರವಿಸು, ಮರ್ಯಾದೆ ಮಾಡು; ಕೇಳು: ಆಲಿಸು;
ಪದವಿಂಗಡಣೆ:
ಸೇರುವುದು +ಭೀಮನಲಿ +ಸ+ಅಹಂ
ಕಾರನ್+ಆತನ +ಕೊಂಡು +ನಡೆವುದು
ಕಾರಣಿಕೆ+ ನೀನಾದಡೀ +ಸಹದೇವ+ ನಕುಲರನು
ಆರಯಿದು+ ಸಲಹುವುದು+ ದ್ರುಪದ+ಕು
ಮಾರಿಯನು +ಬೇಸರಿಸದ್+ಈ+ ಪರಿ
ವಾರವನು +ಮನ್ನಿಸುವುದ್+ಅರ್ಜುನದೇವ +ಕೇಳೆಂದ
ಅಚ್ಚರಿ:
(೧) ಸೇರು, ಸಲಹು, ಮನ್ನಿಸು, ಬೇಸರಿಸದೆ, ನಡೆವುದು – ಧರ್ಮಜನು ಉಪದೇಶದ ಮಾತುಗಳು