ಪದ್ಯ ೫೪: ಧರ್ಮಜನನ್ನು ಕರ್ಣನು ಹೇಗೆ ಬೀಳಿಸಿದನು?

ಕೆದರಿದನು ಮಾರ್ಗಣೆಯೊಳರಸನ
ಹೊದಿಸಿದನು ಹುಸಿಯೇಕೆ ರಾಯನ
ಹುದಿದ ಕವಚವ ಭೇದಿಸಿದವೊಳಬಿದ್ದವಂಬುಗಳು
ಎದೆಯೊಳೌಕಿದ ಬಾಣ ಬೆನ್ನಲಿ
ತುದಿ ಮೊನೆಯ ತೋರಿದವು ಪೂರಾ
ಯದ ವಿಘಾತಿಯಲರಸ ಕಳವಳಿಸಿದನು ಕಂಪಿಸುತ (ಕರ್ಣ ಪರ್ವ, ೧೧ ಸಂಧಿ, ೫೪ ಪದ್ಯ)

ತಾತ್ಪರ್ಯ:
ಕರ್ಣನು ಬಾಣಗಳನ್ನು ಕೆದರಿ ಧರ್ಮಜನನ್ನು ಬಾಣಗಳಿಂದ ಹೊದಿಸಿದನು. ಕರ್ಣನ ಬಾಣಗಳು ಅರಸನ ಕವಚವನ್ನು ಭೇದಿಸಿ ಒಳಹೊಕ್ಕವು. ಕೆಲವು ಎದೆಗೆ ನಟ್ಟು ಬೆನ್ನಿನಲ್ಲಿ ಮೊನೆಯು ಕಾಣಿಸಿತು. ಬಲವಾದ ಪೆಟ್ಟು ಪೂರ್ಣವಾಗಿ ಬೀಳಲು, ಧರ್ಮಜನು ನಡುಗಿ ಕಳವಳಿಸಿದನು.

ಅರ್ಥ:
ಕೆದರು: ಹರಡು, ಚದರಿಸು; ಮಾರ್ಗಣೆ:ಪ್ರತಿಯಾಗಿ ಬಿಡುವ ಬಾಣ, ಎದುರು ಬಾಣ; ಅರಸ: ರಾಜ; ಹೊದಿಸು: ಮುಚ್ಚು, ಆವರಿಸು; ಹುಸಿ: ಸುಳ್ಳು; ರಾಯ: ರಾಜ; ಹುದಿ:ಆವೃತವಾಗು, ಒಳಸೇರು; ಕವಚ: ಹೊದಿಕೆ, ಉಕ್ಕಿನ ಅಂಗಿ; ಭೇದಿಸು: ಛಿದ್ರ, ಸೀಳು; ಅಂಬು: ಬಾಣ; ಎದೆ: ವಕ್ಷ; ಔಕು: ಒತ್ತು; ಬಾಣ: ಶರ; ಬೆನ್ನು: ಹಿಂಬದಿ; ತುದಿ: ಅಗ್ರಭಾಗ; ಮೊನೆ: ಚೂಪು; ತೋರು: ಕಾಣಿಸು; ಪೂರಾಯದ: ಪೂರ್ಣವಾಗಿ; ವಿಘಾತಿ: ಹೊಡೆತ, ವಿರೋಧ; ಕಳವಳ: ತಳಮಳ, ಚಿಂತೆ; ಕಂಪಿಸು: ನಡುಗು;

ಪದವಿಂಗಡಣೆ:
ಕೆದರಿದನು +ಮಾರ್ಗಣೆಯೊಳ್+ಅರಸನ
ಹೊದಿಸಿದನು+ ಹುಸಿಯೇಕೆ+ ರಾಯನ
ಹುದಿದ +ಕವಚವ +ಭೇದಿಸಿದವ್+ಒಳಬಿದ್ದವ್+ಅಂಬುಗಳು
ಎದೆಯೊಳ್+ಔಕಿದ +ಬಾಣ +ಬೆನ್ನಲಿ
ತುದಿ +ಮೊನೆಯ +ತೋರಿದವು+ ಪೂರಾ
ಯದ +ವಿಘಾತಿಯಲ್+ಅರಸ +ಕಳವಳಿಸಿದನು +ಕಂಪಿಸುತ

ಅಚ್ಚರಿ:
(೧) ಕೆದರು, ಹೊದಿಸು, ಭೇದಿಸು, ಔಕು, ವಿಘಾತಿ – ಹೋರಟವನ್ನು ವಿವರಿಸುವ ಪದಗಳು
(೨) ರಾಯ, ಅರಸ; ಬಾಣ, ಅಂಬು – ಸಮಾನಾರ್ಥಕ ಪದಗಳು
(೩) ಬಾಣದ ತೀವ್ರತೆಯನ್ನು ವಿವರಿಸುವ ಬಗೆ – ಎದೆಯೊಳೌಕಿದ ಬಾಣ ಬೆನ್ನಲಿ
ತುದಿ ಮೊನೆಯ ತೋರಿದವು

ನಿಮ್ಮ ಟಿಪ್ಪಣಿ ಬರೆಯಿರಿ