ಕಾಲಿಡುವಡಿದು ದುರ್ಗವೆನುತಾ
ಸಾಲ ಬಿಟ್ಟನು ದಕ್ಷಿಣಕೆ ದು
ವ್ವಾಳಿಸಿದನಾ ರಥವನವನೀಪತಿಯ ಮೋಹರಕೆ
ಏಳು ಕಲಿಯಾಗಿನ್ನು ಕೆಲಬಲ
ದಾಳ ಹಾರದಿರೆನುತ ರಾಯನ
ಮೇಲೆ ಕರೆದನು ಕರ್ಣ ಖತಿಯಲಿ ಕಣೆಯ ಬಿರುವಳೆಯ (ಕರ್ಣ ಪರ್ವ, ೧೧ ಸಂಧಿ, ೨೪ ಪದ್ಯ)
ತಾತ್ಪರ್ಯ:
ಮುಂದೆ ರಥವನ್ನು ನಡೆಸುವುದು ಕಷ್ಟಸಾಧನವೆಂದು ತಿಳಿದ ಶಲ್ಯನು ರಥವನ್ನು ಬಲಕ್ಕೆ ನಡೆಸಿದನು. ನೇರವಾಗಿ ಧರ್ಮರಾಯನ ಸೈನ್ಯವನ್ನು ಹೊಕ್ಕನು, ಧರ್ಮರಾಯನನ್ನು ನೋಡಿದ ಕರ್ಣನು, ಏಳು ಧರ್ಮರಾಯ ವೀರನಾಗು, ಅವರಿವರ ಸಹಾಯವನ್ನು ಕಾದುಕುಳಿತುಕೊಳ್ಳಬೇಡ ಎನ್ನುತ್ತಾ ಮಹಾಕೋಪದಿಂದ ಅವನ ಮೇಲೆ ಬಾಣಗಳ ಮಳೆಗೆರೆದನು.
ಅರ್ಥ:
ಕಾಲು: ಪಾದ; ಕಾಲಿಡು: ಮೆಟ್ಟು; ದುರ್ಗ: ಕಷ್ಟ; ಸಾಲ: ಮಾರ್ಗ, ಬದಿ; ಬಿಟ್ಟು: ತೊರೆದು; ದಕ್ಷಿಣ; ಬಲಭಾಗ; ದುವ್ವಾಳಿ: ತೀವ್ರಗತಿ, ವೇಗ; ರಥ: ಬಂಡಿ, ತೇರು; ಅವನೀಪತಿ: ರಾಜ; ಅವನಿ: ಭೂಮಿ; ಮೋಹರ: ಯುದ್ಧ; ಏಳು: ನಿಲ್ಲು; ಕಲಿ: ಶೂರ; ಕೆಲಬಲ: ಬೇರೆಯವರ ಶಕ್ತಿ; ದಾಳ: ಕೈಗೊಂಬೆ, ಪಗಡೆಯಾಟದ ಸಾಧನ; ಹಾರು: ಬಯಸು; ರಾಯ: ರಾಜ; ಕರೆ: ಬರೆಮಾಡು; ಖತಿ: ಕೋಪ; ಕಣೆ:ಬಾಣ; ಬಿರು: ವೇಗ; ವಳೆ: ಮಳೆ;
ಪದವಿಂಗಡಣೆ:
ಕಾಲಿಡುವ್+ಅಡಿದು +ದುರ್ಗವ್+ಎನುತ್+ಆ+
ಸಾಲ+ ಬಿಟ್ಟನು +ದಕ್ಷಿಣಕೆ+ ದು
ವ್ವಾಳಿಸಿದನ್ +ಆ+ ರಥವನ್+ಅವನೀಪತಿಯ +ಮೋಹರಕೆ
ಏಳು +ಕಲಿಯಾಗಿನ್ನು +ಕೆಲಬಲ
ದಾಳ +ಹಾರದಿರ್+ಎನುತ +ರಾಯನ
ಮೇಲೆ +ಕರೆದನು +ಕರ್ಣ +ಖತಿಯಲಿ +ಕಣೆಯ +ಬಿರುವಳೆಯ
ಅಚ್ಚರಿ:
(೧) ಅವನೀಪತಿ, ರಾಯ – ಸಮನಾರ್ಥಕ ಪದ
(೨) ಧರ್ಮರಾಯನಿಗೆ ಕರ್ಣನ ಕಠೋರ ನುಡಿ – ಏಳು ಕಲಿಯಾಗಿನ್ನು ಕೆಲಬಲ ದಾಳ ಹಾರದಿರ್
(೩) ಬಾಣದ ಮಳೆಗೆರೆದನು ಎಂದು ಹೇಳಲು – ರಾಯನ ಮೇಲೆ ಕರೆದನು ಕರ್ಣ ಖತಿಯಲಿ ಕಣೆಯ ಬಿರುವಳೆಯ