ತಮ್ಮ ಸತ್ವೋದಧಿಯ ತೋರಿದ
ರೊಮ್ಮೆ ಮೊಗೆದನು ಬಳಿಕ ರಾಯನ
ಸೊಮ್ಮಿನವರಲಿ ಸೀಳಿದನು ಹದಿನೆಂಟು ಸಾವಿರವ
ಹಮ್ಮುಗೆಯ ಕೈಮನದ ಹೊಣಕೆಯ
ಹಮ್ಮಿನುಬ್ಬಟೆಯವರ ಪಾರ್ಥನ
ತಮ್ಮದಿರ ಸಾಹಸಕೆ ಸೇರಿಸಿದನು ಪಲಾಯನವ (ಕರ್ಣ ಪರ್ವ, ೧೦ ಸಂಧಿ, ೨೯ ಪದ್ಯ)
ತಾತ್ಪರ್ಯ:
ಪಾಂಡವರ ಸೇನೆಯ ಸತ್ವಸಮುದ್ರವನ್ನು ಕರ್ಣನು ದಾಳಿಯಿಟ್ಟು ಸೀಳಿದನು, ಧರ್ಮಜನ ಆಪ್ತರಾದ ಹದಿನೆಂಟು ಸಾವಿರ ಸೈನಿಕರನ್ನು ಸೀಳಿ ಹಾಕಿದನು ಕೈ ಚಳಕ ಮನಸ್ಸಿನ ನಿರ್ಧಾರಗಳಿಂದ ಅಹಂಕರಿಸಿ ಕಾದಿದವರನ್ನು ನಕುಲ ಸಹದೇವರೊಡನೆ ಓಡಿ ಹೋಗುವಂತೆ ಮಾಡಿದನು.
ಅರ್ಥ:
ಸತ್ವ:ಶಕ್ತಿ, ಬಲ; ಉದಧಿ: ಸಮುದ್ರ; ತೋರು: ಕಾಣು; ಮೊಗೆ:ದಾಳಿಯಿಡು, ಆಕ್ರಮಿಸು; ಬಳಿಕ: ನಂತರ; ರಾಯ: ರಾಜ; ಸೊಮ್ಮು: ಸ್ವತ್ತು, ಸೊಬಗು; ಸೀಳು: ಚೂರು, ತುಂಡು; ಸಾವಿರ: ಸಹಸ್ರ; ಹಮ್ಮುಗೆ: ಹಗ್ಗ, ಪಾಶ; ಕೈ: ಹಸ್ತ, ಕರ; ಮನ: ಮನಸ್ಸು; ಹೊಣಕೆ: ಯುದ್ಧ, ಕಾಳಗ; ಹಮ್ಮು: ಅಹಂಕಾರ; ಉಬ್ಬಟೆ: ಅತಿಶಯ, ಹಿರಿಮೆ; ತಮ್ಮ: ಅನುಜ; ಸಾಹಸ: ಪರಾಕ್ರಮ, ಶೌರ್ಯ; ಸೇರಿಸು: ಜೋಡಿಸು; ಪಲಾಯನ: ಓಡುವಿಕೆ, ಪರಾರಿ;
ಪದವಿಂಗಡಣೆ:
ತಮ್ಮ +ಸತ್ವ+ಉದಧಿಯ +ತೋರಿದರ್
ಒಮ್ಮೆ +ಮೊಗೆದನು +ಬಳಿಕ+ ರಾಯನ
ಸೊಮ್ಮಿನವರಲಿ +ಸೀಳಿದನು+ ಹದಿನೆಂಟು +ಸಾವಿರವ
ಹಮ್ಮುಗೆಯ +ಕೈಮನದ+ ಹೊಣಕೆಯ
ಹಮ್ಮಿನ್+ಉಬ್ಬಟೆಯವರ +ಪಾರ್ಥನ
ತಮ್ಮದಿರ+ ಸಾಹಸಕೆ+ ಸೇರಿಸಿದನು +ಪಲಾಯನವ
ಅಚ್ಚರಿ:
(೧) ಸತ್ವೋದಧಿಯ – ಪದಬಳಕೆ
(೨) ಹಿಮ್ಮೆಟ್ಟಿಸಿದನು ಎಂದು ಹೇಳಲು – ಸಾಹಸಕೆ ಸೇರಿಸಿದನು ಪಲಾಯನವ