ಎರಡು ಗಲ್ಲದ ನಯನವಾರಿಯ
ಹರಿಕುಣಿಯ ನಿಲಿಸಿದನು ಸಂಜಯ
ನರಸನನು ಕುಳ್ಳಿರಿಸಿ ಬೆನ್ನಿಗೆ ಚಾಚಿದನು ಮಲಗ
ಅರಸ ಹದುಳಿಸು ನಿನ್ನ ಸೊಸೆಯರ
ಕರೆದು ಸಂತೈಸಕಟ ಹಸ್ತಿನ
ಪುರದ ಗಾವಳಿ ಗಜಬಜಕೆ ಡಂಗುರವ ಹೊಯ್ಸೆಂದ (ಕರ್ಣ ಪರ್ವ, ೧ ಸಂಧಿ, ೯ ಪದ್ಯ)
ತಾತ್ಪರ್ಯ:
ಧೃತರಾಷ್ಟ್ರನು ದುಃಖತಪ್ತನಾಗಿರಲು ಗಲ್ಲದ ಮೇಲೆ ಅವನೆರಡು ಕಣ್ಣುಗಳಿಂದ ಕಣ್ಣೀರು ಹರಿಯುತ್ತಿರಲು ಸಂಜಯನು ಅದನ್ನು ಒರಸಿ ಆತನನ್ನು ಸಮಾಧಾನ ಪಡಿಸಿ ಮಂಚದ ಮೇಲೆ ಕುಳ್ಳಿಸಿಸಿ ಒರಗಲು ದಿಂಬನ್ನಿಟ್ಟನು. ರಾಜಾ ಎಚ್ಚೆತ್ತುಕೋ, ನಿನ್ನ ಸೊಸೆಯರನ್ನು ಕರೆದು ಸಮಾಧಾನ ಪಡಿಸು, ಊರಿನಲ್ಲಿ ಡಂಗುರವನ್ನು ಹೊರಡಿಸಿ ಗುಂಪು ಗದ್ದಲವನ್ನು ನಿಲ್ಲಿಸು ಎಂದು ತಿಳಿಸಿದನು.
ಅರ್ಥ:
ಎರಡು: ದ್ವಂದ್ವ; ಗಲ್ಲ: ಕದಪು, ಕೆನ್ನೆ; ನಯನ: ಕಣ್ಣು; ವಾರಿ: ನೀರು; ಹರಿಕುಣಿ: ಕಾಲುವೆ; ನಿಲಿಸು: ತಡೆ; ಅರಸ: ರಾಜ; ಕುಳ್ಳಿರಿ: ಆಸೀನರಾಗು; ಬೆನ್ನು: ಹಿಂಬಾಗ; ಚಾಚಿ: ಹರಡು; ಮಲಗ: ದಿಂಬು; ಹದುಳಿಸು: ಸಮಾಧಾನ ಗೊಳ್ಳು; ಸೊಸೆ: ಮಗನ ಹೆಂಡತಿ; ಕರೆ: ಬರೆಮಾಡಿ; ಸಂತೈಸು: ಸಾಂತ್ವಾನ; ಅಕಟ: ಅಯ್ಯೋ; ಆವಳಿ: ಸಾಲು; ಗಜಬಜ: ಗೊಂದಲ; ಡಂಗುರ: ಪ್ರಕಟಣೆ; ಹೊಯ್ಸು: ಹೊರಡಿಸು; ಗಾವಳಿ: ಘೋಷಣೆ, ರಂಪ;
ಪದವಿಂಗಡಣೆ:
ಎರಡು +ಗಲ್ಲದ +ನಯನ+ವಾರಿಯ
ಹರಿಕುಣಿಯ +ನಿಲಿಸಿದನು +ಸಂಜಯನ್
ಅರಸನನು +ಕುಳ್ಳಿರಿಸಿ +ಬೆನ್ನಿಗೆ +ಚಾಚಿದನು +ಮಲಗ
ಅರಸ +ಹದುಳಿಸು +ನಿನ್ನ +ಸೊಸೆಯರ
ಕರೆದು +ಸಂತೈಸ್+ಅಕಟ +ಹಸ್ತಿನ
ಪುರದ +ಗಾವಳಿ+ ಗಜಬಜಕೆ+ ಡಂಗುರವ +ಹೊಯ್ಸೆಂದ
ಅಚ್ಚರಿ:
(೧) ಕಣ್ಣೀರಿನ ವರ್ಣನೆ: ಎರಡು ಗಲ್ಲದ ನಯನವಾರಿಯ ಹರಿಕುಣಿಯ
(೨) ಸಂತೈಸುವ ಪರಿ – ಅರಸನನು ಕುಳ್ಳಿರಿಸಿ ಬೆನ್ನಿಗೆ ಚಾಚಿದನು ಮಲಗ