ಜಾರನನು ಕಂಟಕನ ಹಿಸುಣನ
ಚೋರನನು ಷಂಡನನು ಸಮಯ ವಿ
ಕಾರ ಭೇದಿಯ ನಿಂತರುವರನು ಕಂಡು ಮನ್ನಿಸದೆ
ದೂರದೊಳು ವರ್ಜಿಸುವುದು ಬಹಿ
ಷ್ಕಾರಿಗಳು ಸ್ವರಕ್ಕಿವರುಗಳು
ಸಾರವಿದು ಸತ್ಪುರುಷರಭಿಮತವೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೪೭ ಪದ್ಯ)
ತಾತ್ಪರ್ಯ:
ಕಾಮುಕ, ಶತ್ರು, ಚಾಡಿಕೋರ, ಸಮಯ ಬಂದಾಗ ಕೇಡುಬಗೆಯುವವ, ಕಳ್ಳ, ಷಂಡ ಈ ಆರು ಬಗೆಯ ಜನರನ್ನು ದೂರದಲ್ಲೇ ಇಡಬೇಕು ಮತ್ತು ಬಹಿಷ್ಕರಿಸಬೇಕು ಎಂಬುದು ಸತ್ಪುರುಷರ ಅಭಿಪ್ರಾಯವೆಂದು ಸನತ್ಸುಜಾತರು ತಿಳಿಸಿದರು.
ಅರ್ಥ:
ಜಾರ: ವ್ಯಭಿಚಾರಿ, ಹಾದರಿಗ, ಕಾಮುಕ; ಕಂಟಕ: ವಿಪತ್ತು; ಹಿಸುಣ:ಚಾಡಿ, ಕುತ್ಸಿತ; ಚೋರ: ಕಳ್ಳ; ಷಂಡ: ನಪುಂಸಕ, ಕೊಜ್ಜೆ, ಹೇಡಿ, ದುರ್ಬಲ; ಸಮಯ: ಕಾಲ; ವಿಕಾರ: ಬದಲಾವಣೆ, ಮಾರ್ಪಾಟು, ಮನಸ್ಸಿನ ವಿಕೃತಿ; ಭೇದಿ: ಒಡೆಯುವವ, ಸೀಳುವವ; ಅರುವರ: ಆರುರೀತಿಯ; ಕಂಡು: ನೋಡಿ; ಮನ್ನಿಸು: ಅಂಗೀಕರಿಸು, ದಯಪಾಲಿಸು; ದೂರ: ಬಹಳ ಅಂತರ; ವರ್ಜಿಸು:ಬಿಡು, ತ್ಯಜಿಸು; ಬಹಿಷ್ಕಾರ: ಹೊರಹಾಕುವಿಕೆ; ಸರ್ವ: ಎಲ್ಲಾ; ಸಾರ: ರಸ; ಸತ್ಪುರುಷ: ಒಳ್ಳೆಯ ಜನ; ಮುನಿ: ಋಷಿ;
ಪದವಿಂಗಡಣೆ:
ಜಾರನನು +ಕಂಟಕನ +ಹಿಸುಣನ
ಚೋರನನು +ಷಂಡನನು +ಸಮಯ +ವಿ
ಕಾರ +ಭೇದಿಯ +ನಿಂತರುವರನು +ಕಂಡು +ಮನ್ನಿಸದೆ
ದೂರದೊಳು +ವರ್ಜಿಸುವುದು +ಬಹಿ
ಷ್ಕಾರಿಗಳು +ಸ್ವರಕ್ಕ್+ಇವರುಗಳು
ಸಾರವಿದು+ ಸತ್ಪುರುಷರ್+ಅಭಿಮತವೆಂದನಾ +ಮುನಿಪ
ಅಚ್ಚರಿ:
(೧) ೬ ರೀತಿಯ ಜನರನ್ನು ವಿವರಿಸುವ ಪದ್ಯ – ಜಾರ, ಕಂಟಕ, ಹಿಸುಣ, ಚೋರ, ಷಂಡ, ವಿಕಾರಿ