ಮೊದಲೊಳಮಲ ಬ್ರಹ್ಮಚರ್ಯವು
ಮದುವೆಯಾಯಿತು ಬಳಿಕ ವನವಾ
ಸದೊಳು ವಾನ ಪ್ರಸ್ಥವೆಂಬಾಶ್ರಮವನಳವಡಿಸಿ
ತುದಿಗೆ ತಾಂ ಸನ್ಯಾಸವನು ಮಾ
ಡಿದನು ಮತ್ತಳುಪುವೊಡೆ ರಾಜ್ಯದ
ಪದವಿಗನುಚಿತವಾಯ್ತು ಯಮಜಂಗೆಂದು ಹೇಳೆಂದ (ಉದ್ಯೋಗ ಪರ್ವ, ೨ ಸಂಧಿ, ೩೯ ಪದ್ಯ)
ತಾತ್ಪರ್ಯ:
ದುರ್ಯೋಧನನ ಮಾತು ಇನ್ನು ಇತ್ತು, ಸಂಜಯನನು ದುರ್ಯೋಧನನ ಮಾತುಗಳನ್ನು ಹೇಳುತ್ತಾ ಮುಂದುವರೆಸಿದ, ಯುಧಿಷ್ಠಿರನು ಮೊದಲು ಬ್ರಹ್ಮಚರ್ಯನಾಗಿದ್ದ, ನಂತರ ಮದುವೆಮಾಡಿಕೊಂಡು ಗೃಹಸ್ಥನಾದ, ನಂತರ ವನವಾಸದಲ್ಲಿ ವಾನಪ್ರಸ್ಥಾಶ್ರಮವನ್ನು ಅನುಭವಿಸಿ, ವಿರಾಟನಗರದಲ್ಲಿ ಸನ್ಯಾಸವೂ ಅನುಭವಿಸಾಯಿತು. ಕ್ರಮವಾಗಿ ನಾಲ್ಕು ಆಶ್ರಮಗಳನ್ನು ಅನುಭವಿಸಿದ ಇವನಿಗೆ, ಭೂಮಿಯ ಒಡೆತನು ಅನುಚಿತವಾಗಿದೆ ಎಂದು ಹೇಳು ಎಂದು ಸಂಜಯನ ಬಳಿ ತಿಳಿಸಿದನು.
ಅರ್ಥ:
ಮೊದಲು: ಆದಿ; ಅಮಲ: ನಿರ್ಮಲ; ಬ್ರಹ್ಮಚರ್ಯ: ಇಂದ್ರಿಯ ನಿಗ್ರಹ ೨ ಚತುರಾಶ್ರಮಗಳಲ್ಲಿ ಮೊದಲನೆಯದು; ಮದುವೆ: ವಿವಾಹ; ಬಳಿಕ: ನಂತರ; ವನ: ಬನ, ಕಾಡು; ವಾಸ: ಇರುವಿಕೆ; ವಾನಪ್ರಸ್ಥ: ಚತುರಾಶ್ರಮಗಳಲ್ಲಿ ಮೂರನೆಯದು; ಅಳವಡಿಸು: ಹೊಂದಿಸು; ಯಮಜ: ಧರ್ಮರಾಯ; ಹೇಳು: ತಿಳಿಸು; ಅಳುಪು: ಬಯಸು;
ಪದವಿಂಗಡಣೆ:
ಮೊದಲೊಳ್+ಅಮಲ +ಬ್ರಹ್ಮಚರ್ಯವು
ಮದುವೆಯಾಯಿತು +ಬಳಿಕ +ವನವಾ
ಸದೊಳು +ವಾನಪ್ರಸ್ಥವೆಂಬ+ಆಶ್ರಮವನ್+ಅಳವಡಿಸಿ
ತುದಿಗೆ + ತಾಂ+ ಸನ್ಯಾಸವನು+ ಮಾ
ಡಿದನು +ಮತ್ತ್+ಅಳುಪುವೊಡೆ +ರಾಜ್ಯದ
ಪದವಿಗನುಚಿತವಾಯ್ತು +ಯಮಜಂಗೆಂದು+ ಹೇಳೆಂದ
ಅಚ್ಚರಿ:
(೧) ಮೊದಲು, ತುದಿ – ಪದಗಳ ಬಳಕೆ