ಪದ್ಯ ೧೬: ಉತ್ತರನು ತನ್ನ ಸಾಮರ್ಥ್ಯವನ್ನು ಹೇಗೆ ಕೊಚ್ಚುಕೊಂಡನು?

ಅಹುದಹುದು ತಪ್ಪೇನು ಜೂಜಿನ
ಕುಹಕದಲಿ ಪಾಂಡವರ ಸೋಲಿಸಿ
ಮಹಿಯಕೊಂಡಂತೆನ್ನ ಕೆಣಕಿದನೇ ಸುಯೋಧನನು
ಸಹಸದಿಂದವೆ ತುರುವ ಮರಳಿಚಿ
ತಹೆನು ಬಳಿಕಾ ಕೌರವನ ನಿ
ರ್ವಹಿಸಲೀವೆನೆ ಸೂರೆಗೊಂಬೆನು ಹಸ್ತಿನಾಪುರವ (ವಿರಾಟ ಪರ್ವ, ೬ ಸಂಧಿ, ೧೬ ಪದ್ಯ)

ತಾತ್ಪರ್ಯ:
ಉತ್ತರನು ತನ್ನ ಪೌರುಷದ ಬಗ್ಗೆ ಜಂಬ ಕೊಚ್ಚುಕೊಳ್ಳುತ್ತಾ, ಹೌದೌದು ಕೌರವನು ಹಿಂದೆ ಮೋಸದಿಂದ ಪಾಂಡವರನ್ನು ಸೋಲಿಸಿ ಹಸ್ತಿನಾಪುರವನ್ನು ತೆಗೆದುಕೊಂಡನಲ್ಲವೆ, ಇದರಲ್ಲಿ ಅವನದೇನು ತಪ್ಪು, ಇದು ಹಾಗೆಯೇ ಎಂದು ಕೊಂಡು ನನ್ನನ್ನು ಕೆಣಕಿದ್ದಾನೆ, ಗೋವುಗಳನ್ನು ಸಾಹಸದಿಂದ ಹಿಂಪಡೆದು, ಹಸ್ತಿನಾಪುರಕ್ಕೆ ಲಗ್ಗೆಹಾಕಿ ಸೂರೆಗೊಳ್ಳುತ್ತೇನೆ ಎಂದನು.

ಅರ್ಥ:
ಅಹುದು: ಹೌದು; ತಪ್ಪು: ದೋಷ; ಜೂಜು: ಏನಾದರು ಒತ್ತೆ ಇಟ್ಟು ಆಡುವುದು, ಪಂದ್ಯ; ಕುಹಕ: ಮೋಸ; ಸೋಲು: ಪರಾಜಯ; ಮಹಿ: ಭೂಮಿ; ಕೊಂಡು: ತೆಗೆದುಕೊ; ಕೆಣಕು: ಪ್ರಚೋದಿಸು; ಸಹಸ: ಸಾಹಸ, ಧೈರ್ಯ; ತುರು: ಗೋವು; ನಿರ್ವಹಿಸು: ನಿಭಾಯಿಸು; ಸೂರೆಗೊಂಬು:ಕೊಳ್ಳೆಹೋಡಿ,ಲೂಟಿ; ಪುರ: ಊರು; ಹಸ್ತಿ: ಆನೆ;

ಪದವಿಂಗಡಣೆ:
ಅಹುದಹುದು +ತಪ್ಪೇನು +ಜೂಜಿನ
ಕುಹಕದಲಿ +ಪಾಂಡವರ +ಸೋಲಿಸಿ
ಮಹಿಯ+ಕೊಂಡಂತ್+ಎನ್ನ +ಕೆಣಕಿದನೇ+ ಸುಯೋಧನನು
ಸಹಸದಿಂದವೆ +ತುರುವ +ಮರಳಿಚಿ
ತಹೆನು +ಬಳಿಕಾ+ ಕೌರವನ+ ನಿ
ರ್ವಹಿಸಲೀವೆನೆ+ ಸೂರೆಗೊಂಬೆನು +ಹಸ್ತಿನಾಪುರವ

ನಿಮ್ಮ ಟಿಪ್ಪಣಿ ಬರೆಯಿರಿ