ವೈದಿಕೋಕ್ತಿಗಳಲಿ ಹರಿಶ್ಚಂ
ದ್ರಾದಿ ರಾಯರು ರಾಜಸೂಯದೊ
ಳಾದರನಿಬರೊಳಗ್ಗಳೆಯರಿಂದ್ರಂಗೆ ಸರಿಮಿಗಿಲು
ಆದೊಡಾ ಪುರುಹೂತ ಸಭೆಯೋ
ಪಾದಿ ಯಮನಾಸ್ಥಾನವಲ್ಲಿ ವಿ
ಷಾದದಲಿ ನಿಮ್ಮಯ್ಯನಿಹನಾತನ ಸಮೀಪದಲಿ (ಸಭಾ ಪರ್ವ, ೧ ಸಂಧಿ, ೯೧ ಪದ್ಯ)
ತಾತ್ಪರ್ಯ:
ವೇದ ವಿಧಿಯಂತೆ ಹರಿಶ್ಚಂದ್ರನೇ ಮೊದಲಾದ ರಾಜರು ರಾಜಸೂಯಯಾಗವನ್ನು ಮಾಡಿ ಇಂದ್ರನಿಗೆ ಸರಿಮಿಗಿಲಾಗಿ ಸ್ವರ್ಗದಲ್ಲಿದ್ದಾರೆ. ಯಮನ ಸಭೆಯು ದೇವೆಂದ್ರನ ಸಭೆಯಂತೆಯೇ ಇದೆ. ಅಲ್ಲಿ ನಿಮ್ಮ ತಂದೆಯಾದ ಪಾಂಡುರಾಜನು ದುಃಖಭರಿತನಾಗಿ ಯಮನ ಸಮೀಪದಲ್ಲಿದ್ದಾನೆ.
ಅರ್ಥ:
ವೈದಿಕ: ವೇದ ವಿಧಿಯಂತೆ; ಉಕ್ತಿ: ಹೇಳಿಕೆ; ಆದಿ: ಮುಂತಾದ; ರಾಯ: ರಾಜ; ಇನಿಬರ್: ಇಷ್ಟುಜನ; ಸರಿಮಿಗಿಲು: ಸರಿಸಮ; ಪುರುಹೂತ: ಇಂದ್ರ; ಉಪಾದಿ: ಅಂತೆ, ಸಮನಾಗಿ; ಆಸ್ಥಾನ: ದರ್ಬಾರು; ವಿಷಾದ: ದುಃಖ; ಆಯ್ಯ: ತಂದೆ; ಸಮೀಪ: ಹತ್ತಿರ;
ಪದವಿಂಗಡಣೆ:
ವೈದಿಕ+ಉಕ್ತಿಗಳಲಿ +ಹರಿಶ್ಚಂ
ದ್ರಾದಿ +ರಾಯರು +ರಾಜಸೂಯದೊಳ್
ಆದರನ್+ಇನಿಬರೊಳ್+ಅಗ್ಗಳೆಯರ್+ಇಂದ್ರಂಗೆ +ಸರಿಮಿಗಿಲು
ಆದೊಡ್+ಆ+ ಪುರುಹೂತ +ಸಭೆಯೋ
ಪಾದಿ +ಯಮನ+ಆಸ್ಥಾನವಲ್ಲಿ +ವಿ
ಷಾದದಲಿ +ನಿಮ್ಮ್+ಅಯ್ಯನ್+ಇಹನ್+ಆತನ +ಸಮೀಪದಲಿ
ಅಚ್ಚರಿ:
(೧) ಇಂದ್ರನನ್ನು ಪುರುಹೂತ ನೆಂದು ಕರೆದಿರುವುದು
(೨) ೩, ೬ ಸಾಲಿನ ಕೊನೆ ಪದ “ಸ”ಕಾರ ವಾಗಿರುವುದು – ಸರಿಮಿಗಿಲು, ಸಮೀಪದಲಿ
(೩) ಸಭೆ ಆಸ್ಥಾನ – ಸಾಮ್ಯಪದಗಳು