ಎಲೆ ಮುನಿಯೆ ನೀವ್ ರಚಿಸಿದೀ ನಿ
ರ್ಮಳ ನೃಪಾಲನಯ ಪ್ರಪಂಚವ
ಬಳಸಿದೆನು ಕೆಲ ಕೆಲವನಿನ್ನುರೆ ಬಳಸುವೆನು ಕೆಲವ
ಇಳಿದು ಧರಣಿಗೆ ಸುಳಿದು ನೀತಿ
ಸ್ಖಲಿತ ಜಡರನು ತಿದ್ದಿ ತಿಳುಹುವ
ಸುಲಭತನದಲಿ ದೇವ ಮುನಿ ನಿನಗಾರು ಸರಿಯೆಂದ (ಸಭಾ ಪರ್ವ, ೧ ಸಂಧಿ, ೮೮ ಪದ್ಯ)
ತಾತ್ಪರ್ಯ:
“ಎಲೈ ನಾರದರೇ, ಮುನಿಶ್ರೇಷ್ಠರೆ, ನೀವು ಬೋಧಿಸಿದ ಪವಿತ್ರವಾದ ರಾಜನೀತಿಯ ಮಾತುಗಳಲ್ಲಿ ಕೆಲವನ್ನು ನಾನು ಆಅರಿಸುತ್ತಿದ್ದೇನೆ, ಮಿಕ್ಕ ಕೆಲವನ್ನು ಆಚರಿಸುತ್ತೇನೆ. ಎಲೈ ದೇವರ್ಷಿಯೇ, ಭೂಮಿಗಿಳಿದು ನೀತಿಯಿಂದ ಜಾರಿದ ಜನರನ್ನು ತಿದ್ದಿ ಬೋಧಿಸುವ ನಿಮಗೆ ಯಾರುತಾನೆ ಸರಿ” ಎಂದು ನಾರದರನ್ನು ಯುಧಿಷ್ಠಿರನು ಹೊಗಳಿದನು.
ಅರ್ಥ:
ಮುನಿ: ಋಷಿ; ರಚಿಸು: ರೂಪಿಸು; ನಿರ್ಮಳ: ಸ್ವಚ್ಛವಾದ, ಪವಿತ್ರ; ನೃಪಾಲ: ರಾಜ, ನಯ: ರಾಜನೀತಿ; ಪ್ರಪಂಚ: ಭೂಮಿ, ಭೂಗೋಲ; ಬಳಸು: ಉಪಯೋಗಿಸು; ಕೆಲ: ಸ್ವಲ್ಪ; ಉರೆ: ಸುಳಿ:ವಿಶೇಷವಾಗಿ; ಇಳಿದು: ಕೆಳಗೆ ಬಂದು; ಧರಣಿ: ಭೂಮಿ; ಸುಳಿ:ಗೋಚರವಾಗು; ಸ್ಖಲಿತ: ಅಪರಾಧ, ಕೆಳಗೆ ಬಿದ್ದವ; ನೀತಿ:ಮಾರ್ಗ ದರ್ಶನ; ಜಡ:ಸೋಮಾರಿ; ತಿದ್ದು: ಸರಿಪಡಿಸು; ತಿಳುಹು: ತಿಳುವಳಿಕೆ ಹೇಳು; ಸುಲಭ: ನಿರಯಾಸ; ದೇವ: ದೈವಸ್ವರೂಪ; ಸರಿ: ಸಮ;
ಪದವಿಂಗಡಣೆ:
ಎಲೆ +ಮುನಿಯೆ +ನೀವ್ +ರಚಿಸಿದ್+ಈ+ ನಿ
ರ್ಮಳ +ನೃಪಾಲ+ನಯ +ಪ್ರಪಂಚವ
ಬಳಸಿದೆನು+ ಕೆಲ+ ಕೆಲವನಿನ್+ಉರೆ+ ಬಳಸುವೆನು +ಕೆಲವ
ಇಳಿದು +ಧರಣಿಗೆ +ಸುಳಿದು +ನೀತಿ
ಸ್ಖಲಿತ +ಜಡರನು +ತಿದ್ದಿ +ತಿಳುಹುವ
ಸುಲಭ+ತನದಲಿ +ದೇವ +ಮುನಿ +ನಿನಗಾರು +ಸರಿಯೆಂದ
ಅಚ್ಚರಿ:
(೧) ಕೆಲ ಪದದ ಬಳಕೆ – ೩ ಸಾಲಿನಲ್ಲಿ ೩ ಬಾರಿ
(೨) ಬಳಸಿದೆನು, ಬಳಸುವೆನು – ಭೂತ ಮತ್ತು ಭವಿಷ್ಯತ್ಕಾಲದ ಪ್ರಯೋಗ – ೩ ಸಾಲು
(೩) ದೇವಮುನಿ – ನಾರದರನ್ನು ಸಂಭೋದಿಸಿರುವುದು
(೪) ನಾರದರು ಭೂಮಿಗೆ ಬಂದ ಔಚಿತ್ಯವನ್ನು ವಿವರಿಸಿರುವುದು – ಇಳಿದು ಧರಣಿಗೆ ಸುಳಿದು ನೀತಿ
ಸ್ಖಲಿತ ಜಡರನು ತಿದ್ದಿ ತಿಳುಹುವ ಸುಲಭತನದಲಿ