ಈಗಳನುವಾದೆನೆ ಧರಿತ್ರಿಯ
ಭಾಗವನು ಬೇಡಿದಡೆ ನೀ ಮುರಿ
ದಾಗಲನುವಾದುದು ಕಣಾ ಗದೆ ನಿನ್ನ ಕಿರುದೊಡೆಗೆ
ತಾಗಿ ನೋಡಿನ್ನೊಮ್ಮೆನುತ ಮೈ
ಲಾಗಿನಲಿ ಹೊಳೆಹೊಳೆದು ಕೈದುವ
ತೂಗಿ ತುಡುಕಿದನರಸನನು ಬೊಬ್ಬಿರಿದು ಕಲಿ ಭೀಮ (ಗದಾ ಪರ್ವ, ೭ ಸಂಧಿ, ೧೫ ಪದ್ಯ)
ತಾತ್ಪರ್ಯ:
ಭೀಮನು ಗರ್ಜಿಸುತ್ತಾ, ನಾನು ಈಗ ಸಿದ್ಧನಾಗಬೇಕಾಗಿಲ್ಲ, ನಮ್ಮ ಭಾಗದ ಭೂಮಿಯನ್ನು ಕೇಳಿದರೆ, ನೀನು ಸಾಧ್ಯವಿಲ್ಲ ಎಂದೆಯಲ್ಲಾ ಆಗಲೇ ಈ ಗದೆ ನಿನ್ನ ಕಿರುದೊಡೆಯನ್ನು ಮುರಿಯಲು ಸಿದ್ಧವಾಗಿತ್ತು. ಇನ್ನೊಮ್ಮೆ ನನ್ನನ್ನು ಹೊಡೆಯಲು ಬಂದು ನೋಡು, ಎನ್ನುತ್ತಾ ಭೀಮನು ಗದೆಯನ್ನು ತೂಗಿ ಗರ್ಜಿಸಿ ಕೌರವನನ್ನು ತುಡುಕಿದನು.
ಅರ್ಥ:
ಅನುವಾಗು: ಸಿದ್ಧನಾಗು; ಧರಿತ್ರಿ: ಭೂಮಿ; ಭಾಗ: ಅಂಶ, ಪಾಲು; ಬೇಡು: ಕೇಳು; ಮುರಿ: ಸೀಳು; ಗದೆ: ಮುದ್ಗರ; ಕಿರು: ಚಿಕ್ಕ; ತೊಡೆ: ಊರು; ತಾಗು: ಮುಟ್ತು; ನೋಡು: ವೀಕ್ಷಿಸು; ಮೈಲಾಗು: ದೇಹದ ಚುರುಕುತನ, ಚಳಕ; ಹೊಳೆ: ಪ್ರಕಾಶಿಸು; ಕೈದು: ಆಯುಧ; ತೂಗು: ಅಲ್ಲಾಡಿಸು; ತುಡುಕು: ಹೋರಾಡು, ಸೆಣಸು, ಮುಟ್ಟು; ಅರಸ: ರಾಜ; ಬೊಬ್ಬಿರಿ: ಗರ್ಜಿಸು; ಕಲಿ: ಶೂರ;
ಪದವಿಂಗಡಣೆ:
ಈಗಳ್+ಅನುವಾದೆನೆ +ಧರಿತ್ರಿಯ
ಭಾಗವನು +ಬೇಡಿದಡೆ+ ನೀ +ಮುರಿ
ದಾಗಲ್+ಅನುವಾದುದು +ಕಣಾ +ಗದೆ +ನಿನ್ನ+ ಕಿರುದೊಡೆಗೆ
ತಾಗಿ+ ನೋಡ್+ಇನ್ನೊಮ್ಮ್+ಎನುತ +ಮೈ
ಲಾಗಿನಲಿ +ಹೊಳೆಹೊಳೆದು +ಕೈದುವ
ತೂಗಿ +ತುಡುಕಿದನ್+ಅರಸನನು +ಬೊಬ್ಬಿರಿದು +ಕಲಿ +ಭೀಮ
ಅಚ್ಚರಿ:
(೧) ಭೀಮನ ಉತ್ತರ – ಧರಿತ್ರಿಯ ಭಾಗವನು ಬೇಡಿದಡೆ ನೀ ಮುರಿದಾಗಲನುವಾದುದು ಕಣಾ ಗದೆ ನಿನ್ನ ಕಿರುದೊಡೆಗೆ