ವಿಗಡರನಿಬರು ನೆರೆದು ಪಾರ್ಥನ
ತೆಗೆದರತ್ತಲು ಭೀಷ್ಮನಿತ್ತಲು
ಹೊಗೆದನಂತ್ಯದ ರುದ್ರನಗ್ಗದ ಕಣ್ಣ ಶಿಖಿಯಂತೆ
ಬಿಗಿದ ಹೊದೆಗಳ ಹರಿದು ಬಿಲ್ಲಿಂ
ದುಗುಳಿಸಿದನಂಬುಗಳನಳವಿಗೆ
ತೆಗೆದು ಪಾಂಡವ ಬಲವ ಬೆಂಬತ್ತಿದನು ಖಾತಿಯಲಿ (ಭೀಷ್ಮ ಪರ್ವ, ೯ ಸಂಧಿ, ೭ ಪದ್ಯ)
ತಾತ್ಪರ್ಯ:
ಕೌರವ ವೀರರೆಲ್ಲರೂ ಅರ್ಜುನನತ್ತ ಹೋಗಿ ಅವನನ್ನು ಒಂದು ಕಡೆಗೆ ತೆಗೆದು ಯುದ್ಧವನ್ನಾರಂಭಿಸಿದರು. ಇತ್ತ ಭೀಷ್ಮನು ಬಾಣಗಳ ಹೊರೆಗಳ ಕಟ್ಟುಗಳನ್ನು ಕಿತ್ತು ಶತ್ರುಗಳ ಮೇಲೆ ಬಾಣಗಳನ್ನು ಪ್ರಯೋಗಿಸಿ ಪಾಂಡವ ಸೈನ್ಯದ ಬೆನ್ನುಹತ್ತಿದನು.
ಅರ್ಥ:
ವಿಗಡ: ಶೌರ್ಯ, ಪರಾಕ್ರಮ; ಅನಿಬರು: ಅಷ್ಟುಜನ; ನೆರೆ: ಸೇರು, ಜೊತೆಗೂಡು; ತೆಗೆ: ಹೊರಹಾಕು; ಹೊಗೆ: ಧುಮುಗುಡು; ಅಂತ್ಯ: ಕೊನೆ; ರುದ್ರ: ಶಿವ, ಭಯಂಕರವಾದ; ಅಗ್ಗ: ಶ್ರೇಷ್ಠ; ಕಣ್ಣು: ನೇತ್ರ; ಶಿಖಿ: ಬೆಂಕಿ; ಬಿಗಿ: ಕಟ್ಟು; ಹೊದೆ: ಬಾಣಗಳನ್ನಿಡುವ ಕೋಶ, ಬತ್ತಳಿಕೆ; ಹರಿ: ಸೀಳು; ಬಿಲ್ಲು: ಚಾಪ; ಉಗುಳು: ಹೊರಹಾಕು; ಅಂಬು: ಬಾಣ; ಅಳವಿ: ಶಕ್ತಿ, ಯುದ್ಧ; ತೆಗೆ: ಹೊರತರು; ಬಲ: ಶಕ್ತಿ, ಸೈನ್ಯ; ಬೆಂಬತ್ತಿ: ಹಿಂಬಾಲಿಸು; ಖಾತಿ: ಕೋಪ;
ಪದವಿಂಗಡಣೆ:
ವಿಗಡರ್+ಅನಿಬರು +ನೆರೆದು +ಪಾರ್ಥನ
ತೆಗೆದರ್+ಅತ್ತಲು +ಭೀಷ್ಮನ್+ಇತ್ತಲು
ಹೊಗೆದನ್+ಅಂತ್ಯದ +ರುದ್ರನ್+ಅಗ್ಗದ +ಕಣ್ಣ +ಶಿಖಿಯಂತೆ
ಬಿಗಿದ +ಹೊದೆಗಳ +ಹರಿದು +ಬಿಲ್ಲಿಂದ್
ಉಗುಳಿಸಿದನ್+ಅಂಬುಗಳನ್+ಅಳವಿಗೆ
ತೆಗೆದು+ ಪಾಂಡವ +ಬಲವ +ಬೆಂಬತ್ತಿದನು +ಖಾತಿಯಲಿ
ಅಚ್ಚರಿ:
(೧) ಬಾಣ ಬಿಟ್ಟನು ಎಂದು ಹೇಳುವ ಪರಿ – ಬಿಲ್ಲಿಂದುಗುಳಿಸಿದನಂಬುಗಳನಳವಿಗೆ