ವರುಷ ಹದಿನಾರಾಯ್ತು ಧರಣೀ
ಶ್ವರನ ಹಿರಿಯ ಮಗಂಗೆ ಭೀಮಗೆ
ವರುಷ ಹದಿನೈದರ್ಜುನಗೆ ಹದಿನಾಲ್ಕು ಹದಿಮೂರು
ಕಿರಿಯರಿಬ್ಬರಿಗನಿಬರಾ ಮುನಿ
ವರರಿನಧ್ಯಯನಾದಿ ವಿದ್ಯಾ
ನಿರತರಾದರು ಬಂದುದೊಂದು ವಸಂತಮಯ ಸಮಯ (ಆದಿ ಪರ್ವ, ೫ ಸಂಧಿ, ೪ ಪದ್ಯ)
ತಾತ್ಪರ್ಯ:
ಧರ್ಮರಾಜನಿಗೆ ಹದಿನಾರು ವರ್ಷಗಳು ತುಂಬಿದವು. ಭೀಮನಿಗೆ ಹದಿನೈದು ವರ್ಷ, ಅರ್ಜುನನಿಗೆ ಹದಿನಾಲ್ಕು, ನಕುಲ ಸಹದೇವರಿಗೆ ಹದಿಮೂರು ವರ್ಷಗಳು ತುಂಬಿದವು. ಅವರೆಲ್ಲರಿಗೂ ಋಷಿಗಳಿಂದ ವಿದ್ಯಾಭ್ಯಾಸವು ನಡೆಯುತ್ತಿತ್ತು. ಹೀಗೆ ಪಾಂಡವರು ವಿದ್ಯಾಭ್ಯಾಸದಲ್ಲಿ ಮಗ್ನರಾಗಿರಲು ವಸಂತ ಋತುವು ಬಂದಿತು.
ಅರ್ಥ:
ವರುಷ: ಸಂವತ್ಸರ; ಧರಣೀಶ್ವರ: ರಾಜ; ಹಿರಿಯ: ದೊಡ್ಡ, ಜೇಷ್ಠ; ಮಗ: ಪುತ್ರ; ಕಿರಿಯ: ಚಿಕ್ಕವ; ಮುನಿ: ಋಷಿ; ವರ: ಶ್ರೇಷ್ಠ; ಅಧ್ಯಯನ: ಓದುವುದು; ವಿದ್ಯ: ಜ್ಞಾನ; ನಿರತ: ಆಸಕ್ತನಾದ; ಬಂದು: ಆಗಮಿಸು; ವಸಂತ: ಆರು ಋತುಗಳಲ್ಲಿ ಒಂದು; ಸಮಯ: ಕಾಲ;
ಪದವಿಂಗಡಣೆ:
ವರುಷ +ಹದಿನಾರಾಯ್ತು+ ಧರಣೀ
ಶ್ವರನ +ಹಿರಿಯ +ಮಗಂಗೆ +ಭೀಮಗೆ
ವರುಷ +ಹದಿನೈದ್+ಅರ್ಜುನಗೆ +ಹದಿನಾಲ್ಕು +ಹದಿಮೂರು
ಕಿರಿಯರಿಬ್ಬರಿಗ್+ಅನಿಬರಾ +ಮುನಿ
ವರರಿನ್+ಅಧ್ಯಯನಾದಿ +ವಿದ್ಯಾ
ನಿರತರಾದರು +ಬಂದುದೊಂದು +ವಸಂತಮಯ +ಸಮಯ
ಅಚ್ಚರಿ:
(೧) ಹಿರಿಯ, ಕಿರಿಯ – ವಿರುದ್ಧ ಪದಗಳು
(೨) ವರುಷ – ೧, ೩ ಸಾಲಿನ ಮೊದಲ ಪದ