ದಳವ ಕರೆ ದಳಪತಿಗೆ ಕಾಳೆಗ
ಬಲುಹು ಪಾರ್ಥನ ಕೂಡೆ ಗುರುಸುತ
ನಳವಿಗೊಡಲಿ ಸುಶರ್ಮ ತಾಗಲಿ ಭೋಜ ಗೌತಮರು
ನಿಲಲಿ ಸುಭಟರು ಜೋಡಿಯಲಿ ಪರ
ಬಲಕೆ ಜಾರುವ ಜಯಸಿರಿಯ ಮುಂ
ದಲೆಯ ಹಿಡಿಹಿಡಿಯೆನುತ ಹೆಕ್ಕಳಿಸಿದನು ಕುರುರಾಯ (ಶಲ್ಯ ಪರ್ವ, ೨ ಸಂಧಿ, ೫೧ ಪದ್ಯ)
ತಾತ್ಪರ್ಯ:
ಸೈನ್ಯವನ್ನು ಕರೆದು ಯುದ್ಧಕ್ಕೆ ಬಿಡಿರಿ. ಸೇನಾಧಿಪತಿಯು ಅರ್ಜುನನೊಡನೆ ಮಾಡುತ್ತಿರುವ ಕಾಳಗ ಅತಿಶಯವಾಯಿತು. ಅಶ್ವತ್ಥಾಮ ಸುಶರ್ಮರು ಕಾಳಗಕೊಡಲಿ, ಶತ್ರುಗಳತ್ತ ಜಾರುತ್ತಿರುವ ಜಯಲಕ್ಷ್ಮಿಯ ಮುಂದಲೆಯನ್ನು ಹಿಡಿದು ನಮ್ಮತ್ತ ಕರೆತನ್ನಿ ಎಂದು ಕೌರವನು ಗರ್ಜಿಸಿದನು.
ಅರ್ಥ:
ದಳ: ಸೈನ್ಯ; ಕರೆ: ಬರೆಮಾಡು; ದಳಪತಿ: ಸೇನಾಧಿಪತಿ; ಕಾಳೆಗ: ಯುದ್ಧ; ಬಲುಹು: ಬಲ, ಶಕ್ತಿ; ಕೂಡೆ: ಜೊತೆ; ಗುರುಸುತ: ಆಚಾರ್ಯರ ಮಗ (ಅಶ್ವತ್ಥಾಮ); ಅಳವಿ: ಯುದ್ಧ; ನಿಲು: ತಡೆ; ಜೋಡಿ: ಜೊತೆ; ಪರಬಲ: ವೈರಿ ಸೈನ್ಯ; ಜಾರು: ಬೀಳು; ಜಯಸಿರಿ: ವಿಜಯ, ಗೆಲುವು; ಮುಂದಲೆ: ತಲೆಯ ಮುಂಭಾಗ; ಹಿಡಿ: ಗ್ರಹಿಸು; ಹೆಕ್ಕಳಿಸು: ಅಧಿಕವಾಗು, ಹೆಚ್ಚಾಗು;
ಪದವಿಂಗಡಣೆ:
ದಳವ +ಕರೆ +ದಳಪತಿಗೆ+ ಕಾಳೆಗ
ಬಲುಹು +ಪಾರ್ಥನ +ಕೂಡೆ +ಗುರುಸುತನ್
ಅಳವಿಗೊಡಲಿ +ಸುಶರ್ಮ +ತಾಗಲಿ +ಭೋಜ +ಗೌತಮರು
ನಿಲಲಿ +ಸುಭಟರು +ಜೋಡಿಯಲಿ +ಪರ
ಬಲಕೆ +ಜಾರುವ +ಜಯಸಿರಿಯ+ ಮುಂ
ದಲೆಯ +ಹಿಡಿಹಿಡಿಯೆನುತ+ ಹೆಕ್ಕಳಿಸಿದನು +ಕುರುರಾಯ
ಅಚ್ಚರಿ:
(೧) ಕಾಳೆಗ, ಅಳವಿ – ಸಮಾನಾರ್ಥಕ ಪದ
(೨) ಗೆಲುವಿನತ್ತ ಸಾಗಿ ಎಂದು ಹೇಳುವ ಪರಿ – ಪರಬಲಕೆ ಜಾರುವ ಜಯಸಿರಿಯ ಮುಂದಲೆಯ ಹಿಡಿಹಿಡಿಯೆನುತ ಹೆಕ್ಕಳಿಸಿದನು