ಇಟ್ಟಣಿಸಿ ನರ ನೂರು ಹೆಜ್ಜೆಯೊ
ಳಟ್ಟಿ ಹಿಡಿದನಿದೇನ ಮಾಡಿದೆ
ಹುಟ್ಟಿದೆಯೊ ಹಾದರಕೆ ಬಾಹುಜ ಬೀಜವೋ ಮೇಣು
ದಿಟ್ಟತನ ಮಿಗೆ ಹೆಂಗಳಿದಿರಲಿ
ಹೊಟ್ಟುಗುಟ್ಟಿದೆ ಹಗೆಗಳಿದಿರಲಿ
ಬಿಟ್ಟುಕೊಂಡೆ ದುರಾತ್ಮ ಮುರಿದೆ ವಿರಾಟನಾನ್ವಯವ (ವಿರಾಟ ಪರ್ವ, ೭ ಸಂಧಿ, ೧೭ ಪದ್ಯ)
ತಾತ್ಪರ್ಯ:
ಉತ್ತರನು ನೂರು ಹೆಜ್ಜೆ ಹೋಗುವುದರೊಳಗಾಗಿ ಉತ್ತರನ ಸಮಕ್ಕೆ ರಥವನ್ನು ತಂದ ಅರ್ಜುನನು, ಎಲೈ ಉತ್ತರ ಇದೇನು ಮಾಡಿದೆ, ನೀನು ಜಾರನಿಗೆ ಹುಟ್ಟಿದವನೋ ಅಥವ ಕ್ಷತ್ರಿಯನೋ, ಹೆಂಗಸರೆದುರಿನಲ್ಲಿ ನಿನ್ನ ಪರಾಕ್ರಮವನ್ನು ಕೊಚ್ಚಿಕೊಂಡೆ, ಇಲ್ಲಿ ವೈರಿಗಳೆದುರಿನಲ್ಲಿ ಹೊಟ್ಟು ಹಾರುವಂತೆ ಓಡಿ ಹೋಗುತ್ತಿರುವೆ, ದುರಾತ್ಮ ನೀನು ಹುಟ್ಟಿ ವಿರಾಟವಂಶವನ್ನು ನಾಶಮಾಡಿದೆ ಎಂದು ಜರಿದನು.
ಅರ್ಥ:
ಇಟ್ಟಣ:ಆಘಾತ, ಮನೋಹರ; ನರ: ಅರ್ಜುನ; ನೂರು: ಶತ; ಹೆಜ್ಜೆ: ಪಾದ; ಹಿಡಿ: ಬಂಧಿಸು; ಹುಟ್ಟು: ಜನನ; ಹಾದರ: ವ್ಯಭಿಚಾರ; ಬಾಹುಜ: ಕ್ಷತ್ರಿಯ; ಬೀಜ:ಉತ್ಪತ್ತಿ ಸ್ಥಾನ, ಮೂಲ; ಮೇಣು: ಅಥವ; ದಿಟ್ಟ: ಧೈರ್ಯ; ಮಿಗೆ: ಮತ್ತು, ಅಧಿಕ; ಹೆಂಗಳು: ಸ್ತ್ರೀ; ಇದಿರು: ಎದುರು; ಹೊಟ್ಟುಗುಟ್ಟು: ಹೊಗಳು; ಹಗೆ: ವೈರಿ; ಬಿಟ್ಟು: ತೊರೆ; ದುರಾತ್ಮ: ದುಷ್ಟ; ಮುರಿ: ಸೀಳು; ಅನ್ವಯ: ವಂಶ;
ಪದವಿಂಗಡಣೆ:
ಇಟ್ಟಣಿಸಿ +ನರ +ನೂರು +ಹೆಜ್ಜೆಯೊಳ್
ಅಟ್ಟಿ +ಹಿಡಿದನ್+ಇದೇನ+ ಮಾಡಿದೆ
ಹುಟ್ಟಿದೆಯೊ +ಹಾದರಕೆ+ ಬಾಹುಜ +ಬೀಜವೋ +ಮೇಣು
ದಿಟ್ಟತನ +ಮಿಗೆ +ಹೆಂಗಳಿದಿರಲಿ
ಹೊಟ್ಟುಗುಟ್ಟಿದೆ +ಹಗೆಗಳಿದಿರಲಿ
ಬಿಟ್ಟುಕೊಂಡೆ+ ದುರಾತ್ಮ+ ಮುರಿದೆ+ ವಿರಾಟನ್+ಅನ್ವಯವ
ಅಚ್ಚರಿ:
(೧) ಹ, ಬ ಕಾರದ ಜೋಡಿ ಪದ – ಹುಟ್ಟಿದೆಯೊ ಹಾದರಕೆ ಬಾಹುಜ ಬೀಜವೋ