ರಾಯ ಸೋತನು ಶಕುನಿ ಬೇಡಿದ
ದಾಯ ತಹ ಹಮ್ಮಿಗೆಯಲೊದಗಿದ
ವಾಯತದ ಕೃತ್ರಿಮವಲೇ ಕೌರವರ ಸಂಕೇತ
ಆಯಿತೀ ಹಲಗೆಯನು ಕೌರವ
ರಾಯ ಗೆಲಿದನು ಮತ್ತೆ ಪಣವೇ
ನಾಯಿತೆಂದನು ಶಕುನಿ ಯಮನಂದನನನೀಕ್ಷಿಸುತ (ಸಭಾ ಪರ್ವ, ೧೪ ಸಂಧಿ, ೫೧ ಪದ್ಯ)
ತಾತ್ಪರ್ಯ:
ಧರ್ಮಜನು ಸೋತನು, ಶಕುನಿಯು ಬೇಡಿದ್ದ ಗರವು ಅವನ ಕೃತ್ರಿಮದ ಕಟ್ಟಿಗೆ ಸಿಲುಕಿ ದಾಳಗಳು ಕೊಡುತ್ತಿದ್ದವು. ಈ ಹಲಗೆಯನ್ನು ಕೌರವ ಗೆದ್ದನು, ಇನ್ನೇನು ಪಣವನ್ನು ಕಟ್ಟಿತ್ತೀಯ ಎಂದು ಶಕುನಿಯು ಯುಧಿಷ್ಠಿರನನ್ನು ನೋಡುತ್ತಾ ಕೇಳಿದನು.
ಅರ್ಥ:
ರಾಯ: ದೊರೆ, ಒಡೆಯ; ಸೋಲು: ಪರಾಭವ; ದಾಯ: ಪಗಡೆಯಾಟದಲ್ಲಿ ಬೀಳುವ ಗರ; ತಹ: ಒಪ್ಪಂದ; ಹಮ್ಮು: ಯೋಜಿಸು; ಒದಗು: ಲಭ್ಯ, ದೊರೆತುದು; ಆಯ: ಗುಟ್ಟು, ಉದ್ದೇಶ; ಕೃತ್ರಿಮ: ಕಪಟ, ಮೋಸ; ಸಂಕೇತ: ಚಿಹ್ನೆ; ಆಯಿತು: ಮುಗಿಯಿತು; ಹಲಗೆ: ಪಲಗೆ, ಮರ, ಲೋಹಗಳ ಅಗಲವಾದ ಹಾಗೂ ತೆಳುವಾದ ಸೀಳು, ಪಗಡೆದಲ್ಲಿ ಒಂದು ಪಂದ್ಯ; ಗೆಲುವು: ಜಯ; ಮತ್ತೆ: ಪುನಃ; ಪಣ: ಜೂಜಿಗೆ ಒಡ್ಡಿದ ವಸ್ತು, ಬಾಜಿ; ನಂದನ: ಮಗ; ಈಕ್ಷಿಸು: ನೋಡು;
ಪದವಿಂಗಡಣೆ:
ರಾಯ+ ಸೋತನು +ಶಕುನಿ +ಬೇಡಿದ
ದಾಯ+ ತಹ +ಹಮ್ಮಿಗೆಯಲ್+ಒದಗಿದವ್
ಆಯತದ +ಕೃತ್ರಿಮವಲೇ +ಕೌರವರ +ಸಂಕೇತ
ಆಯಿತೀ +ಹಲಗೆಯನು +ಕೌರವ
ರಾಯ +ಗೆಲಿದನು +ಮತ್ತೆ +ಪಣವೇ
ನಾಯಿತೆಂದನು +ಶಕುನಿ +ಯಮನಂದನನನ್+ಈಕ್ಷಿಸುತ
ಅಚ್ಚರಿ:
(೧) ರಾಯ, ದಾಯ, ಆಯ – ಪ್ರಾಸ ಪದಗಳು
(೨) ಕೌರವರ ಸಂಕೇತ – ಆಯತದ ಕೃತ್ರಿಮವಲೇ ಕೌರವರ ಸಂಕೇತ