ಏಳಿರೈ ಸಾಕೇಳಿ ಮಕ್ಕಳಿ
ರೇಳಿರೈ ದೇಸಿಗರು ನಾವ್ ಭೂ
ಪಾಲಕರು ನೀವೀಸು ನಮ್ಮಲಿ ಭೀತಿ ನಿಮಗೇಕೆ
ಬಾಲೆಯರು ನಾವಂಧಕರು ನಿ
ಮ್ಮಾಳಿಕೆಯೊಳೇ ನಿಮ್ಮ ಹಂತಿಯ
ಕೂಳಿನಲಿ ಬೆಂದೊಡಲ ಹೊರೆವವರೆಂದಳಿಂದುಮುಖಿ (ಗದಾ ಪರ್ವ, ೧೧ ಸಂಧಿ, ೫೪ ಪದ್ಯ)
ತಾತ್ಪರ್ಯ:
ಗಾಂಧಾರಿಯು ಮಾತನಾಡುತ್ತಾ, ಮಕ್ಕಳೇ, ಸಾಕು, ಮೇಲೇಳಿ. ನಾವು ಅನಾಥರು, ನೀವಾದರೋ ರಾಜರು. ನಮಗೇಕೆ ಹೆದರುತ್ತೀರಿ? ನಾನು ಕುರುಡಿ, ಹೆಣ್ಣು, ನಿಮ್ಮ ಆಳ್ವಿಕೆಯಲ್ಲಿ ನಿಮ್ಮ ಪಂಕ್ತಿಯಲ್ಲಿ ಕುಳಿತುಕೊಂಡು ಊಟಮಾಡಿ, ಈ ಬೆಂದ ಹೊಟ್ಟೆಯನ್ನು ಹೊರೆಯುತ್ತೇವೆ ಎಂದಳು.
ಅರ್ಥ:
ಏಳು: ಮೇಲೆ ಬಾ; ಸಾಕು: ನಿಲ್ಲು, ತಡೆ; ಮಕ್ಕಳು: ಪುತ್ರರು; ದೇಸಿಗ: ಅನಾಥ; ಭೂಪಾಲಕ: ರಾಜ; ಭೀತಿ: ಭಯ; ಬಾಲೆ: ಹೆಣ್ಣು; ಅಂಧಕ: ಕುರುಡು; ಆಳಿಕೆ: ಆಳ್ವಿಕೆ, ರಾಜ್ಯಭಾರ; ಹಂತಿ: ಪಂಕ್ತಿ, ಸಾಲು; ಕೂಳು: ಊಟ; ಬೆಂದ: ಸುಟ್ಟ; ಒಡಲು: ದೇಹ; ಹೊರು: ಧರಿಸು; ಇಂದುಮುಖಿ: ಚಂದ್ರನಂತೆ ಮುಖವುಳ್ಳವಳು, ಹೆಣ್ಣು; ಈಸು: ಇಷ್ಣು;
ಪದವಿಂಗಡಣೆ:
ಏಳಿರೈ +ಸಾಕ್+ಏಳಿ +ಮಕ್ಕಳಿರ್
ಏಳಿರೈ +ದೇಸಿಗರು+ ನಾವ್ +ಭೂ
ಪಾಲಕರು +ನೀವ್+ಈಸು +ನಮ್ಮಲಿ+ ಭೀತಿ +ನಿಮಗೇಕೆ
ಬಾಲೆಯರು + ನಾವ್+ಅಂಧಕರು +ನಿ
ಮ್ಮಾಳಿಕೆಯೊಳೇ+ ನಿಮ್ಮ+ ಹಂತಿಯ
ಕೂಳಿನಲಿ +ಬೆಂದೊಡಲ +ಹೊರೆವವರ್+ಎಂದಳ್+ಇಂದುಮುಖಿ
ಅಚ್ಚರಿ:
(೧) ಏಳಿ – ೩ ಬಾರಿ ಪ್ರಯೋಗ
(೨) ಗಾಂಧಾರಿಯು ತನ್ನ ದುಃಖವನ್ನು ಹೇಳಿದ ಪರಿ – ದೇಸಿಗರು ನಾವ್ ಭೂಪಾಲಕರು ನೀವ್; ನಿ
ಮ್ಮಾಳಿಕೆಯೊಳೇ ನಿಮ್ಮ ಹಂತಿಯ ಕೂಳಿನಲಿ ಬೆಂದೊಡಲ ಹೊರೆವವರೆಂದಳಿಂದುಮುಖಿ