ಬಳಿಕ ಸಂಕೇತದಲಿ ಭೂಪನ
ನಿಳಯವನು ಕಲಿ ಭೀಮ ಹೊಕ್ಕನು
ನಳಿನಮುಖಿ ಸಹದೇವ ನಕುಲರು ಬಂದರಾಕ್ಷಣಕೆ
ಫಲುಗುಣನು ಪೊಡಮಟ್ಟನಿಬ್ಬರಿ
ಗುಳಿದವರು ಪಾರ್ಥಂಗೆ ವಂದಿಸ
ಲೊಲಿದು ಬಿಗಿದಪ್ಪಿದರು ಸೋದರರೆಲ್ಲ ಹರುಷದೊಳು (ವಿರಾಟ ಪರ್ವ, ೧೦ ಸಂಧಿ, ೩೩ ಪದ್ಯ)
ತಾತ್ಪರ್ಯ:
ಮೊದಲೇ ಗೊತ್ತು ಪಡಿಸಿದಂತೆ ಭೀಮ, ನಕುಲ, ಸಹದೇವ, ದ್ರೌಪದಿಯರು ಧರ್ಮರಾಯನ ಮನೆಗೆ ಬಂದರು. ಅರ್ಜುನನು ಅಣ್ಣಂದಿರಿಬ್ಬರಿಗೂ ವಂದಿಸಿದನು, ಉಳಿದವರು ಮೂವರಿಗೆ ವಂದಿಸಿದರು. ಸಹೋದರರು ಸಂತೋಷದಿಂದ ಒಬ್ಬರನ್ನೊಬ್ಬರು ಅಪ್ಪಿಕೊಂಡರು.
ಅರ್ಥ:
ಬಳಿಕ: ನಂತರ; ಸಂಕೇತ: ಗುರುತು; ಭೂಪ: ರಾಜ; ನಿಳಯ: ಮನೆ; ಕಲಿ: ಶೂರ; ಹೊಕ್ಕು: ಸೇರು; ನಳಿನಮುಖಿ: ಕಮಲದಂತ ಮುಖವುಳ್ಳವಳು; ಕ್ಷಣ: ಸಮಯ; ಪೊಡವಡು: ನಮಸ್ಕರಿಸು; ಉಳಿದ: ಮಿಕ್ಕ; ವಂದಿಸು: ನಮಸ್ಕರಿಸು; ಒಲಿದು: ಪ್ರೀತಿಯಿಮ್ದ; ಅಪ್ಪು: ತಬ್ಬಿಕೊ; ಸೋದರ: ಅಣ್ಣ ತಮ್ಮಂದಿರು; ಹರುಷ: ಸಂತೋಷ;
ಪದವಿಂಗಡಣೆ:
ಬಳಿಕ +ಸಂಕೇತದಲಿ +ಭೂಪನ
ನಿಳಯವನು +ಕಲಿ +ಭೀಮ +ಹೊಕ್ಕನು
ನಳಿನಮುಖಿ +ಸಹದೇವ +ನಕುಲರು +ಬಂದರ್+ಆ+ಕ್ಷಣಕೆ
ಫಲುಗುಣನು +ಪೊಡಮಟ್ಟನ್+ಇಬ್ಬರಿಗ್
ಉಳಿದವರು +ಪಾರ್ಥಂಗೆ +ವಂದಿಸಲ್
ಒಲಿದು +ಬಿಗಿದಪ್ಪಿದರು +ಸೋದರರೆಲ್ಲ+ ಹರುಷದೊಳು
ಅಚ್ಚರಿ:
(೧) ಅಣ್ಣತಮ್ಮಂದಿರಲ್ಲಿ ಭಕ್ತಿ ಪ್ರೇಮ – ಫಲುಗುಣನು ಪೊಡಮಟ್ಟನಿಬ್ಬರಿಗುಳಿದವರು ಪಾರ್ಥಂಗೆ ವಂದಿಸ
ಲೊಲಿದು ಬಿಗಿದಪ್ಪಿದರು