ಆವ ಶರದಲಿ ಕೊರತೆ ನಿನ್ನವ
ರಾವ ಬಲದಲಿ ಕುಂದು ಭುವನದೊ
ಳಾವನೈ ಸಮಜೋಳಿ ನಿನ್ನರಮನೆಯ ಸುಭಟರಿಗೆ
ಆವನಿದ್ದೇನಹುದು ಜಗದಧಿ
ದೈವದಲಿ ಸೆಣಸಿದಿರಿ ಪಾಂಡವ
ಜೀವಿಯೆಂದರಿದರಿದು ಗದುಗಿನ ವೀರನಾರಾಯಣ (ದ್ರೋಣ ಪರ್ವ, ೧೯ ಸಂಧಿ, ೫೬ ಪದ್ಯ)
ತಾತ್ಪರ್ಯ:
ನಿನ್ನ ಅರಮನೆಯ ವೀರರಿಗೆ ಯಾವ ಅಸ್ತ್ರವಿಲ್ಲ? ಬಲದಲ್ಲಿ ಅವರಿಗೆ ನ್ಯೂನ್ಯತೆಗಳಿವೆಯೇ? ಅವರಿಗೆ ಸರಿಸಮನಾದವರು ಲೋಕದಲ್ಲಿ ಯಾರಿದ್ದಾರೆ? ಯಾರು ಇದ್ದರೇನು, ಜಗತ್ತಿನ ಅಧಿದೈವದ ವಿರುದ್ಧ ಸಮ್ರಕ್ಕಿಳಿದಿರಿ, ಅದೂ ಶ್ರೀಕೃಷ್ಣನು ಪಾಂಡವ ಜೀವಿ ಎಂದರಿತೂ ನೀವು ಪಾಂಡವರಲ್ಲಿ ಯುದ್ಧಮಾಡಿದಿರಿ ಎಂದು ಸಂಜಯನು ಹೇಳಿದನು.
ಅರ್ಥ:
ಶರ: ಬಾಣ; ಕೊರತೆ: ನ್ಯೂನ್ಯತೆ; ಬಲ: ಸೈನ್ಯ; ಕುಂದು: ತೊಂದರೆ; ಭುವನ: ಜಗತ್ತು, ಪ್ರಪಂಚ; ಸಮಜೋಳಿ: ಸರಿಸಮನಾದ; ಅರಮನೆ: ರಾಜರ ಆಲಯ; ಸುಭಟ: ಪರಾಕ್ರಮಿ; ಜಗ: ಪ್ರಪಂಚ; ಅಧಿದೈವ: ಭಗವಂತ; ಸೆಣಸು: ಹೋರಾದು; ಅರಿ: ತಿಳಿ;
ಪದವಿಂಗಡಣೆ:
ಆವ +ಶರದಲಿ +ಕೊರತೆ +ನಿನ್ನವರ್
ಆವ +ಬಲದಲಿ+ ಕುಂದು +ಭುವನದೊಳ್
ಆವನೈ +ಸಮಜೋಳಿ +ನಿನ್ನ್+ಅರಮನೆಯ +ಸುಭಟರಿಗೆ
ಆವನಿದ್ದೇನಹುದು +ಜಗದ್+ಅಧಿ
ದೈವದಲಿ +ಸೆಣಸಿದಿರಿ +ಪಾಂಡವ
ಜೀವಿ+ಎಂದ್+ಅರಿದರಿದು+ ಗದುಗಿನ +ವೀರನಾರಾಯಣ
ಅಚ್ಚರಿ:
(೧) ಆವ – ೧-೪ ಸಾಲಿನ ಮೊದಲ ಪದ
(೨) ಕೊರತೆ, ಕುಂದು – ಸಮಾನಾರ್ಥಕ ಪದ