ಗದೆಯ ಕೊಂಡನು ಕೌರವೇಂದ್ರನ
ನಿದಿರುಗೊಂಡನು ಭೀಮ ಬಲವಂ
ಕದಲಿ ವಾಮಾಂಗದಲಿ ಬಳಸಿದರಗ್ರಜಾನುಜರು
ಕದನಭೂಮಿಯ ಬಿಡೆಯರಿದು ನಿಂ
ದುದು ಚತುರ್ಬಲ ಸುತ್ತಿ ಗಗನದೊ
ಳೊದಗಿದುದು ಸುರನಿಕರ ತೀವಿ ವಿಮಾನವೀಥಿಯಲಿ (ಗದಾ ಪರ್ವ, ೫ ಸಂಧಿ, ೫೪ ಪದ್ಯ)
ತಾತ್ಪರ್ಯ:
ಭೀಮನು ಗದೆಯನ್ನು ಹಿಡಿದುಕೊಂಡು ಯುದ್ಧಕ್ಕೆ ಸಿದ್ಧನಾಗಿ ನಿಂತನು. ಅಣ್ಣತಮ್ಮಂದಿರು ಪಕ್ಕದಲ್ಲಿ ನಿಂತರು. ಯುದ್ಧದ ಅಂಕಣವನ್ನು ತಿಳಿದು ಚತುರಂಗ ಸೈನ್ಯವು ಸುತ್ತಲೂ ನಿಂತಿತು. ಆಕಾಶದಲ್ಲಿ ದೇವತೆಗಳು ವಿಮಾನಗಳಲ್ಲಿ ನೆರೆದರು.
ಅರ್ಥ:
ಗದೆ: ಮುದ್ಗರ; ಕೊಂಡು: ಪಡೆದು; ಇದಿರು: ಎದುರು; ಬಲ: ದಕ್ಷಿಣಭಾಗ; ವಾಮ: ಎಡಭಾಗ; ಬಳಸು: ಆವರಿಸುವಿಕೆ; ಅಗ್ರಜ: ಅಣ್ಣ; ಅನುಜ: ತಮ್ಮ; ಕದನ: ಯುದ್ಧ; ಭೂಮಿ: ಅವನಿ; ಬಿಡೆ: ತೊರೆ; ಅರಿ: ತಿಳಿ; ನಿಂದು: ನಿಲ್ಲು; ಚತುರ್ಬಲ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಸುತ್ತು: ತಿರುಗು; ಗಗನ: ಆಗಸ; ಒದಗು: ಲಭ್ಯ, ದೊರೆತುದು; ಸುರ: ದೇವತೆ; ನಿಕರ: ಗುಂಪು; ತೀವಿ: ಚುಚ್ಚು; ವಿಮಾನವೀಥಿ: ಆಗಸ ಮಾರ್ಗ;
ಪದವಿಂಗಡಣೆ:
ಗದೆಯ +ಕೊಂಡನು +ಕೌರವೇಂದ್ರನನ್
ಇದಿರುಗೊಂಡನು +ಭೀಮ +ಬಲವಂ
ಕದಲಿ +ವಾಮಾಂಗದಲಿ +ಬಳಸಿದರ್+ಅಗ್ರಜ+ಅನುಜರು
ಕದನಭೂಮಿಯ +ಬಿಡೆಯರಿದು +ನಿಂ
ದುದು +ಚತುರ್ಬಲ +ಸುತ್ತಿ+ ಗಗನದೊಳ್
ಒದಗಿದುದು +ಸುರನಿಕರ+ ತೀವಿ +ವಿಮಾನವೀಥಿಯಲಿ
ಅಚ್ಚರಿ:
(೧) ಬಲವಂಕ, ವಾಮಾಂಕ – ವಿರುದ್ಧ ಪದಗಳು
(೨) ಆಗಸ ಎಂದು ಹೇಳಲು – ವಿಮಾನವೀಥಿ ಪದದ ಬಳಕೆ