ಸುರನದಿಗೆ ಶಿವನಾಯ್ತು ಮಕರಾ
ಕರಕೆ ಕಳಶಜನಾಯ್ತು ತರಣಿಗೆ
ಅರಿ ವಿಧುಂತುದನಾಯ್ತು ರಥಪದತಳಿತ ಧೂಳಿಯಲಿ
ಅರರೆ ಸತ್ವ ರಜಸ್ತಮಂಗಳೊ
ಳೆರಡು ಗುಣವಡಗಿತು ರಜೋ ಗುಣ
ದುರುಳಿಯಾದುದು ಲೋಕವೆನೆ ಘಾಡಿಸಿತು ಪದಧೂಳಿ (ದ್ರೋಣ ಪರ್ವ, ೪ ಸಂಧಿ, ೫೮ ಪದ್ಯ)
ತಾತ್ಪರ್ಯ:
ಗಂಗಾನದಿಯು ಶಿವನಲ್ಲಿ ಬಂಧಿಸಲ್ಪಟ್ಟಹಾಗೆ, ಸಾಗರವನ್ನು ಅಗಸ್ತ್ಯರು ತಮ್ಮ ಕಮಂಡಲದಲ್ಲಿ ಹಿಡಿದಹಾಗೆ, ರಾಹುವು ಸೂರ್ಯನನ್ನು ಕಬಳಿಸಿದಹಾಗೆ ಅಭಿಮನ್ಯುವಿನ ರಥದ ಪಾದಧೂಳಿಯು ಸತ್ವ, ತಮ ಗುಣಗಳನ್ನು ಕಬಳಿಸಿ ಕೇವಲ ರಜೋಗುಣವೊಂದೇ ಉಳಿಯಿತು. ರಥದಪದಧೂಳಿಯು ಗಂಗಾನದಿಯನ್ನೂ ಸಾಗರವನ್ನೂ ಶೋಷಿಸಿತು, ಸೂರ್ಯಮಂಡಲವನ್ನು ಮುಚ್ಚಿತು.
ಅರ್ಥ:
ಸುರನದಿ: ಗಂಗೆ; ಶಿವ: ಶಂಕರ; ಮಕರ: ಮೊಸಳೆ; ಮಕರಾಕರ: ಸಮುದ್ರ; ಕಳಶಜ: ಅಗಸ್ತ್ಯ; ತರಣಿ: ಸೂರ್ಯ; ಅರಿ: ವೈರಿ; ವಿಧುಂತುದ: ರಾಹು; ರಥ: ಬಂಡಿ; ಪದ: ಚರಣ; ತಳಿತ: ಚಿಗುರಿದ; ಧೂಳು: ಮಣ್ಣಿನ ಕಣ; ಸತ್ವ: ಸಾರ, ಸಾತ್ವಿಕ ಗುಣ; ರಜ: ರಜಸ್ಸು ಗುಣ, ಧೂಳು; ತಮ: ಅಂಧಕಾರ, ತಮೋಗುಣ; ಗುಣ: ನಡತೆ, ಸ್ವಭಾವ; ಅಡಗು: ಅವಿತುಕೊಳ್ಳು; ಲೋಕ: ಜಗತ್ತು; ಘಾಡಿಸು: ವ್ಯಾಪಿಸು; ಪದ: ಪಾದ; ಧೂಳು: ರಜ;
ಪದವಿಂಗಡಣೆ:
ಸುರನದಿಗೆ +ಶಿವನಾಯ್ತು +ಮಕರಾ
ಕರಕೆ +ಕಳಶಜನಾಯ್ತು +ತರಣಿಗೆ
ಅರಿ+ ವಿಧುಂತುದನಾಯ್ತು +ರಥ+ಪದ+ತಳಿತ+ ಧೂಳಿಯಲಿ
ಅರರೆ+ ಸತ್ವ+ ರಜಸ್+ ತಮಂಗಳೊಳ್
ಎರಡು +ಗುಣವ್+ಅಡಗಿತು +ರಜೋ +ಗುಣ
ದುರುಳಿಯಾದುದು +ಲೋಕವೆನೆ +ಘಾಡಿಸಿತು+ ಪದಧೂಳಿ
ಅಚ್ಚರಿ:
(೧) ಉಪಮಾನದ ಪ್ರಯೋಗ – ಸುರನದಿಗೆ ಶಿವನಾಯ್ತು ಮಕರಾಕರಕೆ ಕಳಶಜನಾಯ್ತು ತರಣಿಗೆ
ಅರಿ ವಿಧುಂತುದನಾಯ್ತು ರಥಪದತಳಿತ ಧೂಳಿಯಲಿ