ಪದ್ಯ ೨೨: ಊರಿನ ಜನರು ಬ್ರಹ್ಮನನ್ನೇಕೆ ಬಯ್ದರು?

ಗಣಿಕೆಯರನೇಕಾದಶಾಕ್ಷೊ
ಹಿಣಿಯ ನೃಪರಾಣಿಯರನಾ ಪ
ಟ್ಟಣ ಜನದ ಪರಿಜನದ ಬಹುಕಾಂತಾ ಕದಂಬಕವ
ರಣಮಹೀದರುಶನಕೆ ಬಹು ಸಂ
ದಣಿಯ ಕಂಡರು ಧರ್ಮಸುತನಿ
ನ್ನುಣಲಿ ಧರಣಿಯನೆಂದು ಸುಯ್ದರು ಬಯ್ದು ಕಮಲಜನ (ಗದಾ ಪರ್ವ, ೧೧ ಸಂಧಿ, ೨೨ ಪದ್ಯ)

ತಾತ್ಪರ್ಯ:
ಏಕಾದಶಾಕ್ಷೋಣಿಯ ಸೈನ್ಯದಲ್ಲಿದ್ದ ರಾಜರೆಲ್ಲರ ರಾಣಿಯರು, ಪಟ್ಟಣದ ಸ್ತ್ರೀಗಳ ಗುಂಪು, ಗಣಿಕೆಯರು ಇವರೆಲ್ಲರೂ ರಣರಮ್ಗಕ್ಕೆ ಬರುವುದನ್ನು ಅವರು ಕಂಡು, ಇನ್ನು ಧರ್ಮಜನೇ ಈ ಭೂಮಿಯನ್ನು ಅನುಭವಿಸಲಿ, ಎಂದು ಉದ್ಗರಿಸಿ, ನಿಟ್ಟುಸಿರು ಬಿಟ್ಟು ಹಣೆಯ ಬರಹವನ್ನು ಬರೆದ ಚತುರ್ಮುಖ ಬ್ರಹ್ಮನನ್ನು ಬೈದರು.

ಅರ್ಥ:
ಗಣಿಕೆ: ವೇಶ್ಯೆ; ಏಕಾದಶ: ಹನ್ನೊಂದು ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ನೃಪ: ರಾಜ; ರಾಣಿ: ರಸೈ; ಪಟ್ಟಣ: ಊರು; ಜನ: ಮನುಷ್ಯರ ಗುಂಪು; ಪರಿಜನ: ಬಂಧುಜನ; ಬಹು: ಬಹಳ; ಕಾಂತಾ: ಹೆಣ್ಣು; ಕದಂಬ: ಗುಂಪು; ರಣ: ಯುದ್ಧ; ರಣಮಹೀ: ರಣಭೂಮಿ; ; ದರುಶನ: ನೋಟ; ಸಂದಣಿ: ಗುಂಪು; ಕಂಡು: ನೋಡು; ಸುತ: ಮಗ; ಉಣು: ಊಟಮಾಡು; ಧರಣಿ: ಭೂಮಿ; ಸುಯ್ದು: ನಿಟ್ಟುಸಿರು; ಬಯ್ದು: ಜರಿ, ಹಂಗಿಸು; ಕಮಲಜ: ಬ್ರಹ್ಮ ;

ಪದವಿಂಗಡಣೆ:
ಗಣಿಕೆಯರನ್+ಏಕಾದಶ+ಅಕ್ಷೊ
ಹಿಣಿಯ +ನೃಪ+ರಾಣಿಯರನ್ +ಆ+ ಪ
ಟ್ಟಣ +ಜನದ +ಪರಿಜನದ +ಬಹು+ಕಾಂತಾ +ಕದಂಬಕವ
ರಣಮಹೀ+ದರುಶನಕೆ +ಬಹು +ಸಂ
ದಣಿಯ+ ಕಂಡರು +ಧರ್ಮಸುತನಿನ್
ಉಣಲಿ +ಧರಣಿಯನೆಂದು +ಸುಯ್ದರು +ಬಯ್ದು +ಕಮಲಜನ

ಅಚ್ಚರಿ:
(೧) ಸುಯ್ದರು, ಬಯ್ದು – ಪದಗಳ ಬಳಕೆ
(೨) ಜನ, ಪರಿಜನ – ಜನ ಪದದ ಬಳಕೆ

ಪದ್ಯ ೩೯: ದೇವತೆಗಳು ಯಾರ ಮುಡಿಗೆ ಹೂ ಮಳೆಗರೆದರು?

ಅರಸ ಕೇಳಾಶ್ಚರಿಯವನು ನಿ
ಮ್ಮರಸನಾಹವ ಸಫಲ ಸುರಕುಲ
ವರಳ ಮಳೆಗರೆದುದು ಕಣಾ ಕುರುಪತಿಯ ಸಿರಿಮುಡಿಗೆ
ಅರಿನೃಪರು ತಲೆಗುತ್ತಿದರು ಮುರ
ಹರ ಯುಧಿಷ್ಠಿರ ಪಾರ್ಥ ಯಮಳರು
ಬೆರಲ ಮೂಗಿನಲಿದ್ದು ಸುಯ್ದರು ಬಯ್ದು ದುಷ್ಕೃತವ (ಗದಾ ಪರ್ವ, ೭ ಸಂಧಿ, ೩೯ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ, ಆಶ್ಚರ್ಯಕರವಾದ ಸಂಗತಿಯನ್ನು ಕೇಳು. ಕೌರವನು ಯುದ್ಧದಲ್ಲಿ ಸಫಲನಾದನು. ಕೌರವನ ಸಿರಿಮುಡಿಗೆ ದೇವತೆಗಳು ಹೂ ಮಳೆಗರೆದರು. ವೈರಿರಾಜರು ತಲೆ ತಗ್ಗಿಸಿದರು. ಶ್ರೀಕೃಷ್ಣನೂ, ಪಾಂಡವರೂ ಮೂಗಿನ ಮೇಲೆ ಬೆರಳಿಟ್ಟು ನಿಟ್ಟುಸಿರುಗರೆದು ತಮ್ಮ ಪಾಪ ಕರ್ಮವನ್ನು ಬೈದುಕೊಂಡರು.

ಅರ್ಥ:
ಅರಸ: ರಾಜ; ಆಶ್ಚರಿಯ: ಅದ್ಭುತ; ಅರಸ: ರಾಜ; ಆಹವ: ಯುದ್ಧ; ಸಫಲ: ಫಲಕಾರಿಯಾದ; ಸುರಕುಲ: ದೇವತೆಗಳ ಗುಂಪು; ಅರಳ: ಹೂವು; ಮಳೆ: ವರ್ಶ; ಸಿರಿಮುಡಿ: ಶ್ರೇಷ್ಠವಾದ ಶಿರ; ಅರಿ: ವೈರಿ; ನೃಪ: ರಾಜ; ತಲೆ: ಶಿರ; ಕುತ್ತು: ತಗ್ಗಿಸು; ಮುರಹರ: ಕೃಷ್ಣ; ಯಮಳ: ಅವಳಿ ಮಕ್ಕಳು; ಬೆರಳು: ಅಂಗುಲಿ; ಮೂಗು: ನಾಸಿಕ; ಸುಯ್ದು: ನಿಟ್ಟುಸಿರು; ಬಯ್ದು: ಜರೆದು; ದುಷ್ಕೃತ: ಕೆಟ್ಟ ಕೆಲಸ, ಕರ್ಮ;

ಪದವಿಂಗಡಣೆ:
ಅರಸ +ಕೇಳ್+ಆಶ್ಚರಿಯವನು +ನಿ
ಮ್ಮರಸನ್+ಆಹವ +ಸಫಲ+ ಸುರಕುಲವ್
ಅರಳ +ಮಳೆಗರೆದುದು +ಕಣಾ +ಕುರುಪತಿಯ +ಸಿರಿಮುಡಿಗೆ
ಅರಿ+ನೃಪರು +ತಲೆಗುತ್ತಿದರು +ಮುರ
ಹರ +ಯುಧಿಷ್ಠಿರ +ಪಾರ್ಥ +ಯಮಳರು
ಬೆರಳ+ ಮೂಗಿನಲಿದ್ದು+ ಸುಯ್ದರು+ ಬಯ್ದು +ದುಷ್ಕೃತವ

ಅಚ್ಚರಿ:
(೧) ಅರಸ, ನೃಪ -ಸಮಾನಾರ್ಥಕ ಪದ
(೨) ಜಯವನ್ನು ಆಚರಿಸಿದ ಪರಿ – ಸುರಕುಲವರಳ ಮಳೆಗರೆದುದು ಕಣಾ ಕುರುಪತಿಯ ಸಿರಿಮುಡಿಗೆ