ಉಂಟು ಶಿವ ಶಿವ ಹುಸಿಯನುಡಿ ನಿನ
ಗುಂಟೆ ಗೆಲ್ಲದೆ ಮಾಣೆ ಶೌರ್ಯದ
ಗಂಟು ಬಲುಹದ ಕಂಡು ಬಲ್ಲೆನು ಹಲವುಬಾರಿಯಲಿ
ಸುಂಟಿಗೆಯನಾಯ್ವೆನು ಕಣಾ ಬಲು
ಕಂಟಕವಲೇ ನರನ ನುಡಿ ನೀ
ನೆಂಟುಮಡಿ ಗಳಹಿದರೆ ತಪ್ಪೇನೆಂದನಾ ಭೀಮ (ದ್ರೋಣ ಪರ್ವ, ೧೩ ಸಂಧಿ, ೫೩ ಪದ್ಯ)
ತಾತ್ಪರ್ಯ:
ನಿನ್ನ ಮಾತು ನಿಜ, ಶಿವ ಶಿವಾ ಸುಳ್ಳುಮಾತು ನಿನ್ನಿಂದ ಬರುವುದಿಲ್ಲ. ನೀನು ಗೆಲ್ಲದೆ ಬಿಡುವುದಿಲ್ಲ. ನಿನ್ನ ಸತ್ಯ ನನಗೆ ಚೆನ್ನಾಗಿ ಗೊತ್ತು. ಈಗ ತಾನೇ ಹದಿನೆಂಟು ಬಾರಿ ನಾನು ನೋಡಿದ್ದೇನೆ, ಏನು ಮಾಡುತ್ತೀ, ಅರ್ಜುನನ ಪ್ರತಿಜ್ಞೆ ನನಗೆ ಅಡ್ಡ ಬರುತ್ತಿದೆ, ಇಲ್ಲದಿದ್ದರೆ ನಿನ್ನ ಹೃದಯದ ಮಾಂಸವನ್ನು ಆರಿಸಿ ಬಿಡುತ್ತಿದ್ದೆ. ನಿಣು ಎಂಟುಮಡಿ ಬೊಗಳಿದರೂ ತಪ್ಪೇನು ಎಂದು ಭೀಮನು ಗುಡುಗಿದನು.
ಅರ್ಥ:
ಉಂಟು: ಇದೆ; ಶಿವ: ಶಂಕರ; ಹುಸಿ: ಸುಳ್ಳು; ನುಡಿ: ಮಾತು; ಗೆಲ್ಲು: ಜಯಿಸು; ಮಾಣು: ನಿಲ್ಲಿಸು; ಶೌರ್ಯ: ಸಾಹಸ, ಪರಾಕ್ರಮ; ಗಂಟು: ಮೂಟೆ; ಬಲುಹ: ಶಕ್ತಿ; ಕಂಡು: ನೋಡು; ಬಲ್ಲೆ: ತಿಳಿ; ಹಲವು: ಬಹಳ; ಬಾರಿ: ಸಲ, ಸರದಿ; ಸುಂಟಿಗೆ: ಹೃದಯದ ಮಾಂಸ; ಆಯ್ವೆ: ಹುಡುಕು; ಕಂಟಕ: ಮುಳ್ಳು, ವಿಪತ್ತು; ನರ: ಮನುಷ್ಯ; ನುಡಿ: ಮಾತು; ಮಡಿ: ಪಟ್ಟು; ಗಳಹು: ಪ್ರಲಾಪಿಸು, ಹೇಳು; ತಪ್ಪು: ಸರಿಯಿಲ್ಲದ್ದು;
ಪದವಿಂಗಡಣೆ:
ಉಂಟು +ಶಿವ +ಶಿವ +ಹುಸಿಯನುಡಿ +ನಿನ
ಗುಂಟೆ +ಗೆಲ್ಲದೆ +ಮಾಣೆ +ಶೌರ್ಯದ
ಗಂಟು +ಬಲುಹದ +ಕಂಡು +ಬಲ್ಲೆನು +ಹಲವು+ಬಾರಿಯಲಿ
ಸುಂಟಿಗೆಯನ್+ಆಯ್ವೆನು +ಕಣಾ +ಬಲು
ಕಂಟಕವಲೇ +ನರನ+ ನುಡಿ +ನೀನ್
ಎಂಟುಮಡಿ +ಗಳಹಿದರೆ +ತಪ್ಪೇನ್+ಎಂದನಾ +ಭೀಮ
ಅಚ್ಚರಿ:
(೧) ಉಂಟು, ಗಂಟು, ಎಂಟು – ಪ್ರಾಸ ಪದಗಳು
(೨) ಕರ್ಣನನ್ನು ಹೊಗಳುವ ಪರಿ – ಶಿವ ಶಿವ ಹುಸಿಯನುಡಿ ನಿನಗುಂಟೆ