ಪದ್ಯ ೧೭: ಕರ್ಣನು ಧೃತರಾಷ್ಟ್ರನಿಗೆ ಏನು ಹೇಳಿದ?

ಈ ಸುಖದ ಸುಗ್ಗಿಯಲಿ ನಿನ್ನವ
ರೇಸು ಹೆಚ್ಚುಗೆಯಾಗಿ ಬದುಕಿದ
ರೈಸುವನು ನೆರೆನೋಡಿ ಹಿಗ್ಗದೆ ಪಾಂಡುನಂದನರು
ಘಾಸಿಯಾದರು ಘಟ್ಟಬೆಟ್ಟದ
ಪೈಸರದಲೆಂದಳಲಿ ಮರುಗುತ
ಸೂಸಿದೈ ಸಾಹಿತ್ಯ ಭಾಷೆಯನೆಂದನಾ ಕರ್ಣ (ಅರಣ್ಯ ಪರ್ವ, ೧೮ ಸಂಧಿ ೧೭ ಪದ್ಯ)

ತಾತ್ಪರ್ಯ:
ನಿನ್ನ ಮಕ್ಕಳಿಗೆ ಈಗ ಸುಖದ ಸುಗ್ಗಿ, ಈಗ ನಿನ್ನ ಮಕ್ಕಳು ಎಷ್ಟು ಹೆಚ್ಚಿನ ಸುಖದಿಂದ ಬದುಕುತ್ತಿರ್ವರೋ ಎಂದು ನೋಡಿ ಹಿಗ್ಗದೆ, ಪಾಂಡವರು ಬೆಟ್ಟ ಗುಡ್ಡಗಳ ಸಾಲಿನಲ್ಲಿ ಎಷ್ಟು ನಲುಗುತ್ತಿರುವರೋ ಎಂದು ಮರುಗುತ್ತಾ ಅಲಂಕಾರದ ಮಾತುಗಳನ್ನು ಹೇಳುತ್ತಿರುವೆ ಎಂದು ಕರ್ಣನು ಧೃತರಾಷ್ಟ್ರನಿಗೆ ಹೇಳಿದನು.

ಅರ್ಥ:
ಸುಖ: ನೆಮ್ಮದಿ, ಸಂತಸ; ಸುಗ್ಗಿ: ಹಬ್ಬ, ಪರ್ವ, ಹೆಚ್ಚಳ; ಹೆಚ್ಚು: ಅಧಿಕ; ಬದುಕು: ಜೀವಿಸು; ನೆರೆ: ಸಮೀಪ, ಹತ್ತಿರ; ನೋಡು: ವೀಕ್ಷಿಸು; ಹಿಗ್ಗು: ಆನಂದ; ನಂದನ: ಮಕ್ಕಳು; ಘಾಸಿ: ಆಯಾಸ, ದಣಿವು; ಘಟ್ಟ: ಬೆಟ್ಟಗಳ ಸಾಲು; ಬೆಟ್ಟ: ಗಿರಿ; ಪೈಸರ: ಇಳಿಜಾರಾದ ಪ್ರದೇಶ; ಅಳಲು: ಕೊರಗು; ಮರುಗು: ತಳಮಳ, ಸಂಕಟ; ಸೂಸು: ಎರಚುವಿಕೆ, ಚಲ್ಲುವಿಕೆ; ಸಾಹಿತ್ಯ: ಸಂಬಂಧ, ಸೃಜನಾತ್ಮಕ ಬರವಣಿಗೆ; ಭಾಷೆ: ಮಾತು, ನುಡಿ;

ಪದವಿಂಗಡಣೆ:
ಈ+ ಸುಖದ +ಸುಗ್ಗಿಯಲಿ +ನಿನ್ನವರ್
ಏಸು +ಹೆಚ್ಚುಗೆಯಾಗಿ +ಬದುಕಿದರ್
ಐಸುವನು +ನೆರೆನೋಡಿ +ಹಿಗ್ಗದೆ +ಪಾಂಡು+ನಂದನರು
ಘಾಸಿಯಾದರು +ಘಟ್ಟ+ಬೆಟ್ಟದ
ಪೈಸರದಲೆಂದ್+ಅಳಲಿ +ಮರುಗುತ
ಸೂಸಿದೈ +ಸಾಹಿತ್ಯ +ಭಾಷೆಯನೆಂದನಾ +ಕರ್ಣ

ಅಚ್ಚರಿ:
(೧) ಧೃತರಾಷ್ಟ್ರನ ಕೊರಗನ್ನು ಅಲ್ಲಗಳೆಯುವ ಪರಿ – ಮರುಗುತ ಸೂಸಿದೈ ಸಾಹಿತ್ಯ ಭಾಷೆಯನೆಂದನಾ ಕರ್ಣ

ಪದ್ಯ ೫೩: ಶಾಪದಿಂದ ಒಳಿತಾಗುವುದೆಂದು ಹೇಗೆ ಇಂದ್ರನು ಹೇಳಿದನು?

ಖೋಡಿಯಿಲ್ಲೆಲೆ ಮಗನೆ ಚಿಂತಿಸ
ಬೇಡ ನಿಮ್ಮಜ್ಞಾತದಲಿ ನೆರೆ
ಜೋಡಲಾ ಜಾಣಾಯ್ಲ ರಿಪುಜನ ದೃಷ್ಟಿ ಶರಹತಿಗೆ
ಕೂಡಿತಿದು ಪುಣ್ಯದಲಿ ಸುರಸತಿ
ಮಾಡಿದಪಕೃತಿ ನಿನ್ನ ಭಾಷೆಯ
ಬೀಡ ಸಲಹಿದುದರಿಯೆ ನೀ ಸಾಹಿತ್ಯನಲ್ಲೆಂದ (ಅರಣ್ಯ ಪರ್ವ, ೯ ಸಂಧಿ, ೫೩ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ, ಊರ್ವಶಿಯ ಶಾಪದಿಂದ ನಿನಗಾವ ಹಾನಿಯೂ ಇಲ್ಲ, ನಿಪುಣರಾದ ಶತ್ರುಗಳು ನಿನ್ನನ್ನು ಹುಡುಕುತ್ತಾ ಬಂದಾಗ ಅವರ ದೃಷ್ಟಿ ಬಾಣಗಳಿಂದ ನಪುಂಸಕತನದ ಕವಚವು ನಿನ್ನನ್ನು ಕಾಪಾಡುತ್ತದೆ. ಊರ್ವಶಿಯು ಶಾಪಕೊಟ್ಟದ್ದು ನಿನ್ನ ಪೂರ್ವ ಜನ್ಮದ ಪುಣ್ಯದಿಂದಲೇ ಆಯಿತು. ಅವಳ ಅಪಕಾರ ನಿಮ್ಮ ಪ್ರತಿಜ್ಞೆಯನ್ನುಳಿಸಿಕೊಡುತ್ತದೆ ಎನ್ನುವುದನ್ನು ತಿಳಿಯದವನು ನೀನು ಎಂದು ಇಂದ್ರನು ಅರ್ಜುನನನ್ನು ಸಂತೈಸಿದನು.

ಅರ್ಥ:
ಖೋಡಿ: ದುರುಳತನ; ಮಗ: ಸುತ; ಚಿಂತಿಸು: ಯೋಚಿಸು; ಅಜ್ಞಾತ: ತಿಳಿಯದ; ನೆರೆ: ಗುಂಪು; ಜೋಡು: ಜೊತೆ; ಜಾಣಾಯ್ಲ: ಬುದ್ಧಿವಂತ, ಜಾಣ; ರಿಪು: ವೈರಿ; ಜನ: ಮನುಷ್ಯರ ಗುಂಪು; ದೃಷ್ಟಿ: ನೋಟ; ಶರ: ಬಾಣ; ಹತಿ: ಹೊಡೆತ; ಕೂಡು: ಸೇರು; ಪುಣ್ಯ: ಸದಾಚಾರ; ಸುರಸತಿ: ಅಪ್ಸರೆ; ಅಪಕೃತಿ: ಕೆಟ್ಟ ಕಾರ್ಯ; ಭಾಷೆ: ನುಡಿ; ಬೀಡು: ವಸತಿ; ಸಲಹು: ಕಾಪಾಡು; ಅರಿ: ತಿಳಿ; ಸಾಹಿತ್ಯ: ಸಾಮಗ್ರಿ, ಸಲಕರಣೆ;

ಪದವಿಂಗಡಣೆ:
ಖೋಡಿ+ಇಲ್ಲೆಲೆ +ಮಗನೆ +ಚಿಂತಿಸ
ಬೇಡ +ನಿಮ್ಮ್+ಅಜ್ಞಾತದಲಿ +ನೆರೆ
ಜೋಡಲಾ +ಜಾಣಾಯ್ಲ +ರಿಪುಜನ+ ದೃಷ್ಟಿ +ಶರಹತಿಗೆ
ಕೂಡಿತ್+ಇದು +ಪುಣ್ಯದಲಿ+ ಸುರಸತಿ
ಮಾಡಿದ್+ಅಪಕೃತಿ +ನಿನ್ನ +ಭಾಷೆಯ
ಬೀಡ +ಸಲಹಿದುದ್+ಅರಿಯೆ+ ನೀ +ಸಾಹಿತ್ಯನಲ್ಲೆಂದ

ಅಚ್ಚರಿ:
(೧) ಶಾಪವು ಹೇಗೆ ಉಪಕಾರ ಎಂದು ಹೇಳುವ ಪರಿ – ನಿಮ್ಮಜ್ಞಾತದಲಿ ನೆರೆ ಜೋಡಲಾ ಜಾಣಾಯ್ಲ ರಿಪುಜನ ದೃಷ್ಟಿ ಶರಹತಿಗೆ
(೨) ಸುರಸತಿ, ಶರಹತಿ – ಪ್ರಾಸ ಪದಗಳು

ಪದ್ಯ ೨೬: ಜೀವಾತ್ಮ ಹೋದಮೇಲೆ ಏನೆಂದು ಸಂಭೋದಿಸುತ್ತಾರೆ?

ಅರಸನೊಡೆಯನು ದಂಡನಾಥನು
ಗುರುಹಿರಿಯನುತ್ತಮನು ದೈವಾ
ಪರನು ಸಾಹಿತ್ಯನು ಸದಸ್ಯನು ಸತ್ಪುರುಷನೆಂದು
ಪರಿಪರಿಯ ಗುಣನಾಮದೊಳಹಂ
ಕರಿಸುವರು ಜೀವಾತ್ಮ ತೊಲಗಿದೊ
ಡಿರದೆ ಹೆಣನೆಂದೆಂಬರೈ ಭೂಪಾಲ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೨೬ ಪದ್ಯ)

ತಾತ್ಪರ್ಯ:
ನಾನು ರಾಜ, ಯಜಮಾನ, ಸೇನಾಧಿಪತಿ, ಆಚಾರ್ಯ, ದೊಡ್ಡವ, ಶ್ರೇಷ್ಠನು, ದೇವತ ಆರಾಧಕನು, ಸಾಹಿತಿಯು, ಸದಸ್ಯನು, ಒಳ್ಳೆಯ ಮನುಷ್ಯನು, ಹೀಗೆ ಹಲವಾರು ನಾಮಾವಳಿಯನ್ನು ಅಲಂಕರಿಸಿ ಅಹಂಕಾರದಿಂದ ಮೆರೆಯುತ್ತಿರುವ ದೇಹವು, ಅದರೊಳಗಿರುವ ಜೀವಾತ್ಮವು ಹೋದಮೇಲೆ ಹೆಣವೆಂಬ ಒಂದೇ ಪದದಿಂದ ಕರೆಯುತ್ತಾರೆ ಎಂದು ಸನತ್ಸುಜಾತರು ಜೀವಿತದ ಅರೆಕ್ಷಣದ ಬದುಕಿನ ಸತ್ಯವನ್ನು ಹೇಳಿದರು.

ಅರ್ಥ:
ಅರಸ: ರಾಜ; ಒಡೆಯ: ಯಜಮಾನ; ದಂಡನಾಥ: ಸೇನಾಧಿಪತಿ; ಗುರು: ಆಚಾರ್ಯ; ಹಿರಿಯ: ದೊಡ್ಡವ; ಉತ್ತಮ: ಶ್ರೇಷ್ಠ; ದೈವಾಪರ: ದೇವರಲ್ಲಿ ನಂಬಿಕೆಯಿರುವವ; ಸಾಹಿತಿ: ಸಾಹಿತ್ಯಕೃಷಿ ಮಾದುವವ; ಸದಸ್ಯ: ಸಂಘ, ಸಮಿತಿ ಘಟಕಗಳಲ್ಲಿ ಸಂಬಂಧವನ್ನು ಹೊಂದಿರುವವನು; ಸತ್ಪುರುಷ: ಒಳ್ಳೆಯ ಮನುಷ್ಯ; ಪರಿಪರಿ: ಹಲವಾರು; ಗುಣ: ನಡತೆ, ಸ್ವಭಾವ; ನಾಮ: ಹೆಸರು; ಅಹಂಕರಿಸು: ನಾನು ಎಂಬುದನ್ನು ಮೆರೆಸು, ಗರ್ವ; ಜೀವಾತ್ಮ: ಜೀವಿಗಳಲ್ಲೆಲ್ಲ ಇರುವ ಆತ್ಮ; ತೊಲಗು: ಹೊರಹೋಗು, ತ್ಯಜಿಸು; ಹೆಣ: ಜೀವವಿಲ್ಲದ, ಚರ; ಭೂಪಾಲ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಅರಸನ್+ಒಡೆಯನು +ದಂಡನಾಥನು
ಗುರು+ಹಿರಿಯನ್+ಉತ್ತಮನು +ದೈವಾ
ಪರನು +ಸಾಹಿತ್ಯನು+ ಸದಸ್ಯನು+ ಸತ್ಪುರುಷನೆಂದು
ಪರಿಪರಿಯ +ಗುಣನಾಮದೊಳ್+ಅಹಂ
ಕರಿಸುವರು +ಜೀವಾತ್ಮ +ತೊಲಗಿದೊಡ್
ಇರದೆ +ಹೆಣನೆಂದ್+ಎಂಬರೈ +ಭೂಪಾಲ +ಕೇಳೆಂದ

ಅಚ್ಚರಿ:
(೧) ೧೦ ರೀತಿಯ ಗುಣವಾಚಕಗಳನ್ನು ದೇಹಕ್ಕೆ ಹೇಳುವ ಪರಿಯನ್ನು ತೋರಿಸುವ ಪದ್ಯ
(೨) ‘ಸ’ ಕಾರದ ತ್ರಿವಳಿ ಪದ – ಸಾಹಿತ್ಯನು ಸದಸ್ಯನು ಸತ್ಪುರುಷನೆಂದು;