ಪದ್ಯ ೧೬: ಬೇಡನು ಭೀಮನಿಗೆ ಏನೆಂದು ಹೇಳಿದನು?

ಇದೆ ಮಹಾಕಾಂತಾರವತಿ ದೂ
ರದಲಿ ವೃಕ ಶಾರ್ದೂಲ ಕೇಸರಿ
ಕದಲಿ ಕಳಭಕ್ರೋಢ ಶಿಖಿಲೂಲಾಯ ಸಾರಂಗ
ಮದದ ರಹಿಯಲಿ ಮಾನಿಸರು ಸೋಂ
ಕಿದರೆ ಸೆಡೆಯವು ಹೊಲನ ಹೊದರಿ
ಕ್ಕಿದವು ದೀಹದ ಹಿಂಡಿನಂತಿದೆ ಜೀಯ ಚಿತ್ತೈಸು (ಅರಣ್ಯ ಪರ್ವ, ೧೪ ಸಂಧಿ, ೧೬ ಪದ್ಯ)

ತಾತ್ಪರ್ಯ:
ಅತಿ ದೂರದಲ್ಲಿ ಒಂದು ಮಹಾರಣ್ಯವಿದೆ. ಅಲ್ಲಿ ತೋಳ, ಹುಲಿ, ಸಿಂಹ, ಜಿಂಕೆ, ಆನೆಯ ಮರಿಗಳು, ಕಪಿ, ನವಿಲು, ಕಾಡುಕೋಣ, ಸಾರಂಗಗಳು ಮದಿಸಿ ಮನುಷ್ಯರು ಹೋದರೂ ಬೆದರುವುದಿಲ್ಲ ಹೊಲಗಳ ಮೇಲೆ ಬಿದ್ದು ಸಾಕಿದ ಜಿಂಕೆ, ಆಡು ಮೊದಲಾದವುಗಳಂತೆ ಹಾಳುಮಾದುತ್ತಿವೆ, ಜೀಯಾ ಇದನ್ನು ಮನಸ್ಸಿಗೆ ತಂದುಕೋ ಎಂದು ಅವನು ಭೀಮನಿಗೆ ಹೇಳಿದನು.

ಅರ್ಥ:
ಮಹಾ: ದೊಡ್ಡ; ಕಾಂತಾರ: ಅಡವಿ, ಅರಣ್ಯ; ಅತಿ: ಬಹಳ; ದೂರ: ಅಂತರ; ವೃಕ: ತೋಳ; ಶಾರ್ದೂಲ: ಹುಲಿ; ಕೇಸರಿ: ಸಿಂಹ; ಕದಲಿ: ಜಿಂಕೆ; ಕಳಭ: ಆನೆಮರಿ; ಲೂಲಾಯ: ಕೋಣ; ಸಾರಂಗ: ಜಿಂಕೆ; ಕ್ರೋಡ: ಹಂದಿ; ಮದ: ಸೊಕ್ಕು; ರಹಿ: ದಾರಿ, ಮಾರ್ಗ; ಮಾನಿಸ: ಮನುಷ್ಯ; ಸೋಂಕು: ಮುಟ್ಟುವಿಕೆ, ಸ್ಪರ್ಶ; ಸೆಡೆ: ಗರ್ವಿಸು, ಅಹಂಕರಿಸು; ಹೊಲ: ಸ್ಥಳ, ಪ್ರದೇಶ; ಹೊದರು: ತೊಡಕು, ತೊಂದರೆ ; ಇಕ್ಕು: ಇರಿಸು, ಇಡು; ದೀಹ: ಬೇಟೆಗೆ ಉಪಯೋಗಿಸಲು ಪಳಗಿಸಿದ ಪ್ರಾಣಿ, ಸೆಳೆ; ಹಿಂಡು: ಗುಂಪು, ಸಮೂಹ; ಜೀಯ: ಒಡೆಯ; ಚಿತ್ತೈಸು: ಗಮನವಿಟ್ಟು ಕೇಳು;

ಪದವಿಂಗಡಣೆ:
ಇದೆ+ ಮಹಾಕಾಂತಾರವ್+ಅತಿ +ದೂ
ರದಲಿ +ವೃಕ +ಶಾರ್ದೂಲ +ಕೇಸರಿ
ಕದಲಿ+ ಕಳಭ+ಕ್ರೋಢ+ ಶಿಖಿ+ಲೂಲಾಯ +ಸಾರಂಗ
ಮದದ +ರಹಿಯಲಿ +ಮಾನಿಸರು +ಸೋಂ
ಕಿದರೆ +ಸೆಡೆಯವು +ಹೊಲನ +ಹೊದರ್
ಇಕ್ಕಿದವು +ದೀಹದ+ ಹಿಂಡಿನಂತಿದೆ+ ಜೀಯ +ಚಿತ್ತೈಸು

ಅಚ್ಚರಿ:
(೧) ಪ್ರಾಣಿಗಳನ್ನು ಹೆಸರಿಸುವ ಪರಿ – ವೃಕ, ಶಾರ್ದೂಲ, ಕೇಸರಿ, ಕದಲಿ, ಕಳಭ, ಕ್ರೋಢ ಶಿಖಿ, ಲೂಲಾಯ, ಸಾರಂಗ

ಪದ್ಯ ೫೧: ಅಗ್ನಿಯ ಆಹುತಿಗೆ ಯಾವ ಪ್ರಾಣಿಗಳು ಬಲಿಯಾದವು?

ಧರಣಿಪತಿ ಕೇಳ್ ಶರಭ ಮೃಗಪತಿ
ಕರಿಕಳಭ ಶಾರ್ದೂಲ ಸೂಕರ
ಕರಡಿ ಕಾಸರಶಲ ಮೃಗಾದನ ಖಡ್ಗ ಗೋಮಾಯು
ಎರಳೆ ಮೊಲ ಸಾರಂಗ ವಾನರ
ನುರು ಕುರಂಗ ಪ್ರಮುಖ ಮೃಗಕುಲ
ವುರುಬಿ ಬಿದ್ದುದು ದಳ್ಳುರಿಯ ಬೆಳ್ಳರವಲೆಗಳಲಿ (ಆದಿ ಪರ್ವ, ೨೦ ಸಂಧಿ, ೫೧ ಪದ್ಯ)

ತಾತ್ಪರ್ಯ:
ಅಗ್ನಿಯ ಆಹುತಿಗೆ ಕಾಡಿನೊಳಗಿದ್ದ ಶರಭ, ಸಿಂಹ, ಆನೆ, ಆನೆಯಮರಿ, ಹುಲಿ, ಹಂದಿ, ಕರಡಿ, ಕಾಡುಕೋಣ, ಮುಳ್ಳುಹಂದಿ, ಕತ್ತೆಕಿರುಬ, ಖಡ್ಗಮೃಗ, ನರಿ, ಜಿಂಕೆ, ಮೊಲ, ಸಾರಂಗ, ಕಪಿ, ಜಿಂಕೆ ಮೊದಲಾದ ಪ್ರಾಣಿಗಳು ಆಹುತಿಯಾದವು.

ಅರ್ಥ:
ಧರಣಿ: ಭೂಮಿ; ಧರಣಿಪತಿ: ರಾಜ; ಶರಭ:ಎಂಟು ಕಾಲುಗಳುಳ್ಳ ಒಂದು ಕಾಲ್ಪನಿಕ ಪ್ರಾಣಿ; ಮೃಗ: ಪ್ರಾಣಿ; ಮೃಗಪತಿ: ಸಿಂಹ; ಕರಿ: ಆನೆ; ಕರಿಕ: ಕರಿ ಬಣ್ಣದವನು; ಕರಿಕಳಭ: ಆನೆಮರಿ; ಶಾರ್ದೂಲ:ಹುಲಿ, ವ್ಯಾಘ್ರ; ಸೂಕರ:ಹಂದಿ, ವರಾಹ; ಕಾಸರ:ಕಾಡುಕೋಣ; ಶಲ: ಮುಳ್ಳುಹಂದಿಯ ಮೈಮೇಲಿರುವ ಮುಳ್ಳು; ಗೋಮಾಯು: ನರಿ; ಖಡ್ಗ: ಘೇಂಡಾಮೃಗ; ಎರಳೆ:ಜಿಂಕೆ; ಮೊಲ: ಶಶ; ಸಾರಂಗ: ಜಿಂಕೆ; ವಾನರ: ಕೋತಿ; ನುರು: ; ಕುರಂಗ: ಜಿಂಕೆ; ಪ್ರಮುಖ: ಮುಖ್ಯವಾದ; ಮೃಗಕುಲ: ಪ್ರಾಣಿಗಳ ವಂಶ; ದಳ್ಳುರಿ: ಬೆಂಕಿ; ಬೆಳ್ಳಾರ: ಒಂದು ಬಗೆಯ ಬಲೆ;

ಪದವಿಂಗಡಣೆ:
ಧರಣಿಪತಿ +ಕೇಳ್ +ಶರಭ +ಮೃಗಪತಿ
ಕರಿಕಳಭ+ ಶಾರ್ದೂಲ +ಸೂಕರ
ಕರಡಿ +ಕಾಸರ+ಶಲ+ ಮೃಗಾದನ+ ಖಡ್ಗ +ಗೋಮಾಯು
ಎರಳೆ +ಮೊಲ +ಸಾರಂಗ +ವಾನರ
ನುರು +ಕುರಂಗ +ಪ್ರಮುಖ +ಮೃಗಕುಲ
ವುರುಬಿ+ ಬಿದ್ದುದು +ದಳ್ಳುರಿಯ +ಬೆಳ್ಳರ+ವಲೆಗಳಲಿ

ಅಚ್ಚರಿ:
(೧) ೧೭ ಬಗೆಯ ಪ್ರಾಣಿಗಳ ಹೆಸರನ್ನು ವಿವರಿಸಿದ್ದು