ಮುಳಿಯಲಾಗದು ಕೃಷ್ಣ ನಿಮ್ಮನು
ತಿಳುಹಲಾನು ಸಮರ್ಥನೇ ಕುಲ
ಕೊಲೆಗೆ ಕೊಕ್ಕರಿಸಿದೆನು ನನೆದನು ಕರುಣ ವಾರಿಯಲಿ
ಬಲುಹನೀ ಮುಖದಲ್ಲಿ ತೋರುವ
ಡಳುಕಿದೆನು ಸಾಮ್ರಾಜ್ಯಸಂಪ
ತ್ತಿಳೆಯ ಸಕಲಭ್ರಾಂತಿ ಬೀತುದು ದೇವ ಕೇಳೆಂದ (ಭೀಷ್ಮ ಪರ್ವ, ೩ ಸಂಧಿ, ೩೨ ಪದ್ಯ)
ತಾತ್ಪರ್ಯ:
ಅರ್ಜುನನು ಶ್ರೀಕೃಷ್ಣನಿಗೆ ಉತ್ತರಿಸುತ್ತಾ, ಕೃಷ್ಣ ನನ್ನ ಮೇಲೆ ಕೋಪಗೊಳ್ಳಬೇಡ, ನಿನಗೆ ಹೇಳುವ ಶಕ್ತಿ ನನಗಿಲ್ಲ, ಆದರೆ ಕುಲವಧೆಗೆ ನಾನು ಹೇಸಿದ್ದೇನೆ, ದುಃಖಿತನಾಗಿದ್ದೇನೆ, ಇವರೊಡನೆ ನನ್ನ ಸಾಮರ್ಥ್ಯವನ್ನು ತೋರಿಸಲು ಅಳುಕುತ್ತೇನೆ, ಸಾಮ್ರಾಜ್ಯದ ಸಂಪತ್ತು, ಭೂಮಿಯನ್ನಾಳಬೇಕೆಂಬ ಭ್ರಾಂತಿಗಳು ನನ್ನನ್ನು ಬಿಟ್ಟುಹೋದವು ಎಂದು ಹೇಳಿದನು.
ಅರ್ಥ:
ಮುಳಿ: ಸಿಟ್ಟು, ಕೋಪ; ತಿಳುಹು: ಅರಿ; ಸಮರ್ಥ: ಬಲಶಾಲಿ, ಗಟ್ಟಿಗ; ಕುಲ: ವಂಶ; ಕೊಲೆ: ನಾಶ; ಕೊಕ್ಕರಿಸು: ಅಸಹ್ಯಪಡು; ನನೆ: ತೋಯು, ಒದ್ದೆಯಾಗು; ಕರುಣ: ದಯೆ; ವಾರಿ: ನೀರು; ಬಲುಹ: ಶಕ್ತಿ; ಮುಖ: ಆನನ; ತೋರು: ಪ್ರದರ್ಶಿಸು; ಅಳುಕು: ಹೆದರು; ಸಾಮ್ರಾಜ್ಯ: ರಾಷ್ಟ್ರ, ಚಕ್ರಾಧಿಪತ್ಯ; ಸಂಪತ್ತು: ಐಶ್ವರ್ಯ; ಇಳೆ: ಭೂಮಿ; ಸಕಲ: ಎಲ್ಲಾ; ಭ್ರಾಂತಿ: ತಪ್ಪು ತಿಳಿವಳಿಕೆ, ಭ್ರಮೆ; ಬೀತು: ಬಿಟ್ಟುಹೋಗು; ದೇವ: ಭಗವಂತ; ಕೇಳು: ಆಲಿಸು;
ಪದವಿಂಗಡಣೆ:
ಮುಳಿಯಲಾಗದು+ ಕೃಷ್ಣ +ನಿಮ್ಮನು
ತಿಳುಹಲಾನು +ಸಮರ್ಥನೇ +ಕುಲ
ಕೊಲೆಗೆ +ಕೊಕ್ಕರಿಸಿದೆನು+ ನನೆದನು+ ಕರುಣ +ವಾರಿಯಲಿ
ಬಲುಹನ್+ಈ+ ಮುಖದಲ್ಲಿ+ ತೋರುವಡ್
ಅಳುಕಿದೆನು +ಸಾಮ್ರಾಜ್ಯ+ಸಂಪತ್ತ್
ಇಳೆಯ +ಸಕಲ+ಭ್ರಾಂತಿ +ಬೀತುದು +ದೇವ +ಕೇಳೆಂದ
ಅಚ್ಚರಿ:
(೧) ಅರ್ಜನನ ಸ್ಥಿತಿ – ಕುಲ ಕೊಲೆಗೆ ಕೊಕ್ಕರಿಸಿದೆನು ನನೆದನು ಕರುಣ ವಾರಿಯಲಿ
(೨) ಅರ್ಜುನನ ಭ್ರಾಂತಿ – ಸಾಮ್ರಾಜ್ಯಸಂಪತ್ತಿಳೆಯ ಸಕಲಭ್ರಾಂತಿ ಬೀತುದು