ಪದ್ಯ ೬೧: ಯುಧಿಷ್ಠಿರನು ದ್ರೋಣನ ರಥವನ್ನು ಹೇಗೆ ಮುಸುಕಿದನು?

ಅರಸ ಫಡ ಹೋಗದಿರು ಸಾಮದ
ಸರಸ ಕೊಳ್ಳದು ಬಿಲ್ಲ ಹಿಡಿ ಹಿಡಿ
ಹರನ ಮರೆವೊಗು ನಿನ್ನ ಹಿಡಿವೆನು ಹೋಗು ಹೋಗೆನುತ
ಸರಳ ಮುಷ್ಟಿಯ ಕೆನ್ನೆಯೋರೆಯ
ಗುರು ಛಡಾಳಿಸೆ ಧನುವನೊದರಿಸೆ
ಧರಣಿಪತಿ ಹಳಚಿದನು ಹೂಳಿದನಂಬಿನಲಿ ರಥವ (ದ್ರೋಣ ಪರ್ವ, ೧ ಸಂಧಿ, ೬೧ ಪದ್ಯ)

ತಾತ್ಪರ್ಯ:
ಎಲೈ ರಾಜನೇ, ಓಡಿ ಹೋಗಬೇಡ, ಇಲ್ಲಿ ಸಂಧಿಯ ಸರಸ ನಡೆಯುವುದಿಲ್ಲ, ಬಿಲ್ಲನ್ನು ಹಿಡಿ, ನೀನು ಶಿವನನ್ನು ಮೊರೆಹೊಕ್ಕರೂ ನಿನ್ನನ್ನು ಸೆರೆಹಿಡಿಯುತ್ತೇನೆ ಎನ್ನುತ್ತಾ ಬಾಣವನ್ನು ಕೆನ್ನೆಗೆಳೆದು ದ್ರೋಣನು ಆರ್ಭಟಿಸಲು, ಯುಧಿಷ್ಠಿರನು ಬಿಲ್ಲನ್ನೊದರಿಸಿ ದ್ರೋಣನ ರಥವನ್ನು ಬಾಣಗಳಿಂದ ಮುಚ್ಚಿದನು.

ಅರ್ಥ:
ಅರಸ: ರಾಜ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಹೋಗು: ತೆರಳು; ಸಾಮ: ಶಾಂತಗೊಳಿಸುವಿಕೆ; ಸರಸ: ಚೆಲ್ಲಾಟ; ಕೊಳ್ಳು: ಪಡೆ; ಬಿಲ್ಲು: ಚಾಪ; ಹಿಡಿ: ಗ್ರಹಿಸು; ಹರ: ಶಿವ; ಮರೆ:ಆಶ್ರಯ; ಸರಳ: ಬಾಣ; ಮುಷ್ಟಿ: ಅಂಗೈ; ಕದಪು; ಓರೆ: ವಕ್ರ; ಕೆನ್ನೆಯೋರೆ: ಓರೆಯಾಗಿಟ್ಟುಕೊಂಡ ಕೆನ್ನೆ; ಗುರು: ಆಚಾರ್ಯ; ಛಡಾಳಿಸು: ಹೆಚ್ಚಾಗು, ಅಧಿಕವಾಗು; ಧನು: ಚಾಪ; ಒದರು: ಜಾಡಿಸು, ಗರ್ಜಿಸು; ಧರಣಿಪತಿ: ರಾಜ; ಹಳಚು: ತಾಗು, ಬಡಿ; ಹೂಳು: ಹೂತು ಹಾಕು, ಮುಳುಗುವಂತೆ ಮಾಡು; ಅಂಬು: ಬಾಣ; ರಥ: ಬಂಡಿ;

ಪದವಿಂಗಡಣೆ:
ಅರಸ +ಫಡ +ಹೋಗದಿರು +ಸಾಮದ
ಸರಸ +ಕೊಳ್ಳದು +ಬಿಲ್ಲ +ಹಿಡಿ +ಹಿಡಿ
ಹರನ +ಮರೆವೊಗು +ನಿನ್ನ +ಹಿಡಿವೆನು +ಹೋಗು +ಹೋಗೆನುತ
ಸರಳ +ಮುಷ್ಟಿಯ +ಕೆನ್ನೆ+ಓರೆಯ
ಗುರು +ಛಡಾಳಿಸೆ +ಧನುವನ್+ಒದರಿಸೆ
ಧರಣಿಪತಿ+ ಹಳಚಿದನು +ಹೂಳಿದನ್+ಅಂಬಿನಲಿ +ರಥವ

ಅಚ್ಚರಿ:
(೧) ಧರಣಿಪತಿ, ಅರಸ; ಬಿಲ್ಲ, ಧನು – ಸಮಾನಾರ್ಥಕ ಪದ
(೨) ಅರಸ, ಸರಸ – ಪ್ರಾಸ ಪದಗಳು

ಪದ್ಯ ೧೨: ಕೃಷ್ಣನು ಭೀಷ್ಮನನ್ನು ಗೆಲ್ಲಲು ಯಾವ ಮಾರ್ಗವನ್ನು ಸೂಚಿಸಿದನು?

ಮುಗುಳುನಗೆ ನಸು ಮೊಳೆಯೆ ಭೀಮಾ
ದಿಗಳಿಗೆಂದನು ಕೃಷ್ಣನರಸಗೆ
ಸೊಗಸು ಬನದಲಿ ಬರಿಯ ಮನವೀ ಕದನಕೇಳಿಯಲಿ
ವಿಗಡತನವಂತಿರಲಿ ಭೀಷ್ಮನ
ಬೆಗಡುಗೊಳಿಸಲು ಹರನ ಹವಣ
ಲ್ಲಗಣಿತನ ಸಾಮದಲಿ ಮುರಿಯಲುಬೇಕು ನಾವೆಂದ (ಭೀಷ್ಮ ಪರ್ವ, ೭ ಸಂಧಿ, ೧೨
ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನ ಮುಖದಲ್ಲಿ ಮಂದಸ್ಮಿತವು ಅರಳಿತು, ಧರ್ಮಜನಿಗೆ ವನವಾಸದಲ್ಲೇ ಹೆಚ್ಚು ಆಸಕ್ತಿ, ಯುದ್ಧದಲ್ಲಿ ಅವನಿಗೆ ಮನಸ್ಸಿಲ್ಲವೆಂದು ತೋರುತ್ತದೆ ಎಂದು ಭೀಮನೇ ಮೊದಲಾದವರಿಗೆ ಹೇಳಿದನು. ಭೀಷ್ಮನನ್ನು ಬೆರಗುಗೊಳಿಸಿ ಗೆಲ್ಲಲು ಶಿವನಿಗೂ ಅಸಾಧ್ಯ, ಆದುದರಿಂದ ಭೀಷ್ಮನನ್ನು ಸಂಧಾನದಿಂದ ಗೆಲ್ಲಬೇಕು ಎಂದನು.

ಅರ್ಥ:
ಮುಗುಳುನಗೆ: ಹಸನ್ಮುಖ, ಮಂದಸ್ಮಿತ; ನಸು: ಸ್ವಲ್ಪ; ಮೊಳೆ: ಕುಡಿ, ಚಿಗುರು; ಆದಿ: ಮುಂತಾದ; ಅರಸ: ರಾಜ; ಸೊಗಸು: ಅಂದ, ಚೆಲುವು; ಬನ: ಕಾಡು; ಬರಿ: ಕೇವಲ; ಮನ: ಮನಸ್ಸು; ಕದನ: ಯುದ್ಧ; ಕೇಳಿ: ವಿನೋದ; ವಿಗಡ: ಶೌರ್ಯ, ಪರಾಕ್ರಮ; ಬೆಗಡು: ಭಯಪಡು, ಆಶ್ಚರ್ಯ; ಹರ: ಶಿವ; ಹವಣ: ಸಿದ್ಧತೆ, ಪ್ರಯತ್ನ; ಅಗಣಿತ: ಅಸಂಖ್ಯಾತ; ಸಾಮ: ಶಾಂತಗೊಳಿಸುವಿಕೆ; ಮುರಿ: ಸೀಳು;

ಪದವಿಂಗಡಣೆ:
ಮುಗುಳುನಗೆ+ ನಸು +ಮೊಳೆಯೆ +ಭೀಮಾ
ದಿಗಳಿಗ್+ಎಂದನು +ಕೃಷ್ಣನ್+ಅರಸಗೆ
ಸೊಗಸು +ಬನದಲಿ +ಬರಿಯ +ಮನವೀ +ಕದನ+ಕೇಳಿಯಲಿ
ವಿಗಡತನವಂತಿರಲಿ+ ಭೀಷ್ಮನ
ಬೆಗಡು+ಗೊಳಿಸಲು +ಹರನ +ಹವಣಲ್ಲ್
ಅಗಣಿತನ +ಸಾಮದಲಿ +ಮುರಿಯಲುಬೇಕು +ನಾವೆಂದ

ಅಚ್ಚರಿ:
(೧) ಧರ್ಮಜನನ್ನು ತಮಾಷೆ ಮಾಡುವ ಪರಿ – ಅರಸಗೆ ಸೊಗಸು ಬನದಲಿ ಬರಿಯ ಮನವೀ ಕದನಕೇಳಿಯಲಿ

ಪದ್ಯ ೩೯: ದ್ರೌಪದಿಯು ಏನು ಯೋಚಿಸುತ್ತಾ ಭೀಮನ ಬಳಿ ಬಂದಳು?

ಎಬ್ಬಿಸಲು ಭುಗಿಲೆಂಬನೋ ಮೇ
ಣೊಬ್ಬಳೇತಕೆ ಬಂದೆ ಮೋರೆಯ
ಮಬ್ಬಿದೇನೆಂದೆನ್ನ ಸಂತೈಸುವನೊ ಸಾಮದಲಿ
ತಬ್ಬುವುದೊ ತಾ ಬಂದ ಬರವಿದು
ನಿಬ್ಬರವಲಾ ಜನದ ಮನಕಿ
ನ್ನೆಬ್ಬಿಸಿಯೆ ನೋಡುವೆನೆನುತ ಸಾರಿದಳು ವಲ್ಲಭನ (ವಿರಾಟ ಪರ್ವ, ೩ ಸಂಧಿ, ೩೯ ಪದ್ಯ)

ತಾತ್ಪರ್ಯ:
ದ್ರೌಪದಿಯು ಯೋಚಿಸುತ್ತಾ ಮುಂದೆ ನಡೆದಳು, ಎಬ್ಬಿಸಿದ ಕೂಡಲೇ ಭೀಮನು ಸಿಟ್ಟಾಗುವನೇ? ಅಥವಾ ಒಬ್ಬಳೇ ಏಕೆ ಬಂದೆ? ಮುಖವೇಕೆ ಕುಂದಿದೆ? ಸಮಾಧಾನ ಮಾಡುವನೇ? ನಾನು ಬಂದದ್ದು ಯಾರಿಗಾದರೂ ತಿಳಿದರೆ? ಎಂದು ಯೋಚಿಸಿದ ದ್ರೌಪದಿಯು ಎಬ್ಬಿಸಿ ನೋಡುವ ಎಂದು ನಿಶ್ಚಯಿಸಿ ಭೀಮನ ಬಳಿ ಬಂದಳು.

ಅರ್ಥ:
ಎಬ್ಬಿಸು: ಎಚ್ಚರಗೊಳಿಸು; ಭುಗಿಲ್: ಕೂಡಲೆ, ಒಂದು ಅನುಕರಣ ಶಬ್ದ; ಮೇಣ್: ಅಥವ; ಬಂದೆ: ಆಗಮಿಸು; ಮೋರೆ: ಮುಖ; ಮಬ್ಬು: ನಸುಗತ್ತಲೆ, ಮಸುಕು; ಸಂತೈಸು: ಸಮಾಧಾನ ಪಡಿಸು; ಸಾಮ: ಶಾಂತಗೊಳಿಸುವಿಕೆ; ತಬ್ಬು: ಅಪ್ಪುಗೆ, ಆಲಿಂಗನ; ನಿಬ್ಬರ: ಅತಿಶಯ, ಹೆಚ್ಚಳ; ಜನ: ಮನುಷ್ಯ; ಮನ: ಮನಸ್ಸು; ನೋಡು: ವೀಕ್ಷಿಸು; ಸಾರು: ಹತ್ತಿರಕ್ಕೆ ಬರು, ಸಮೀಪಿಸು; ವಲ್ಲಭ: ಗಂಡ, ಪತಿ;

ಪದವಿಂಗಡಣೆ:
ಎಬ್ಬಿಸಲು+ ಭುಗಿಲ್+ಎಂಬನೋ +ಮೇಣ್
ಒಬ್ಬಳೇತಕೆ +ಬಂದೆ +ಮೋರೆಯ
ಮಬ್ಬಿದೇನ್+ಎಂದೆನ್ನ+ ಸಂತೈಸುವನೊ +ಸಾಮದಲಿ
ತಬ್ಬುವುದೊ+ ತಾ +ಬಂದ +ಬರವಿದು
ನಿಬ್ಬರವಲಾ+ ಜನದ+ ಮನಕಿನ್
ಎಬ್ಬಿಸಿಯೆ +ನೋಡುವೆನ್+ಎನುತ +ಸಾರಿದಳು +ವಲ್ಲಭನ

ಅಚ್ಚರಿ:
(೧) ಎಬ್ಬಿಸು – ೧, ೬ ಸಾಲಿನ ಮೊದಲ ಪದ
(೨) ದ್ರೌಪದಿಯ ಪ್ರಶ್ನೆಗಳು – ಎಬ್ಬಿಸಲು ಭುಗಿಲೆಂಬನೋ, ಒಬ್ಬಳೇತಕೆ ಬಂದೆ, ಮೋರೆಯ ಮಬ್ಬಿದೇನೆಂದೆನ್ನ ಸಂತೈಸುವನೊ ಸಾಮದಲಿ

ಪದ್ಯ ೫೮: ಧೃತರಾಷ್ಟ್ರನು ದುರ್ಯೋಧನನನ್ನು ಏನು ಕೇಳಿದ?

ಏನ ನೆನೆದೈ ಮಗನೆ ಕುಂತೀ
ಸೂನುಗಳ ರಾಜ್ಯಾಪಹಾರದೊ
ಳೇನು ಬುದ್ಧಿ ವಿಳಾಸವಾವುದು ಕಾರ್ಯಗತಿ ನಿನಗೆ
ದಾನದಲಿ ಮೇಣ್ ಸಾಮ್ದಲಿ ಭೇ
ದಾನುಮತದಲಿ ದಂಡದಲಿ ನೀ
ವೇನ ನಿಶ್ಚೈಸಿದಿರಿ ಹೇಳಿನ್ನಂಜಬೇಡೆಂದ (ಸಭಾ ಪರ್ವ, ೧೩ ಸಂಧಿ, ೫೮ ಪದ್ಯ)

ತಾತ್ಪರ್ಯ:
ಎಲೈ ದುರ್ಯೋಧನ, ನೀನು ಪಾಂಡವರ ರಾಜ್ಯವನ್ನು ಅಪಹರಿಸಲು ಏನು ಮಾಡಬೇಕೆಂದು ನಿಶ್ಚೈಸಿರುವೆ, ಅದನ್ನು ಹೇಗೆ ಕಾರ್ಯರೂಪಕ್ಕೆ ತರುತ್ತೀಯ? ಸಾಮ, ದಾನ, ಭೇದ, ದಂಡ ಈ ನಾಲ್ಕರಲ್ಲಿ ಯಾವ ಮಾರ್ಗವನ್ನು ಆರಿಸಿಕೊಂಡಿರುವೆ ಅಂಜದೆ ಹೇಳು ಎಂದು ಕೇಳಿದನು.

ಅರ್ಥ:
ನೆನೆ:ವಿಚಾರಿಸು, ಆಲೋಚಿಸು; ಮಗ: ಕುಮಾರ; ಸೂನು: ಪುತ್ರ; ರಾಜ್ಯ: ರಾಷ್ಟ್ರ; ಅಪಹಾರ: ದೋಚುವ; ಬುದ್ಧಿ: ಮನಸ್ಸು, ಚಿತ್ತ; ವಿಳಾಸ: ಯೋಜನೆ, ವಿಚಾರ; ಕಾರ್ಯ: ಕೆಲಸ; ಗತಿ: ವೇಗ; ಕಾರ್ಯಗತಿ: ಕಾರ್ಯರೂಪ; ದಾನ, ಸಾಮ, ಭೇದ, ದಂಡ: ಚತುರೋಪಾಯಗಳು; ನಿಶ್ಚೈಸು: ತೀರ್ಮಾನಿಸು; ಅಂಜು: ಹೆದರು;

ಪದವಿಂಗಡಣೆ:
ಏನ +ನೆನೆದೈ+ ಮಗನೆ +ಕುಂತೀ
ಸೂನುಗಳ +ರಾಜ್ಯ+ಅಪಹಾರದೊಳ್
ಳೇನು +ಬುದ್ಧಿ +ವಿಳಾಸವಾವುದು +ಕಾರ್ಯಗತಿ +ನಿನಗೆ
ದಾನದಲಿ +ಮೇಣ್ +ಸಾಮದಲಿ +ಭೇ
ದ+ಆನು+ಮತದಲಿ +ದಂಡದಲಿ+ ನೀ
ವೇನ+ ನಿಶ್ಚೈಸಿದಿರಿ+ ಹೇಳ್+ಇನ್+ಅಂಜಬೇಡೆಂದ

ಅಚ್ಚರಿ:
(೧) ಚತುರೋಪಾಯಗಳು – ಸಾಮ, ದಾನ, ಭೇದ, ದಂಡ

ಪದ್ಯ ೪೧: ಅರ್ಜುನನನ್ನು ಪ್ರೇರೇಪಿಸಲು ಕೃಷ್ಣನು ಯಾವ ಮಾರ್ಗವನ್ನು ಪ್ರಯೋಗಿಸಿದನು?

ಮತ್ತೆ ಜರೆದನು ದನುಜರಿಪು ತಲೆ
ಗುತ್ತಿದನು ಕಲಿ ಪಾರ್ಥನಾತನ
ಕುತ್ತಿ ಬರಸೆಳೆದಂತೆ ಭಂಗಿಸಿದನು ಮುರಧ್ವಂಸಿ
ಒತ್ತುವವು ಫಲುಗುಣನ ನುಡಿ ಮಿಗೆ
ಕೆತ್ತುವವು ಹರಿವಚನವಾತನ
ಚಿತ್ತವನು ಸಂತೈಸಿ ಹರಿ ತಿಳುಹಿದನು ಸಾಮದಲಿ (ಕರ್ಣ ಪರ್ವ, ೨೬ ಸಂಧಿ, ೪೧ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಮತ್ತೆ ಅರ್ಜುನನನ್ನು ಜರೆಯಲು ಅರ್ಜುನನು ತಲೆ ತಗ್ಗಿಸಿದನು. ಅವನನ್ನು ಹೊಡೆದೆಳೆದಂತೆ ಕೃಷ್ಣನು ಹಂಗಿಸಿದನು. ಕೃಷ್ಣನ ಮಾತುಗಳು ಾವನನ್ನು ಯುದ್ಧಮಾಡಲು ಪ್ರಚೋದಿಸಿದವು, ಅರ್ಜುನನ ಮಾತುಗಳು ಅದನ್ನು ನಿರಾಕರಿಸಿದವು, ಕೊನೆಗೆ ಕೃಷ್ಣನು ಸಾಮೋಪಾಯದಿಂದ ಅರ್ಜುನನನ್ನು ಒಡಂಬಡಿಸಲು ಯತ್ನಿಸಿದನು.

ಅರ್ಥ:
ಜರೆ: ಬಯ್ಯು; ದನುಜರಿಪು: ರಾಕ್ಷಸರ ವೈರಿ; ತಲೆ: ಶಿರ; ಕಲಿ: ಶೂರ; ಕುತ್ತು: ಹೊಡೆತ, ಪೆಟ್ಟು; ಬರಸೆಳೆ: ಹತ್ತಿರಕ್ಕೆ ಬರುವಂತೆ ಎಳೆ; ಭಂಗಿಸು: ಮುರಿ; ಮುರಧ್ವಂಸಿ: ಕೃಷ್ಣ; ಒತ್ತು: ಒತ್ತಡ ಹತ್ತಿರ; ನುಡಿ: ಮಾತು; ಮಿಗೆ: ಮತ್ತು; ಕೆತ್ತು:ನಡುಕ, ಸ್ಪಂದನ; ವಚನ: ನುಡಿ, ಮಾತು; ಚಿತ್ತ: ಮನಸ್ಸು; ಸಂತೈಸು: ಸಮಾಧಾನಪಡಿಸು; ತಿಳುಹು: ತಿಳಿಸು, ಹೇಳು; ಸಾಮ: ಶಾಂತಗೊಳಿಸುವಿಕೆ, ಕಾರ್ಯ ಸಾಧನೆಯ ಚತುರೋಪಾಯಗಳಲ್ಲಿ ಒಂದು;

ಪದವಿಂಗಡಣೆ:
ಮತ್ತೆ +ಜರೆದನು +ದನುಜರಿಪು +ತಲೆ
ಗುತ್ತಿದನು+ ಕಲಿ +ಪಾರ್ಥನ್+ಆತನ
ಕುತ್ತಿ +ಬರಸೆಳೆದಂತೆ +ಭಂಗಿಸಿದನು +ಮುರಧ್ವಂಸಿ
ಒತ್ತುವವು +ಫಲುಗುಣನ+ ನುಡಿ +ಮಿಗೆ
ಕೆತ್ತುವವು +ಹರಿವಚನವ್+ಆತನ
ಚಿತ್ತವನು +ಸಂತೈಸಿ +ಹರಿ +ತಿಳುಹಿದನು +ಸಾಮದಲಿ

ಅಚ್ಚರಿ:
(೧) ಕುತ್ತು, ಒತ್ತು, ಕೆತ್ತು, – ಪದಗಳ ಬಳಕೆ
(೨) ಕಾರ್ಯಸಾಧನೆಯ ಹಲವು ಮಾರ್ಗಗಳನ್ನು ಉಪಯೋಗಿಸಿದ ಕೃಷ್ಣ
(೩) ದನುಜರಿಪು, ಮುರಧ್ವಂಸಿ, ಹರಿ; ನುಡಿ, ವಚನ – ಸಮನಾರ್ಥಕ ಪದ

ಪದ್ಯ ೫: ದುರ್ಯೋಧನನು ಯಾವ ಭೂಮಿಯನ್ನು ಪಾಂಡವರಿಗೆ ಕೊಟ್ಟನು?

ಭೂಮಿಯೊಳಗರ್ಧವನು ಬೇಡಿದೊ
ಡಾ ಮಹೀಪತಿಯೈವರಿಗೆ ಸಂ
ಗ್ರಾಮ ಭೂಮಿಯನೈದೆ ಕೊಟ್ಟನು ನಿಮ್ಮೊಳಪ್ರಿಯನು
ಸಾಮದಲಿ ಸೊಗಸಿಲ್ಲ ನೀವ್ ನಿ
ಸ್ಸೀಮರಾದೊಡೆ ಜೋಡಿಸುವುದು
ದ್ಧಾಮ ಕುರುಭೂಮಿಯಲಿ ಕುಳವರಿದವರ ಪತಿಕರಿಸಿ (ಉದ್ಯೋಗ ಪರ್ವ, ೧೨ ಸಂಧಿ, ೫ ಪದ್ಯ)

ತಾತ್ಪರ್ಯ:
ಅರ್ಧ ಭೂಮಿಯನ್ನು ನಾನು ನಿಮಗಾಗಿ ಕೇಳಿದರೆ, ಅವನು ನಿಮಗೆ ಯುದ್ಧಭೂಮಿಯನ್ನು ನೀಡಿದನು. ನಿಮ್ಮಲ್ಲಿ ಅವನಿಗೆ ಸ್ವಲ್ಪವೂ ಪ್ರೇಮವಿಲ್ಲ. ಸಂಧಿಯೆನ್ನುವುದರಲ್ಲಿ ಹುರುಳಿಲ್ಲ. ನೀವು ಚತುರರಾದರೆ, ಕುರುಕ್ಷೇತ್ರದಲ್ಲಿ ಅವರ ಸೈನ್ಯಕ್ಕೆ ಪ್ರತಿಯಾಗಿ ಸೈನ್ಯವನ್ನು ಜೋಡಿಸುವುದು ಸರಿಯಾದ ಮಾರ್ಗ ಎಂದು ಕೃಷ್ಣನು ಹೇಳಿದನು.

ಅರ್ಥ:
ಭೂಮಿ: ಧರಿತ್ರಿ; ಅರ್ಧ: ವಸ್ತುವಿನ ಎರಡು ಸಮಪಾಲುಗಳಲ್ಲಿ ಒಂದು; ಬೇಡು: ಕೇಳು; ಮಹೀಪತಿ: ರಾಜ; ಮಹೀ: ಭೂಮಿ; ಸಂಗ್ರಾಮ: ಯುದ್ಧ; ಕೊಡು: ನೀಡು; ಅಪ್ರಿಯ: ಪ್ರೀತಿಯಿಲ್ಲದವ; ಸಾಮ: ಸಂಧಿ; ಸೊಗಸು: ಚೆಲುವು; ನಿಸ್ಸೀಮ: ಪ್ರವೀಣ; ಜೋಡಿಸು: ಸೇರಿಸು; ಉದ್ಧಾಮ: ಶ್ರೇಷ್ಠ; ಕುಳ: ಕುಲ, ವಂಶ; ಇದಿರು: ಎದುರು; ಪತಿಕರಿಸು: ಅಂಗೀಕರಿಸು;

ಪದವಿಂಗಡಣೆ:
ಭೂಮಿಯೊಳಗ್+ಅರ್ಧವನು +ಬೇಡಿದೊಡ್
ಆ +ಮಹೀಪತಿ+ ಐವರಿಗೆ+ ಸಂ
ಗ್ರಾಮ +ಭೂಮಿಯನೈದೆ+ ಕೊಟ್ಟನು +ನಿಮ್ಮೊಳ್+ಅಪ್ರಿಯನು
ಸಾಮದಲಿ +ಸೊಗಸಿಲ್ಲ +ನೀವ್ +ನಿ
ಸ್ಸೀಮರಾದೊಡೆ +ಜೋಡಿಸುವುದ್+ಉ
ದ್ಧಾಮ +ಕುರುಭೂಮಿಯಲಿ +ಕುಳವರಿದವರ +ಪತಿಕರಿಸಿ

ಅಚ್ಚರಿ:
(೧) ಭೂಮಿ, ಮಹೀ – ಸಮನಾರ್ಥಕ ಪದ
(೨) ಸಾಮ, ನಿಸ್ಸೀಮ, ಸಂಗ್ರಾಮ, ಉದ್ಧಾಮ – ಪ್ರಾಸ ಪದಗಳು

ಪದ್ಯ ೫: ರಾಜನೀತಿಯಲ್ಲಿ ಯಾವುದು ಅತ್ಯಂತ ಕೊನೆಯ ಶ್ರೇಣಿಗೆ ಸೇರುತ್ತದೆ?

ಸಾಮವೆಂಬುದು ರಾಜನೀತಿಗೆ
ತಾ ಮನೋಹರ ರೂಪು ಬದುಕುವ
ಭೂಮಿಪಾಲರ ವಿನುತ ವಿಭವಕೆ ಬೀಜ ಮಂತ್ರವಿದು
ಸಾಮ ತಪ್ಪಿದ ಬಳಿಕ ನೀತಿ ವಿ
ರಾಮವಾಗದೆ ಬಿಡದು ದಂಡದ
ಸೀಮೆಯೆಂಬುದುಪಾಯದೊಳು ಸಾಮಾನ್ಯ ತರವೆಂದ (ಉದ್ಯೋಗ ಪರ್ವ, ೯ ಸಂಧಿ, ೫ ಪದ್ಯ)

ತಾತ್ಪರ್ಯ:
ಒಡಂಬಡಿಕೆಯ ಕ್ರಮವು ರಾಜನೀತಿಯಲ್ಲಿ ಬಹು ಸುಂದರವಾದ ಉಪಾಯ. ವೈಭವದಿಂದ ಬದುಕಲಿಚ್ಛಿಸುವ ರಾಜರೆಲ್ಲರೂ ಇದು ಬೀಜ ಮಂತ್ರ. ಸಾಮವು ತಪ್ಪಿದರೆ ನೀತಿಯು ನೆಲೆಯಿಲ್ಲದಂತಾಗುತ್ತದೆ. ದಂಡವು ಉಪಾಯಗಳಲ್ಲಿ ಅತ್ಯಂತ ಕೊನೆಯ ಶ್ರೇಣಿಗೆ ಸೇರುತ್ತದೆ ಎಂದು ಕೃಷ್ಣನು ಹೇಳಿದನು.

ಅರ್ಥ:
ಸಾಮ: ಶಾಂತಗೊಳಿಸುವಿಕೆ, ಒಡಂಬಡಿಕೆ; ರಾಜನೀತಿ: ರಾಜಕಾರಣ; ಮನೋಹರ: ಸುಂದರವಾದ; ರೂಪು:ಆಕಾರ; ಬದುಕು: ಜೀವಿಸುವ; ಭೂಮಿಪಾಲ: ರಾಜ; ವಿನುತ: ಹೊಗಳಲ್ಪಟ್ಟ; ವಿಭವ: ಸಿರಿ, ಸಂಪತ್ತು; ಬೀಜ:ಮೂಲ ಕಾರಣ; ಮಂತ್ರ: ವಿಚಾರ; ತಪ್ಪು: ಸುಳ್ಳಾಗು; ಬಳಿಕ: ನಂತರ; ವಿರಾಮ: ಬಿಡುವು, ವಿಶ್ರಾಂತಿ; ಬಿಡದು: ಬಿಡು ಗಡೆ; ದಂಡ: ಕೋಲು; ಸೀಮೆ:ಎಲ್ಲೆ, ಗಡಿ; ಉಪಾಯ: ಯುಕ್ತಿ; ಸಾಮಾನ್ಯ: ಕೇವಲ; ತರ:ಕ್ರಮ;

ಪದವಿಂಗಡಣೆ:
ಸಾಮವೆಂಬುದು+ ರಾಜನೀತಿಗೆ
ತಾ +ಮನೋಹರ +ರೂಪು +ಬದುಕುವ
ಭೂಮಿಪಾಲರ+ ವಿನುತ +ವಿಭವಕೆ +ಬೀಜ +ಮಂತ್ರವಿದು
ಸಾಮ +ತಪ್ಪಿದ +ಬಳಿಕ +ನೀತಿ +ವಿ
ರಾಮವಾಗದೆ+ ಬಿಡದು +ದಂಡದ
ಸೀಮೆಯೆಂಬುದ್+ಉಪಾಯದೊಳು +ಸಾಮಾನ್ಯ +ತರವೆಂದ

ಅಚ್ಚರಿ:
(೧) ಚತುರೋಪಾಯದ ವಿವರ ನೀಡುವ ಪದ್ಯ – ಸಾಮ, ದಾನ, ಭೇದ, ದಂಡ
(೨) ಸಾಮದ ಗುಣಗಾನ – ಸಾಮವೆಂಬುದು ರಾಜನೀತಿಗೆ ತಾ ಮನೋಹರ ರೂಪು ಬದುಕುವ
ಭೂಮಿಪಾಲರ ವಿನುತ ವಿಭವಕೆ ಬೀಜ ಮಂತ್ರವಿದು

ಪದ್ಯ ೧೩: ನಕುಲನ ಅಭಿಪ್ರಾಯವೇನು?

ನಕುಲ ನೀ ಹೇಳೇನು ಹದನಿ
ನ್ನುಕುತಿ ಸಾಮವೊ ಮೇಣು ಸಮರವೊ
ಸುಕರ ಮಂತ್ರವನರುಹು ನೀನೆಮಗಂಜಬೇಡೆನಲು
ಯುಕುತಿ ನಮಗಿನ್ನೇನುಭಯರಾ
ಜಕವ ಸಂತೈಸುವುದು ಬೇರೆ
ಮ್ಮುಕುತಿಯೆಲ್ಲಿಯದೆಂದನಾ ಮಾದ್ರೇಯ ವಿನಯದೊಳು (ಉದ್ಯೋಗ ಪರ್ವ, ೬ ಸಂಧಿ, ೧೩ ಪದ್ಯ)

ತಾತ್ಪರ್ಯ:
ಅರ್ಜುನನ ಮಾತನ್ನು ಕೇಳಿದ ಕೃಷ್ಣನು ನಕುಲನ ಅಭಿಪ್ರಾಯವನ್ನು ಕೇಳಲು ಮುಂದಾದನು. ಎಲೈ ನಕುಲ ನೀನು ನಿನ್ನಭಿಪ್ರಾಯವನ್ನು ಅಂಜದೆ ತಿಳಿಸು, ಸಂಧಿಯೋ ಸಮರವೋ ಎಂದು ಕೇಳಲು, ನಕುಲನು ನನ್ನ ಮಾತು ಹೊಸದೇನು ಇಲ್ಲ. ಉಭಯ ರಾಜರನ್ನು ಸಮಾಧಾನ ಪಡಿಸು ಇದನ್ನು ಬಿಟ್ಟು ಬೇರೆಯ ಮಾತೇನು ಇಲ್ಲ ಎಂದು ನಕುಲನು ನುಡಿದನು.

ಅರ್ಥ:
ಹೇಳು: ತಿಳಿಸು; ಹದ: ಸರಿಯಾದ ಸ್ಥಿತಿ; ಉಕುತಿ: ಉಕ್ತಿ, ಮಾತು, ನೀತಿಮಾತು; ಸಾಮ: ಸಂಧಿ; ಸಮರ: ಯುದ್ಧ; ಸುಕರ: ಸುಲಭವಾದುದು, ಸರಾಗವಾದುದು; ಮಂತ್ರ: ವಿಚಾರ; ಅರುಹು: ತಿಳಿಸು, ಹೇಳು; ಅಂಜಬೇಡ: ಹೆದರಬೇಡ; ಯುಕುತಿ: ಬುದ್ಧಿ; ಉಭಯ: ಎರಡು; ರಾಜಕ: ರಾಜಪಕ್ಷ; ಸಂತೈಸು: ಸಮಾಧಾನ ಪಡಿಸು; ಬೇರೆ: ಅನ್ಯ; ಮಾದ್ರೇಯ: ಮಾದ್ರಿಯ ಮಗ; ವಿನಯ: ಒಳ್ಳೆಯತನ, ಸೌಜನ್ಯ;

ಪದವಿಂಗಡಣೆ:
ನಕುಲ +ನೀ +ಹೇಳ್+ಏನು +ಹದ+ನಿನ್
ಉಕುತಿ +ಸಾಮವೊ +ಮೇಣು +ಸಮರವೊ
ಸುಕರ +ಮಂತ್ರವನ್+ಅರುಹು +ನೀನ್+ಎಮಗ್+ಅಂಜಬೇಡ್+ಎನಲು
ಉಕುತಿ+ ನಮಗಿನ್ನೇನ್+ಉಭಯ+ರಾ
ಜಕವ +ಸಂತೈಸುವುದು +ಬೇರ್
ಎಮ್ಮ+ಉಕುತಿ+ಯೆಲ್ಲಿಯದ್+ಎಂದನಾ +ಮಾದ್ರೇಯ +ವಿನಯದೊಳು

ಅಚ್ಚರಿ:
(೧) ಉಕುತಿ: ೩ ಬಾರಿ ಪ್ರಯೋಗ
(೨) ಸಾಮವೋ ಸಮರವೋ – ಪದಗಳ ಬಳಕೆ

ಪದ್ಯ ೮: ಸಾತ್ಯಕಿಯ ಪ್ರಕಾರ ಯಾವ ರೀತಿಯಿಂದ ರಾಜ್ಯವನ್ನು ಪಡೆಯಬೇಕು?

ಬಲನ ಮಾತೇನಿವರ ಭಾಗ್ಯದ
ನೆಲೆಯೆ ಫಡ ಕೌರವರ ಶತಕದ
ತಲೆಗೆ ತಾ ವೀಳೆಯವನೆಲೆ ಕುಂತೀ ಕುಮಾರಕನೆ
ನೆಲನ ನಲಗಿನ ಮೊನೆಯೊಳಲ್ಲದೆ
ಮೆಲುನುಡಿಯ ಸಾಮದೊಳು ನಿಮಗಿ
ನ್ನಳುಕಿ ಕೊಡುವರೆ ಧರೆಯೊಳಧಿಕ ಕ್ಷತ್ರಿಯಾತ್ಮಜರು (ಉದ್ಯೋಗ ಪರ್ವ, ೧ ಸಂಧಿ, ೮ ಪದ್ಯ)

ತಾತ್ಪರ್ಯ:
ಸಾತ್ಯಕಿಯು ತನ್ನ ಮಾತನ್ನು ಮುಂದುವರೆಸುತ್ತಾ, ಬಲರಾಮನ ಮಾತುಗಳು ಕೌರವರ ಭಾಗ್ಯಕ್ಕೆ ಮೂಲ ಆಧಾರವೇನೂ ಅಲ್ಲವಲ್ಲ. ಆದರಿಂದೇನು ಆಗುತ್ತದೆ? ಕೌರವರ ನೂರು ತಲೆಗಳನ್ನು ಕಡಿದುಕೊಂಡು ಬಾ ಎಂದು ನನಗೆ ವೀಳೆ ಕೊಡಿ, ಭೂಮಿಯನ್ನು ಶಸ್ತ್ರಧಾರೆಯಿಂದ ಪಡೆಯಬೇಕೆ ಹೊರತು ಸಂಧಾನ, ವಿನಯದ ಮಾತುಗಳಿಗೆ ಒಪ್ಪಿ ಕ್ಷತ್ರಿಯಉ ರಾಜ್ಯವನ್ನು ಕೊಡುವುದಿಲ್ಲ” ಎಂದು ಹೇಳಿದನು.

ಅರ್ಥ:
ಬಲ: ಶೌರ್ಯ; ಮಾತು: ವಾಣಿ; ಭಾಗ್ಯ: ಮಂಗಳ, ಶುಭ; ನೆಲೆ: ಬೀಡು; ಫಡ:ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಶತ: ನೂರು; ತಲೆ: ಶಿರ; ವೀಳೆ:ತಾಂಬೂಲ; ಕುಮಾರ: ಮಗ; ನೆಲ: ಭೂಮಿ; ನಲುಗು: ಬಾಡು, ಮುದುಡು; ಮೊನೆ:ತುದಿ, ಕೊನೆ; ಮೆಲು: ಮೃದು; ನುಡಿ: ಮಾತು; ಸಾಮ: ಶಾಂತಗೊಳಿಸುವಿಕೆ; ಅಳುಕು: ಹೆದರಿಕೆ; ಕೊಡು: ನೀಡು; ಧರೆ: ಭೂಮಿ; ಅಧಿಕ: ಹೆಚ್ಚು; ಆತ್ಮಜ: ಮಗ;

ಪದವಿಂಗಡಣೆ:
ಬಲನ +ಮಾತೇನ್+ಇವರ +ಭಾಗ್ಯದ
ನೆಲೆಯೆ +ಫಡ +ಕೌರವರ+ ಶತಕದ
ತಲೆಗೆ +ತಾ +ವೀಳೆಯವನೆಲೆ+ ಕುಂತೀ +ಕುಮಾರಕನೆ
ನೆಲನ +ನಲಗಿನ +ಮೊನೆಯೊಳ್+ಅಲ್ಲದೆ
ಮೆಲುನುಡಿಯ +ಸಾಮದೊಳು +ನಿಮಗಿನ್
ಅಳುಕಿ+ ಕೊಡುವರೆ+ ಧರೆಯೊಳ್+ಅಧಿಕ+ ಕ್ಷತ್ರಿಯಾತ್ಮಜರು

ಅಚ್ಚರಿ:
(೧) ‘ನ’ ಕಾರದ ಜೋಡಿ ಪದ – ನೆಲನ ನಲಗಿನ
(೨) ಕ್ಷತ್ರಿಯರು ಯಾವುದಕ್ಕೆ ಮಣಿಯುವುದಿಲ್ಲ – ಮೆಲುನುಡಿಯ ಸಾಮದೊಳು ನಿಮಗಿ
ನ್ನಳುಕಿ ಕೊಡುವರೆ ಧರೆಯೊಳಧಿಕ

ಪದ್ಯ ೫: ಕೃಷ್ಣನು ಯಾವ ಸಲಹೆಯನ್ನು ನೀಡಿದನು?

ಕಳುಹುವುದು ಶಿಷ್ಟರನು ಧರಣೀ
ತಳವ ಬೇಡಿಸುವಲ್ಲಿ ಸಾಮವ
ಬಳಸುವುದು ಭೀಷ್ಮಾದಿಗಳ ಕಟ್ಟುವುದು ವಿನಯದಲಿ
ತಿಳಿವುದಾತನ ನೆಲೆಯನಲ್ಲಿಂ
ಬಳಿಕ ನಯವಿಲ್ಲೆಂದಡಾಹವ
ದೊಳಗೆ ಕೈದೋರುವುದು ಮತವೆಂದನು ಮುರಧ್ವಂಸಿ (ಉದ್ಯೋಗ ಪರ್ವ, ೧ ಸಂಧಿ, ೫ ಪದ್ಯ)

ತಾತ್ಪರ್ಯ:
ಕೃಷ್ಣನು ತನ್ನ ಮಾತನ್ನು ಮುಂದುವರೆಸುತ್ತಾ, ಪಾಂಡವರಿಗೆ ಬರಬೇಕಾದ ರಾಜ್ಯದ ಭಾಗವನ್ನು ಕೇಳಲು ಶಿಷ್ಟರಾದ ರಾಯಭಾರಿಗಳನ್ನು ಸಂಧಾನಕ್ಕೆ ಕಳಿಸುವುದು. ಭೀಷ್ಮ, ದ್ರೋಣ ಮುಂತಾದವರನ್ನು ವಿನಯದಿಂದ ನಮ್ಮನ್ನು ವಿರೋಧಿಸದಂತೆ ಮಾಡುವುದು. ದುರ್ಯೋಧನನ ಮನಸ್ಸಿನ ಉದ್ದೇಶವನ್ನು ಅರಿತು ಅವನಲ್ಲಿ ವಿವೇಕವಿಲ್ಲೆಂದು ತಿಳಿದರೆ, ಯುದ್ಧದಲ್ಲಿ ನಮ್ಮ ಚಾತುರ್ಯವನ್ನು ತೋರಿಸಬೇಕು, ಎಂದು ಶ್ರೀಕೃಷ್ಣನು ತನ್ನ ಅಭಿಪ್ರಾಯವನ್ನು ತಿಳಿಸಿದನು.

ಅರ್ಥ:
ಕಳು: ಕಳಿಸು; ಶಿಷ್ಟ:ಒಳ್ಳೆಯ ನಡವಳಿಕೆ, ಸದಾಚಾರ; ಧರಣಿ: ಭೂಮಿ; ಧರಣಿತಳ: ಭೂಮಂಡಲ; ಬೇಡು: ಕೇಳು; ಸಾಮ:ಸಮಾಧಾನದ ಮಾತು; ಬಳಸು: ಉಪಯೋಗಿಸು; ಆದಿ: ಮುಂತಾದ; ವಿನಯ: ಒಳ್ಳೆಯತನ, ಸೌಜನ್ಯ; ತಿಳಿಸು: ವಿಚಾರ ಮಾಡು, ಆಲೋಚಿಸು; ನೆಲೆ: ನಿಲ್ಲುವ ರೀತಿ, ಸ್ಥಿತಿ; ಬಳಿಕ: ನಂತರ; ನಯ:ನುಣುಪು, ಮೃದುತ್ವ; ಆಹವ: ಯುದ್ಧ; ಕೈತೋರು: ಕೈಚಳಕ; ತೋರು: ಪ್ರಕಟಗೊಳಿಸು; ಮತ: ಅಭಿಪ್ರಾಯ; ಧಂಸ: ನಾಶ;

ಪದವಿಂಗಡಣೆ:
ಕಳುಹುವುದು +ಶಿಷ್ಟರನು+ ಧರಣೀ
ತಳವ +ಬೇಡಿಸುವಲ್ಲಿ +ಸಾಮವ
ಬಳಸುವುದು +ಭೀಷ್ಮಾದಿಗಳ +ಕಟ್ಟುವುದು +ವಿನಯದಲಿ
ತಿಳಿವುದ್+ಆತನ +ನೆಲೆಯನ್+ಅಲ್ಲಿಂ
ಬಳಿಕ+ ನಯವಿಲ್ಲೆಂದ್+ಆದಡ್+ಆಹವ
ದೊಳಗೆ +ಕೈದೋರುವುದು+ ಮತವೆಂದನು+ ಮುರಧ್ವಂಸಿ

ಅಚ್ಚರಿ:
(೧) ಸಾಮ, ಭೇದ, ದಂಡ ಪ್ರಯೋಗಗಳನ್ನು ಬಳಸುವ ರೀತಿ ವಿವರಿಸಿರುವುದು
(೨) ವಿನಯ, ನಯ – ಪದಗಳ ಬಳಕೆ
(೩) ಸಾಮವ, ಆಹವ – ಪ್ರಾಸ ಪದಗಳ ಬಳಕೆ, ೨- ೫ ಸಾಲು