ಧರಣಿಪನ ಬೀಳ್ಕೊಂಡು ಮಾರ್ಗಾಂ
ತರದೊಳಾರಡಿಗೈದು ಹೊಕ್ಕನು
ಹರನ ಕರುಣಾ ಸಿದ್ಧಿ ಸಾಧನವೆನಿಪ ಗಿರಿವನವ
ಮರುದಿವಸದುದಯದಲಿ ಮಿಂದನು
ಸರಸಿಯಲಿ ಸಂಧ್ಯಾಭಿಮುಖದಲಿ
ತರಣಿಗರ್ಘ್ಯವನಿತ್ತು ದೇವವ್ರಜಕೆ ಕೈ ಮುಗಿದ (ಅರಣ್ಯ ಪರ್ವ, ೫ ಸಂಧಿ, ೪೧ ಪದ್ಯ)
ತಾತ್ಪರ್ಯ:
ತನ್ನ ಅಣ್ಣನಾದ ರಾಜ ಧರ್ಮಜನನ್ನು ಬೀಳ್ಕೊಂಡು, ಅನ್ಯಮಾರ್ಗಗಳಿಗೆ ಮನಸ್ಸನ್ನು ಒಡ್ಡದೆ, ತನ್ನ ಉದ್ದೇಶವನ್ನು ಸಾಧಿಸುವ ಛಲದಿಂದ ಇಂದ್ರಕೀಲ ಪರ್ವತವನ್ನು ಪ್ರವೇಶಿಸಿದನು. ಆ ಕ್ಷೇತ್ರವು ಶಿವನ ಕರುಣೆಯ ಸಿದ್ಧಿಗೆ ಅನುಕೂಲಕರವಾದುದು. ಮರುದಿವಸ ಉಷಃ ಕಾಲದಲ್ಲೆದ್ದು ಸರೋವರದಲ್ಲಿ ಸ್ನಾನಮಾಡಿ, ಸಂಧ್ಯಾ ಕರ್ಮದಲ್ಲಿ ಸೂರ್ಯನಿಗೆ ಅರ್ಘ್ಯವನ್ನು ನೀಡಿ ದೇವತಾ ಸಮೂಹಕ್ಕೆ ನಮಸ್ಕರಿಸಿದನು.
ಅರ್ಥ:
ಧರಣಿಪ: ರಾಜ; ಬೀಳ್ಕೊಂಡು: ತೆರಳು; ಮಾರ್ಗ: ದಾರಿ; ಅಂತರ: ದೂರ; ಹೊಕ್ಕು: ಸೇರು; ಹರ: ಶಿವ; ಕರುಣ: ದಯೆ; ಸಿದ್ಧಿ: ಸಾಧನೆ, ಗುರಿಮುಟ್ಟುವಿಕೆ; ಸಾಧನ: ಗುರಿಮುಟ್ಟುವ ಪ್ರಯತ್ನ; ಗಿರಿ: ಬೆಟ್ಟ; ವನ: ಕಾಡು; ಮರುದಿವಸ: ಮಾರನೆಯ ದಿನ; ಉದಯ: ಹುಟ್ಟು; ಮಿಂದು: ಮುಳುಗು; ಸರಸಿ: ನೀರು; ಸಂಧ್ಯಾ: ಉಷಃ ಕಾಲ; ತರಣಿ: ಸೂರ್ಯ; ಅರ್ಘ್ಯ: ನೀರು; ದೇವ: ದೇವತೆ; ವ್ರಜ: ಗುಂಪು; ಕೈಮುಗಿ: ನಮಸ್ಕರಿಸು;
ಪದವಿಂಗಡಣೆ:
ಧರಣಿಪನ +ಬೀಳ್ಕೊಂಡು +ಮಾರ್ಗಾಂ
ತರದೊಳ್+ಆರಡಿಗೈದು+ ಹೊಕ್ಕನು
ಹರನ +ಕರುಣಾ +ಸಿದ್ಧಿ +ಸಾಧನವೆನಿಪ +ಗಿರಿವನವ
ಮರುದಿವಸದ್+ಉದಯದಲಿ +ಮಿಂದನು
ಸರಸಿಯಲಿ +ಸಂಧ್ಯ+ಅಭಿಮುಖದಲಿ
ತರಣಿಗ್+ಅರ್ಘ್ಯವನಿತ್ತು+ ದೇವ+ವ್ರಜಕೆ +ಕೈ ಮುಗಿದ
ಅಚ್ಚರಿ:
(೧)ಆರ್ಜುನನ ಅಚಲ ಮನಸ್ಸಿನ ವರ್ಣನೆ – ಮಾರ್ಗಾಂತರದೊಳಾರಡಿಗೈದು