ಕರೆಕರೆದು ರಥಿಕರಿಗೆ ಮಾವಂ
ತರಿಗೆ ಕಾಲಾಳಿಂಗೆ ರಾವು
ತ್ತರಿಗೆ ಕೊಡಿಸಿದನವರವರಿಗವರಂಗದಾಯುಧವ
ತರಿಸಿ ಸಾದು ಜವಾದಿಯನು ಕ
ರ್ಪುರದ ವೀಳೆಯವುಡೆಗೊರೆಗಳಲಿ
ಹಿರಿದು ಪತಿಕರಿಸಿದನು ಪರಿವಾರದವನು ಕಲಿ ದ್ರೋಣ (ದ್ರೋಣ ಪರ್ವ, ೧೫ ಸಂಧಿ, ೨೦ ಪದ್ಯ)
ತಾತ್ಪರ್ಯ:
ರಥಿಕರು, ಮಾವುತರು, ಕಾಲಾಳುಗಳು, ರಾವುತರನ್ನು ಕರೆಕರೆದು ಕೈದುಗಳನ್ನು ಕೊಡಿಸಿದನು. ಸಾದು, ಜವಾಗಿ, ಕರ್ಪೂರ, ವೀಳೆಯ, ಉಡುಗೊರೆಗಳನ್ನು ಕೊಟ್ಟು ದ್ರೋಣನು ಸೈನಿಕರನ್ನು ಸನ್ಮಾನಿಸಿದನು.
ಅರ್ಥ:
ಕರೆ: ಬರೆಮಾಡು; ರಥಿಕ: ರಥದಲ್ಲಿ ಕುಳಿತು ಯುದ್ಧಮಾಡುವವ; ಮಾವುತ: ಆನೆಯನ್ನು ಪಳಗಿಸುವ; ಕಾಲಾಳು: ಸೈನಿಕ; ರಾವುತ: ಕುದುರೆ ಸವಾರ, ಅಶ್ವಾರೋಹಿ; ಕೊಡಿಸು: ಪಡೆ; ಆಯುಧ: ಶಸ್ತ್ರ; ತರಿಸು: ಬರೆಮಾದು; ಸಾದು: ಸಿಂಧೂರ; ಜವಾಜಿ: ಸುವಾಸನ ದ್ರವ್ಯ; ಕರ್ಪುರ: ಸುಗಂಧ ದ್ರವ್ಯ; ವೀಳೆ: ತಾಂಬೂಲ; ಉಡುಗೊರೆ: ಕಾಣಿಕೆ, ಬಳುವಳಿ; ಹಿರಿದು: ಹೆಚ್ಚಿನ; ಪತಿಕರಿಸು: ಅನುಗ್ರಹಿಸು; ಪರಿವಾರ: ಸಂಬಂಧಿಕರು; ಕಲಿ: ಶೂರ;
ಪದವಿಂಗಡಣೆ:
ಕರೆಕರೆದು +ರಥಿಕರಿಗೆ +ಮಾವಂ
ತರಿಗೆ+ ಕಾಲಾಳಿಂಗೆ +ರಾವು
ತ್ತರಿಗೆ +ಕೊಡಿಸಿದನ್+ಅವರ್+ಅವರಿಗ್+ಅವರಂಗದ್+ಆಯುಧವ
ತರಿಸಿ +ಸಾದು +ಜವಾದಿಯನು +ಕ
ರ್ಪುರದ +ವೀಳೆಯವ್+ಉಡೆಗೊರೆಗಳಲಿ
ಹಿರಿದು +ಪತಿಕರಿಸಿದನು +ಪರಿವಾರದವನು +ಕಲಿ +ದ್ರೋಣ
ಅಚ್ಚರಿ:
(೧) ರಥಿಕ, ಮಾವುತ, ಕಾಲಾಳು, ರಾವುತ – ಸೈನ್ಯದವರನ್ನು ಕರೆಯಲು ಬಳಸುವ ಪದಗಳು
(೨) ಕೊಡಿಸಿದನವರವರಿಗವರಂಗದಾಯುಧವ – ಪದದ ರಚನೆ