ಮುರಿದುದಾಬಲವಿಳೆಯೊಡೆಯೆ ಬೊ
ಬ್ಬಿರಿದುದೀ ಬಲವಪಜಯದ ಮಳೆ
ಗರೆದುದವರಿಗೆ ಹರಿದುದಿವರಿಗೆ ಸರ್ಪರಜ್ಜುಭಯ
ತೆರಳಿತಾಚೆಯ ಥಟ್ಟು ಮುಂದಣಿ
ಗುರವಣಿಸಿತೀಯೊಡ್ಡು ಕೌರವ
ರರಸನುತ್ಸಾಹವನು ಬಣ್ಣಿಸಲಿರಿಯೆನಾನೆಂದ (ದ್ರೋಣ ಪರ್ವ, ೧೭ ಸಂಧಿ, ೪೪ ಪದ್ಯ)
ತಾತ್ಪರ್ಯ:
ಪಾಂಡವರ ಸೈನ್ಯ ಮುರಿಯಿತು. ಭೂಮಿ ಬಿರಿಯುವಂತೆ ಕೌರವ ಬಲ ಬೊಬ್ಬಿರಿಯಿತು. ಅವರಿಗೆ ಅಪಜಯದ ಮಳೆ ವರ್ಷಿಸಿತು ಇವರಿಗೆ ಹಾವು ಹಗ್ಗದ ಭಯ ಬಿಟ್ಟಿತು. ಆಚೆಯ ಸೈನ್ಯ ಓಡಿತು, ಈ ಸೈನ್ಯ ಮುನ್ನುಗ್ಗಿತು. ಕೌರವನ ರಣೋತ್ಸಾಹ ಅವರ್ಣನೀಯವಾಗಿತ್ತು.
ಅರ್ಥ:
ಮುರಿ: ಸೀಳು; ಬಲ: ಸೈನ್ಯ; ಇಳೆ: ಭೂಮಿ; ಒಡೆಯ: ರಾಜ; ಬೊಬ್ಬಿರಿ: ಗರ್ಜಿಸು; ಅಪಜಯ: ಸೋಳು; ಮಳೆ: ವರ್ಷ; ಹರಿ: ಪ್ರವಹಿಸು, ಚಲಿಸು; ಸರ್ಪ: ಉರಗ; ರಜ್ಜು: ಹಗ್ಗ; ತೆರಳು: ಮರಳು; ಥಟ್ಟು: ಗುಂಪು; ಮುಂದಣಿ: ಮುಂಚೆ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಒಡ್ಡು: ರಾಶಿ, ಸಮೂಹ; ಅರಸ: ರಾಜ; ಉತ್ಸಾಹ: ಹುರುಪು, ಆಸಕ್ತಿ; ಬಣ್ಣಿಸು: ವರ್ಣಿಸು; ಅರಿ: ತಿಳಿ;
ಪದವಿಂಗಡಣೆ:
ಮುರಿದುದ್+ಆ+ಬಲವ್ + ಇಳೆ+ಒಡೆಯೆ+ ಬೊ
ಬ್ಬಿರಿದುದ್+ಈ+ ಬಲವ್+ಅಪಜಯದ +ಮಳೆ
ಗರೆದುದ್+ಅವರಿಗೆ +ಹರಿದುದ್+ಇವರಿಗೆ+ ಸರ್ಪ+ರಜ್ಜು+ಭಯ
ತೆರಳಿತ್+ಆಚೆಯ +ಥಟ್ಟು +ಮುಂದಣಿಗ್
ಉರವಣಿಸಿತ್+ಈ+ ಒಡ್ಡು +ಕೌರವರ್
ಅರಸನ್+ಉತ್ಸಾಹವನು +ಬಣ್ಣಿಸಲ್+ಅರಿಯೆ+ನಾನೆಂದ
ಅಚ್ಚರಿ:
(೧) ಕೌರವರ ಸ್ಥಿತಿಯನ್ನು ಹೇಳುವ ಪರಿ – ಹರಿದುದಿವರಿಗೆ ಸರ್ಪರಜ್ಜುಭಯ
(೨) ರಾಜನನ್ನು ಇಳೆಯೊಡೆಯ ಎಂದು ಕರೆದಿರುವುದು