ಏಳು ಕುರುಪತಿ ಪಾಂಡುನಂದನ
ರಾಳು ಬರುತಿದೆ ನಾವು ನಾಲ್ವರು
ಕಾಳೆಗದೊಳಂಘೈಸುವೆವು ಬಿಡುಬಿಡು ಸರೋವರವ
ಹೇಳು ಮನವೇನೆನಲು ನೀವಿ
ನ್ನೇಳಿ ದೂರದಲಿರಿ ವಿರೋಧಿಗ
ಳಾಳು ಮಾಡುವುದೇನು ಸಲಿಲದೊಳೆಂದನಾ ಭೂಪ (ಗದಾ ಪರ್ವ, ೪ ಸಂಧಿ, ೫೭ ಪದ್ಯ)
ತಾತ್ಪರ್ಯ:
ಅಶ್ವತ್ಥಾಮನು, ಕೌರವ ಏಳು ಪಾಂಡುಸೇನೆ ಬರುತ್ತಿದೆ. ನೀನು ಸರೋವರವನ್ನು ಬಿಟ್ಟು ಬಾ. ನಾವು ನಾಲ್ವರೂ ಯುದ್ಧ ಮಾಡೋಣ, ನಿನ್ನ ಮನಸ್ಸಿನಲ್ಲೇನಿದೆ ಹೇಳು, ಎನ್ನಲು ಕೌರವನು ನೀವು ಇಲ್ಲಿಂದ ದೂರಕ್ಕೆ ಹೋಗಿಬಿಡಿ, ನಮ್ಮ ವಿರೋಧಿಗಳು ನೀರ್ನಲ್ಲಿರುವ ನನ್ನನ್ನು ಏನು ಮಾಡಿಯಾರು ಎಂದನು.
ಅರ್ಥ:
ನಂದನ: ಮಗ; ಕಾಳೆಗ: ಯುದ್ಧ; ಅಂಗೈಸು: ಜತೆಯಾಗು; ಬಿಡು: ತೊರೆ; ಸರೋರ: ಸರಸಿ; ಹೇಳು: ತಿಳಿಸು; ಮನ: ಮನಸ್ಸು; ದೂರ: ಅಂತರ; ವಿರೋಧಿ: ವೈರಿ; ಆಳು: ಸೇವಕ; ಸಲಿಲ: ನೀರು; ಭೂಪ: ರಾಜ;
ಪದವಿಂಗಡಣೆ:
ಏಳು +ಕುರುಪತಿ +ಪಾಂಡು+ನಂದನರ್
ಆಳು +ಬರುತಿದೆ+ ನಾವು +ನಾಲ್ವರು
ಕಾಳೆಗದೊಳ್+ಅಂಘೈಸುವೆವು +ಬಿಡುಬಿಡು +ಸರೋವರವ
ಹೇಳು +ಮನವೇನ್+ಎನಲು +ನೀವಿನ್
ಏಳಿ +ದೂರದಲಿರಿ +ವಿರೋಧಿಗಳ್
ಆಳು +ಮಾಡುವುದೇನು +ಸಲಿಲದೊಳ್+ಎಂದನಾ +ಭೂಪ
ಅಚ್ಚರಿ:
(೧) ಏಳು, ಆಳು, ಹೇಳು – ಪ್ರಾಸ ಪದಗಳು