ಪದ್ಯ ೧೮: ಪಾಳೆಯದ ಐಶ್ವರ್ಯವು ಯಾವುದನ್ನು ಮೀರಿಸುವಂತಿತ್ತು?

ಪಾಳೆಯಕೆ ಗಜಪುರದ ವಂಕಕೆ
ಕೀಲಿಸಿತು ದಂಡಿಗೆಯ ಸಂದಣಿ
ಮೇಲುಸರಕಿನ ಬಂಡಿ ತಲೆವೊರೆಯೆತ್ತು ಕಂಬಿಗಳ
ಹೇಳಲೇನು ಸಮುದ್ರ ವಿಭವವ
ನೇಳಿಸುವ ಪಾಳೆಯದ ಸಿರಿ ಶೂ
ನ್ಯಾಲಯಕೆ ಜೋಡಿಸಿತಲೈ ಜನಮೇಜಯ ಕ್ಷಿತಿಪ (ಗದಾ ಪರ್ವ, ೪ ಸಂಧಿ, ೧೮ ಪದ್ಯ)

ತಾತ್ಪರ್ಯ:
ಪಾಳೆಯಕ್ಕೂ ಹಸ್ತಿನಾವತಿಯ ಮಹಾದ್ವಾರಕ್ಕೂ ಪಲ್ಲಕ್ಕಿ ಬಂಡಿ, ಹೊರೆಯೆತ್ತುಗಳು, ಕಂಬಿಗಳು ಸಂದಣಿಸಿದವು. ಏನು ಹೇಳಲಿ ರಾಜ ಜನಮೇಜಯ, ರತ್ನಾಕರವಾದ ಸಮುದ್ರದ ವೈಭವವನ್ನು ಮಿರಿಸುವ ಪಾಳೆಯದ ಐಶ್ವರ್ಯವು ಶೂನ್ಯವಾದ ಅರಮನೆಗೆ ಹೋಯಿತು.

ಅರ್ಥ:
ಪಾಳೆಯ: ಬಿಡಾರ; ಗಜಪುರ: ಹಸ್ತಿನಾಪುರ; ಅಂಕ: ಸ್ಪರ್ಧೆ, ಕಾಳಗ ಇತ್ಯಾದಿಗಳು ನಡೆಯುವ ಸ್ಥಳ; ಕೀಲಿಸು: ಜೋಡಿಸು; ದಂಡಿಗೆ: ಪಲ್ಲಕ್ಕಿ; ಸಂದಣಿ: ಗುಂಪು; ಸರಕು: ಸಾಮಾನು; ಬಂಡಿ: ರಥ; ತಲೆ: ಶಿರ; ಕಂಬಿ: ಲೋಹದ ತಂತಿ; ಹೇಳು: ತಿಳಿಸು; ಸಮುದ್ರ: ಸಾಗರ; ವಿಭವ: ಸಿರಿ, ಸಂಪತ್ತು; ಏಳು: ಹತ್ತು; ಸಿರಿ: ಐಶ್ವರ್ಯ; ಶೂನ್ಯ: ಬರಿದಾದುದು; ಆಲಯ: ಮನೆ; ಜೋಡಿಸು: ಕೂಡಿಸು; ಕ್ಷಿತಿಪ: ರಾಜ;

ಪದವಿಂಗಡಣೆ:
ಪಾಳೆಯಕೆ +ಗಜಪುರದವ್ +ಅಂಕಕೆ
ಕೀಲಿಸಿತು +ದಂಡಿಗೆಯ +ಸಂದಣಿ
ಮೇಲು+ಸರಕಿನ +ಬಂಡಿ +ತಲೆವೊರೆಯೆತ್ತು +ಕಂಬಿಗಳ
ಹೇಳಲೇನು +ಸಮುದ್ರ +ವಿಭವವನ್
ಏಳಿಸುವ +ಪಾಳೆಯದ +ಸಿರಿ +ಶೂ
ನ್ಯಾಲಯಕೆ +ಜೋಡಿಸಿತಲೈ +ಜನಮೇಜಯ +ಕ್ಷಿತಿಪ

ಅಚ್ಚರಿ:
(೧) ರೂಪಕದ ಪ್ರಯೋಗ – ಸಮುದ್ರ ವಿಭವವನೇಳಿಸುವ ಪಾಳೆಯದ ಸಿರಿ ಶೂನ್ಯಾಲಯಕೆ ಜೋಡಿಸಿತಲೈ