ಪದ್ಯ ೪೨: ಅರ್ಜುನನು ಕೃಷ್ಣನಿಗೆ ಭೀಮನ ಬಗ್ಗೆ ಏನು ಹೇಳಿದ?

ಅರಸ ಕೇಳೈ ಬಿದ್ದ ಭೀಮನ
ಹೊರಗೆ ಬಂದರ್ಜುನನು ಮೋರೆಗೆ
ಬೆರಳನೊಡ್ಡಿ ಸಮೀರನಂದನನುಸಾರನಾರೈದು
ಮರಳಿದನು ಮುರಹರನನೆಕ್ಕಟಿ
ಗರೆದು ಸಪ್ರಾಣನು ಗದಾನಿ
ರ್ಭರಪರಿಶ್ರಮ ಭೀಮ ಬಳಲಿದನೆಂದನಾ ಪಾರ್ಥ (ಗದಾ ಪರ್ವ, ೭ ಸಂಧಿ, ೪೨ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ರಾಜ ಕೇಳು, ನೆಲದ ಮೇಲೆ ಬಿದ್ದಿದ್ದ ಭೀಮನ ಬಳಿಗೆ ಅರ್ಜುನನು ಬಂದು, ಮೂಗಿಗೆ ಬೆರಳನ್ನಿಟ್ತುನೋಡಿ, ಕೃಷ್ಣನನ್ನು ಪಕ್ಕಕ್ಕೆ ಕರೆದು ಭೀಮನಿಗೆ ಪ್ರಾಣವಿದೆ, ಯುದ್ಧದ ಬಳಲಿಕೆಯಿಂದ ಮೂರ್ಛಿತನಾಗಿದ್ದಾನೆ ಎಂದು ಹೇಳಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಬಿದ್ದ: ಎರಗು; ಹೊರಗೆ: ಆಚೆಗೆ; ಮೋರೆ: ಮುಖ; ಬೆರಳು: ಅಂಗುಲಿ; ಒಡ್ಡು: ನೀಡು; ಸಮೀರ: ವಾಯು; ನಂದನ: ಮಗ; ಉಸುರು: ಜೀವ; ಮರಳು: ಹಿಂದಿರುಗು; ಮುರಹರ: ಕೃಷ್ಣ; ಎಕ್ಕಟಿ: ಏಕಾಕಿ, ಗುಟ್ಟಾಗಿ; ಕರೆದು: ಬರೆಮಾಡು; ಪ್ರಾಣ: ಜೀವ; ನಿರ್ಭರ: ವೇಗ, ರಭಸ; ಪರಿಶ್ರಮ: ಬಳಲಿಕೆ, ಆಯಾಸ; ಬಳಲು: ಆಯಾಸಗೊಳ್ಳು;

ಪದವಿಂಗಡಣೆ:
ಅರಸ+ ಕೇಳೈ +ಬಿದ್ದ+ ಭೀಮನ
ಹೊರಗೆ +ಬಂದ್+ಅರ್ಜುನನು +ಮೋರೆಗೆ
ಬೆರಳನೊಡ್ಡಿ+ ಸಮೀರನಂದನನ್+ಉಸಾರನಾರೈದು
ಮರಳಿದನು +ಮುರಹರನನ್+ಎಕ್ಕಟಿ
ಕರೆದು +ಸಪ್ರಾಣನು +ಗದಾ+ನಿ
ರ್ಭರ+ಪರಿಶ್ರಮ+ ಭೀಮ +ಬಳಲಿದನೆಂದನಾ +ಪಾರ್ಥ

ಅಚ್ಚರಿ:
(೧) ಹೊರೆಗೆ, ಮೋರೆಗೆ – ಪ್ರಾಸ ಪದಗಳು, ೨ ಸಾಲು
(೨) ಭೀಮನನ್ನು ಸಮೀರನಂದನ ಎಂದು ಕರೆದ ಪರಿ