ಘೋಳಿಸಿದ ಕರ್ಪೂರ ಕಸ್ತುರಿ
ವೀಳೆಯವ ಕೊಂಡೆದ್ದು ಸಮರಾ
ಭೀಳ ಗದೆಯನು ತಿರುಹಿದನು ಪಯಪಾಡನಾರೈದು
ಆಳು ಕವಿಯಲಿ ರಾವುತರ ಸಮ
ಪಾಳಿಯಲಿ ಬಿಡಿ ಜೋದರಾನೆಯ
ತೂಳಿಸಲಿ ಸಮರಥರು ಸರಳಿಸಿಯೆಂದನಾ ಭೂಪ (ಗದಾ ಪರ್ವ, ೫ ಸಂಧಿ, ೪೨ ಪದ್ಯ)
ತಾತ್ಪರ್ಯ:
ಕರ್ಪೂರ ಕಸ್ತೂರಿಗಳಿಂದ ಕೂಡಿದ ವೀಳೆಯವನ್ನು ಹಾಕಿಕೊಂಡು ಸಮರ ಭಯಂಕರವಾದ ಗದೆಯನ್ನು ಪಾದಗಳ ವಿನ್ಯಾಸ ಸಹಿತವಾಗಿ ಪರೀಕ್ಷಿಸಿದನು. ಯೋಧರು ನನ್ನ ಮೇಲೆ ಮುತ್ತಿಗೆ ಹಾಕಲಿ; ರಾವುತರನ್ನು ಸರದಿಯ ಮೇಲೆ ಕಳಿಸಿರಿ, ಜೋದರು ಆನೆಗಳೊಡನೆ ನನ್ನ ಮೇಲೆ ನುಗ್ಗಲಿ; ಸಮರಥರು ಬಾಣಪ್ರಯೋಗ ಮಾಡಲಿ ಎಂದನು.
ಅರ್ಥ:
ಘೋಳಿಸು: ಉರುಳಾಡಿಸು, ತೋಯಿಸು; ಕರ್ಪೂರ: ಸುಗಂಧದ ದ್ರವ್ಯ; ಕಸ್ತುರಿ: ಕತ್ತುರಿ, ಮೃಗಮದ; ವೀಳೆ: ತಾಂಬೂಲ; ಸಮರ: ಯುದ್ಧ; ಭೀಳ: ಭಯಂಕರವಾದ; ಗದೆ: ಮುದ್ಗರ; ತಿರುಹು: ತಿರುಗಿಸು; ಪಯಪಾಡು: ಹೆಜ್ಜೆ ಹಾಕುವ ರೀತಿ; ಆಳು: ಸೇವಕ; ಕವಿ: ಆವರಿಸು; ರಾವುತ: ಕುದುರೆ ಸವಾರ; ಸಮ: ಸಮಾನವಾದ; ಪಾಳಿ: ಸರದಿ, ಸಾಲು; ಬಿಡಿ: ಪ್ರತ್ಯೇಕವಾದುದು; ಜೋದರು: ಯೋಧ, ಆನೆ ಮೇಲೆ ಕೂತು ಯುದ್ಧಮಾಡುವವ; ಆನೆ: ಗಜ; ತೂಳಿಸು: ಮೆಟ್ಟುವಿಕೆ, ತುಳಿತ; ಸಮರಥ: ಪರಾಕ್ರಮಿ; ಸರಳಿಸಿ: ಬಾಣಪ್ರಯೋಗ ಮಾಡು; ಭೂಪ: ರಾಜ;
ಪದವಿಂಗಡಣೆ:
ಘೋಳಿಸಿದ+ ಕರ್ಪೂರ +ಕಸ್ತುರಿ
ವೀಳೆಯವ +ಕೊಂಡೆದ್ದು +ಸಮರಾ
ಭೀಳ +ಗದೆಯನು +ತಿರುಹಿದನು+ ಪಯಪಾಡನ್+ಆರೈದು
ಆಳು +ಕವಿಯಲಿ+ ರಾವುತರ +ಸಮ
ಪಾಳಿಯಲಿ +ಬಿಡಿ +ಜೋದರಾನೆಯ
ತೂಳಿಸಲಿ +ಸಮರಥರು +ಸರಳಿಸಿಯೆಂದನಾ +ಭೂಪ
ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕರ್ಪೂರ ಕಸ್ತುರಿವೀಳೆಯವ ಕೊಂಡೆದ್ದು