ಕೊಂದನಿಬ್ಬರ ಸೌಬಲರ ನೃಪ
ನಂದನರ ಗಾಂಧಾರರೊಂದೆರ
ಡೆಂದು ಸಲುಗೆಗೆ ಸಲಿಸಿ ಬಂದೈನೂರ ಬರಿಕೈದು
ಬಂದ ದ್ರೋಣನ ಹಳಚಿ ಭಂಗಕೆ
ತಂದನಹಿತ ವ್ರಜವನಿತ್ತಲು
ಸಂದಣಿಸಿದರು ಕೌರವರು ಪವಮಾನಸುತನೊಡನೆ (ದ್ರೋಣ ಪರ್ವ, ೩ ಸಂಧಿ, ೭೮ ಪದ್ಯ)
ತಾತ್ಪರ್ಯ:
ಅರ್ಜುನನು ಇಬ್ಬರು ಸುಬಲ ಪುತ್ರರನ್ನು ಕೊಂದನು. ಐನೂರು ಮಂದಿ ಗಾಂಧಾರ ರಾಜರನ್ನು ಒಂದೆರಡೆಂದು ಎಣಿಸಿ ಕೊಂದನು. ದ್ರೋಣನು ಬರಲು ಅವನನ್ನು ಭಂಗಪದಿಸಿದನು. ಇತ್ತ ಕೌರವರು ಭೀಮನನ್ನು ತಡೆದರು.
ಅರ್ಥ:
ಕೊಂದು: ಸಾಯಿಸು; ಸೌಬಲ: ಸುಬಲನ ಮಕ್ಕಳು; ಸುಬಲ: ಸಿಂಧು ದೇಶದ ರಾಜ; ನೃಪ: ರಾಜ; ನಂದನ; ಮಕ್ಕಳು; ಸಲುಗೆ: ಸದರ; ಸಲಿಸು: ನೀಡು; ಕೈದು: ಆಯುಧ; ಬಂದು: ಆಗಮಿಸು; ಹಳಚು: ತಾಗುವಿಕೆ; ಭಂಗ: ಮುರಿಯುವಿಕೆ; ಅಹಿತ: ವೈರಿ; ವ್ರಜ: ಗುಂಪು; ಸಂದಣಿಸು: ಗುಂಪು; ಪವಮಾನ: ವಾಯು; ಸುತ: ಪುತ್ರ;
ಪದವಿಂಗಡಣೆ:
ಕೊಂದನ್+ಇಬ್ಬರ +ಸೌಬಲರ +ನೃಪ
ನಂದನರ +ಗಾಂಧಾರರೊಂದ್+ಎರ
ಡೆಂದು +ಸಲುಗೆಗೆ+ ಸಲಿಸಿ +ಬಂದ್+ಐನೂರ +ಬರಿಕೈದು
ಬಂದ +ದ್ರೋಣನ +ಹಳಚಿ +ಭಂಗಕೆ
ತಂದನ್+ಅಹಿತ +ವ್ರಜವನ್+ಇತ್ತಲು
ಸಂದಣಿಸಿದರು +ಕೌರವರು+ ಪವಮಾನಸುತನೊಡನೆ
ಅಚ್ಚರಿ:
(೧) ಸುತ, ನಂದನ – ಸಮಾನಾರ್ಥಕ ಪದ