ಇಷ್ಟಸಂತರ್ಪಣವ ಮಾಡಿ ವಿ
ಶಿಷ್ಟ ಪೂಜಾಪಾತ್ರರನು ಸಂ
ತುಷ್ಟಿಬಡಿಸಿ ಸುಧರ್ಮದಲಿ ರಾಜ್ಯವನು ರಕ್ಷಿಸುತ
ಕೊಟ್ಟವರ ಕೊಂಡವರ ಮತ್ತೊಡ
ಬಟ್ಟವರನನುಜಾತ್ಮಜನರೊಳ
ಗಿಟ್ಟುಕೊಂಡಿಹುದುಚಿತವದು ಭೂಪಾಲ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೭೨ ಪದ್ಯ)
ತಾತ್ಪರ್ಯ:
ಅಗ್ನಿಹೋತ್ರ, ಅನ್ನದಾನ, ಪೂಜ್ಯರನ್ನು ತೃಪ್ತಿಪಡಿಸುವುದು, ಒಳ್ಳೆಯ ಧರ್ಮಮಾರ್ಗದಲ್ಲಿ ರಾಜ್ಯವನ್ನು ರಕ್ಷಿಸುವುದು, ಬಂಧುಗಳು, ನೆಂಟರು, ಆಶ್ರಿತರು, ಸಹೋದರರು, ಮಕ್ಕಳು ಇವರನ್ನು ರಕ್ಷಿಸುವುದು ರಾಜನು ಮಾಡಬೇಕಾದ ಉಚಿತಕರ್ಮವೆಂದು ಸನತ್ಸುಜಾತರು ತಿಳಿಸಿದರು.
ಅರ್ಥ:
ಇಷ್ಟ: ಆಸೆ; ಸಂತರ್ಪಣ: ತೃಪ್ತಿ ಪಡಿಸುವಿಕೆ; ವಿಶಿಷ್ಟ: ವಿಶೇಷ; ಪೂಜೆ: ಅರ್ಚನೆ; ಪೂಜಾಪಾತ್ರ: ಪೂಜ್ಯರು, ಗೌರವಾನ್ವಿತರು; ಸಂತುಷ್ಟಿ: ತೃಪ್ತಿ; ಸುಧರ್ಮ: ಒಳ್ಳೆಯ ಧರ್ಮ, ಕಾರ್ಯ; ರಾಜ್ಯ: ರಾಷ್ಟ್ರ; ರಕ್ಷಿಸು: ಕಾಪಾಡು; ಕೋಟ್ಟವರು: ನೀಡುವರು; ಕೊಂಡ: ತೆಗೆದುಕೊಳ್ಳುವ; ಒಡಬಟ್ಟ: ಒಡಹುಟ್ಟಿದವರು; ಅನುಜಾತ್ಮ: ಸಹೋದರರು; ಜನ: ಮನುಷ್ಯ; ಒಳಗಿಟ್ಟು: ಹೊಂದಿಸಿ, ಒಟ್ಟಾಗಿ; ಉಚಿತ: ಒಳ್ಳೆಯ, ಸರಿಯಾದ; ಭೂಪಾಲ: ರಾಜ;
ಪದವಿಂಗಡಣೆ:
ಇಷ್ಟ+ಸಂತರ್ಪಣವ +ಮಾಡಿ +ವಿ
ಶಿಷ್ಟ +ಪೂಜಾಪಾತ್ರರನು +ಸಂ
ತುಷ್ಟಿಬಡಿಸಿ +ಸುಧರ್ಮದಲಿ +ರಾಜ್ಯವನು +ರಕ್ಷಿಸುತ
ಕೊಟ್ಟವರ +ಕೊಂಡವರ +ಮತ್ತೊಡ
ಬಟ್ಟವರನ್+ಅನುಜಾತ್ಮ+ಜನರ್+ಒಳ
ಗಿಟ್ಟು+ಕೊಂಡಿಹುದ್+ಉಚಿತವದು +ಭೂಪಾಲ +ಕೇಳೆಂದ
ಅಚ್ಚರಿ:
(೧) ಇಷ್ಟ, ವಿಶಿಷ್ಟ – ಪ್ರಾಸ ಪದ
(೨) ಸಂತುಷ್ಟಿ, ಸಂತರ್ಪಣ, ಸುಧರ್ಮ – ಪದಗಳ ಬಳಕೆ