ಪದ್ಯ ೪೨: ದ್ರೋಣರು ಶಿಖಂಡಿಯನ್ನು ಹೇಗೆ ಸೋಲಿಸಿದರು?

ಸಾಕು ಷಂಡನ ಕೂಡೆ ಕಾದುವು
ದೇಕೆ ತಿದ್ದುವೆನೆನುತ ರಥವನು
ನಾಕು ಶರದಲಿ ಮುರಿದು ಸೂತನ ತಲೆಯನೆರಡರಲಿ
ನೂಕಿ ಧನುವನು ಮೂರು ಬಾಣದ
ಲೌಕಿ ಖಂಡಿಸಿ ಹೋಗು ಹೋಗಿ
ನ್ನಾಕೆವಾಳರನರಸಿ ತಾ ಎನುತೈದಿದನು ದ್ರೋಣ (ದ್ರೋಣ ಪರ್ವ, ೨ ಸಂಧಿ, ೪೨ ಪದ್ಯ)

ತಾತ್ಪರ್ಯ:
ಈ ನಪುಂಸಕನ ಜೊತೆಗೆ ಯುದ್ಧಮಾಡಿದ್ದು ಸಾಕು, ಮುಗಿಸುತ್ತೇನೆ ಎಂದು ಯೋಚಿಸಿ ದ್ರೋಣನು ನಾಲ್ಕು ಬಾಣಗಳಿಂದ ಶಿಖಂಡಿಯ ರಥವನ್ನೂ ಎರಡು ಬಾಣಗಳಿಂದ ಸಾರಥಿಯ ತಲೆಯನ್ನೂ ಮುರು ಬಾಣಗಳಿಂದ ಬಿಲ್ಲನ್ನೂ ಕತ್ತರಿಸಿ ಶಿಖಂಡಿ ಹೋಗು ಯಾರಾದರೂ ವೀರರಿದ್ದರೆ ಹುಡುಕಿ ಕರೆದುಕೊಂಡು ಬಾ ಎಂದು ರಥವನ್ನು ಮುಂದಕ್ಕೆ ಚಲಿಸಿದನು.

ಅರ್ಥ:
ಸಾಕು: ನಿಲ್ಲಿಸು; ಷಂಡ: ಶಿಖಂಡಿ; ಕೂಡೆ: ಜೊತೆ; ಕಾದು: ಹೋರಾಡು; ತಿದ್ದು: ಸರಿಪಡಿಸು; ರಥ: ಬಂಡಿ; ನಾಕು: ನಾಲ್ಕು; ಶರ: ಬಾಣ; ಮುರಿ: ಸೀಳು; ಸೂತ: ಸಾರಥಿ ತಲೆ: ಶಿರ; ನೂಕು: ತಳ್ಳು; ಧನು: ಬಿಲ್ಲು; ಬಾಣ: ಶರ; ಔಕು: ತಳ್ಳು; ಖಂಡಿಸು: ಕಡಿ, ಕತ್ತರಿಸು; ಹೋಗು: ತೆರಳು; ಆಕೆವಾಳ: ವೀರ, ಪರಾಕ್ರಮಿ; ಅರಸು: ಹುಡುಕು; ಐದು: ಬಂದುಸೇರು;

ಪದವಿಂಗಡಣೆ:
ಸಾಕು +ಷಂಡನ +ಕೂಡೆ +ಕಾದುವುದ್
ಏಕೆ +ತಿದ್ದುವೆನ್+ಎನುತ +ರಥವನು
ನಾಕು +ಶರದಲಿ +ಮುರಿದು +ಸೂತನ +ತಲೆಯನ್+ಎರಡರಲಿ
ನೂಕಿ +ಧನುವನು +ಮೂರು +ಬಾಣದಲ್
ಔಕಿ +ಖಂಡಿಸಿ+ ಹೋಗು +ಹೋಗಿನ್
ಆಕೆವಾಳರನರಸಿ +ತಾ +ಎನುತ್+ಐದಿದನು +ದ್ರೋಣ

ಅಚ್ಚರಿ:
(೧) ನಾಕು, ಮೂರು, ಎರಡು ಬಾಣಗಳ ಪ್ರಯೋಗವನ್ನು ಚಿತ್ರಿಸುವ ಪರಿ
(೨) ಸಾಕು, ನಾಕು; ನೂಕಿ, ಔಕಿ – ಪ್ರಾಸ ಪದಗಳು

ಪದ್ಯ ೪೭: ದ್ರೌಪದಿಯು ಹತಾಶೆಯಿಂದ ಏನೆಂದಳು?

ಹೆಂಡತಿಯ ಹರಿಬದಲಿಯೊಬ್ಬನೆ
ಗಂಡನಾದರೆ ವೈರಿಯನು ಕಡಿ
ಖಂಡವನು ಮಾಡುವನು ಮೇಣ್ತನ್ನೊಡಲನಿಕ್ಕುವನು
ಗಂಡರೈವರು ಮೂರು ಲೋಕದ
ಗಂಡರೊಬ್ಬಳನಾಳಲಾರಿರಿ
ಗಂಡರೋ ನೀವ್ ಷಂಡರೋ ಹೇಳೆಂದಳಿಂದುಮುಖಿ (ವಿರಾಟ ಪರ್ವ, ೩ ಸಂಧಿ, ೪೭ ಪದ್ಯ)

ತಾತ್ಪರ್ಯ:
ಹೆಂಡತಿಯ ಮಾನವನ್ನು ರಕ್ಷಿಸ್ವುಅ ಪ್ರಸಂಗ ಬಂದಾಗ ಒಬ್ಬನೇ ಗಂಡನಾದರೆ ಶತ್ರುವನ್ನು ಕಡಿದು ಸಾಯಿಸುತ್ತಾನೆ ಇಲ್ಲವೇ ತಾನೆ ಮಡಿಯುತ್ತಾನೆ, ನನಗೆ ತ್ರಿಲೋಕ ವೀರರಾದ ಐವರು ಗಂಡಂದಿರು, ನನ್ನೊಬ್ಬಳನ್ನು ಆಳಲಾರಿರಿ? ನೀವು ನಿಜವಾಗಿ ಗಂಡರೋ ಅಥವ ಷಂಡರೋ ಹೇಳಿ ಎಂದು ದ್ರೌಪದಿಯು ದುಃಖದಿಂದ ಹತಾಶಳಾಗಿ ಉದ್ಗರಿಸಿದಳು.

ಅರ್ಥ:
ಹೆಂಡತಿ: ಪತ್ನಿ; ಹರಿಬ: ರಕ್ಷಣೆ, ಪಾಲನೆ; ವೈರಿ: ಶತ್ರು; ಕಡಿ: ಸೀಳು; ಖಂಡ: ತುಂಡು, ಚೂರು; ಮೇಣ್: ಅಥವ; ಒಡಲು: ದೇಹ; ಇಕ್ಕು: ಇರಿಸು, ಇಡು; ಲೋಕ: ಜಗತ್ತು; ಆಳು: ಅಧಿಕಾರ ನಡೆಸು; ಷಂಡ: ನಪುಂಸಕ, ಹೇಡಿ; ಗಂಡ: ಯಜಮಾನ; ಹೇಳು: ತಿಳಿಸು; ಇಂದುಮುಖಿ: ಚಂದ್ರನಂತ ಮುಖವುಳ್ಳವಳು;

ಪದವಿಂಗಡಣೆ:
ಹೆಂಡತಿಯ+ ಹರಿಬದಲಿ+ಒಬ್ಬನೆ
ಗಂಡನಾದರೆ+ ವೈರಿಯನು +ಕಡಿ
ಖಂಡವನು +ಮಾಡುವನು +ಮೇಣ್+ತನ್ನೊಡಲನ್+ಇಕ್ಕುವನು
ಗಂಡರ್+ಐವರು +ಮೂರು +ಲೋಕದ
ಗಂಡರ್+ಒಬ್ಬಳನ್+ಆಳಲಾರಿರಿ
ಗಂಡರೋ +ನೀವ್ +ಷಂಡರೋ +ಹೇಳೆಂದಳ್+ ಇಂದುಮುಖಿ

ಅಚ್ಚರಿ:
(೧) ಗಂಡ, ಖಂಡ – ಪ್ರಾಸ ಪದ
(೨) ಹತಾಶಾಭಾವ – ಗಂಡರೋ ನೀವ್ ಷಂಡರೋ ಹೇಳೆಂದಳಿಂದುಮುಖಿ

ಪದ್ಯ ೪೭: ಯಾವ ಆರುಜನರನ್ನು ದೂರವಿಡಬೇಕು?

ಜಾರನನು ಕಂಟಕನ ಹಿಸುಣನ
ಚೋರನನು ಷಂಡನನು ಸಮಯ ವಿ
ಕಾರ ಭೇದಿಯ ನಿಂತರುವರನು ಕಂಡು ಮನ್ನಿಸದೆ
ದೂರದೊಳು ವರ್ಜಿಸುವುದು ಬಹಿ
ಷ್ಕಾರಿಗಳು ಸ್ವರಕ್ಕಿವರುಗಳು
ಸಾರವಿದು ಸತ್ಪುರುಷರಭಿಮತವೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೪೭ ಪದ್ಯ)

ತಾತ್ಪರ್ಯ:
ಕಾಮುಕ, ಶತ್ರು, ಚಾಡಿಕೋರ, ಸಮಯ ಬಂದಾಗ ಕೇಡುಬಗೆಯುವವ, ಕಳ್ಳ, ಷಂಡ ಈ ಆರು ಬಗೆಯ ಜನರನ್ನು ದೂರದಲ್ಲೇ ಇಡಬೇಕು ಮತ್ತು ಬಹಿಷ್ಕರಿಸಬೇಕು ಎಂಬುದು ಸತ್ಪುರುಷರ ಅಭಿಪ್ರಾಯವೆಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಜಾರ: ವ್ಯಭಿಚಾರಿ, ಹಾದರಿಗ, ಕಾಮುಕ; ಕಂಟಕ: ವಿಪತ್ತು; ಹಿಸುಣ:ಚಾಡಿ, ಕುತ್ಸಿತ; ಚೋರ: ಕಳ್ಳ; ಷಂಡ: ನಪುಂಸಕ, ಕೊಜ್ಜೆ, ಹೇಡಿ, ದುರ್ಬಲ; ಸಮಯ: ಕಾಲ; ವಿಕಾರ: ಬದಲಾವಣೆ, ಮಾರ್ಪಾಟು, ಮನಸ್ಸಿನ ವಿಕೃತಿ; ಭೇದಿ: ಒಡೆಯುವವ, ಸೀಳುವವ; ಅರುವರ: ಆರುರೀತಿಯ; ಕಂಡು: ನೋಡಿ; ಮನ್ನಿಸು: ಅಂಗೀಕರಿಸು, ದಯಪಾಲಿಸು; ದೂರ: ಬಹಳ ಅಂತರ; ವರ್ಜಿಸು:ಬಿಡು, ತ್ಯಜಿಸು; ಬಹಿಷ್ಕಾರ: ಹೊರಹಾಕುವಿಕೆ; ಸರ್ವ: ಎಲ್ಲಾ; ಸಾರ: ರಸ; ಸತ್ಪುರುಷ: ಒಳ್ಳೆಯ ಜನ; ಮುನಿ: ಋಷಿ;

ಪದವಿಂಗಡಣೆ:
ಜಾರನನು +ಕಂಟಕನ +ಹಿಸುಣನ
ಚೋರನನು +ಷಂಡನನು +ಸಮಯ +ವಿ
ಕಾರ +ಭೇದಿಯ +ನಿಂತರುವರನು +ಕಂಡು +ಮನ್ನಿಸದೆ
ದೂರದೊಳು +ವರ್ಜಿಸುವುದು +ಬಹಿ
ಷ್ಕಾರಿಗಳು +ಸ್ವರಕ್ಕ್+ಇವರುಗಳು
ಸಾರವಿದು+ ಸತ್ಪುರುಷರ್+ಅಭಿಮತವೆಂದನಾ +ಮುನಿಪ

ಅಚ್ಚರಿ:
(೧) ೬ ರೀತಿಯ ಜನರನ್ನು ವಿವರಿಸುವ ಪದ್ಯ – ಜಾರ, ಕಂಟಕ, ಹಿಸುಣ, ಚೋರ, ಷಂಡ, ವಿಕಾರಿ