ತಂದೆ ನೋಡೈ ಕೃಷ್ಣ ತನ್ನಯ
ನಂದನರು ನೂರ್ವರಿಗೆ ಕಿರಿಯಳ
ನಿಂದುಮುಖಿ ದುಶ್ಶಳೆಯನಾ ಸೈಂಧವನ ವಲ್ಲಭೆಯ
ಅಂದು ವಿವಿಧವ್ಯೂಹದಲಿ ಗುರು
ನಿಂದಡೆಯು ಹುಸಿರಾತ್ರಿಯಲಿ ನೀ
ಕೊಂದಲೈ ತನ್ನಳಿಯನನು ವರ ಸಿಂಧುಭೂಪತಿಯ (ಗದಾ ಪರ್ವ, ೧೨ ಸಂಧಿ, ೧೩ ಪದ್ಯ)
ತಾತ್ಪರ್ಯ:
ಅಪ್ಪಾ ಕೃಷ್ಣ ನೋಡು, ನನ್ನ ನೂರು ಮಕ್ಕಳ ತಂಗಿಯೂ ಸೈಂಧವನ ಪತ್ನಿಯೂ ಆದ ದುಶ್ಶಳೆಯನ್ನು ನೋಡು, ಅಂದು ಹಲವು ವ್ಯೂಹಗಳನ್ನು ರಚಿಸಿ ಅದರ ನಡುವೆ ದ್ರೋಣನು ನಿಲ್ಲಿಸಿದ ನನ್ನಳಿಯ ಸೈಂಧವನನ್ನು ಹುಸಿ ರಾತ್ರಿಯನ್ನು ಸೃಷ್ಟಿಸಿ ಕೊಂದೆ ಎಂದು ತನ್ನ ದುಃಖವನ್ನು ತೋಡಿಕೊಂಡಳು.
ಅರ್ಥ:
ತಂದೆ: ಅಯ್ಯ, ಪಿತ; ನೋಡು: ವೀಕ್ಷಿಸು; ನಂದನ: ಮಕ್ಕಳು; ಕಿರಿ: ಚಿಕ್ಕವ; ಇಂದುಮುಖಿ: ಚಂದ್ರನಂತ ಮುಖವುಳ್ಳವಳು, ಹೆಣ್ಣು; ವಲ್ಲಭೆ: ಒಡತಿ, ಪತ್ನಿ; ವಿವಿಧ: ಹಲವಾರು; ವ್ಯೂಹ: ಗುಂಪು, ಸಮೂಹ, ದಳ ರಚನೆ; ಗುರು: ಆಚಾರ್ಯ; ನಿಂದು: ನಿಲ್ಲು; ಹುಸಿ: ಸುಳ್ಳು; ರಾತ್ರಿ: ಇರುಳು; ಭೂಪತಿ: ರಾಜ;
ಪದವಿಂಗಡಣೆ:
ತಂದೆ +ನೋಡೈ +ಕೃಷ್ಣ+ ತನ್ನಯ
ನಂದನರು +ನೂರ್ವರಿಗೆ +ಕಿರಿಯಳನ್
ಇಂದುಮುಖಿ +ದುಶ್ಶಳೆಯನ್+ಆ+ ಸೈಂಧವನ +ವಲ್ಲಭೆಯ
ಅಂದು +ವಿವಿಧ+ವ್ಯೂಹದಲಿ +ಗುರು
ನಿಂದಡೆಯು +ಹುಸಿ+ರಾತ್ರಿಯಲಿ +ನೀ
ಕೊಂದಲೈ +ತನ್ನಳಿಯನನು +ವರ +ಸಿಂಧು+ಭೂಪತಿಯ
ಅಚ್ಚರಿ:
(೧) ದುಶ್ಶಳೆ ಎಂದು ಕರೆದ ಪರಿ – ಇಂದುಮುಖಿ, ದುಶ್ಶಳೆ, ವಲ್ಲಭೆ;
(೨) ಕೃಷ್ಣನು ಸೈಂಧವನನ್ನು ಸಾಯಿಸಿದ ಪರಿ – ಹುಸಿರಾತ್ರಿಯಲಿ ನೀ ಕೊಂದಲೈ ತನ್ನಳಿಯನನು ವರ ಸಿಂಧುಭೂಪತಿಯ