ಪದ್ಯ ೨೮: ದ್ರೋಣನು ಯಾಕೆ ಚಿಂತಿಸಿದನು?

ಇವು ಮಹಾನಿಸ್ಸೀಮತರ ವೈ
ಷ್ಣವವಲೇ ದಿವ್ಯಾಸ್ತ್ರನಿವಹವ
ನವರು ಕೊಟ್ಟರು ಕೊಂಡನುಚಿತ ವಿಧಾನದಲಿ ದ್ರೋಣ
ಇವು ಮ್ಹಾರಣರಂಗದಲಿ ಶಾ
ತ್ರವ ನಿವಾರಣವೈಸಲೆಮ್ಮೀ
ವ್ಯವಹೃತಿಗೆ ತಾನೇನುಪಾಯವೆನುತ್ತ ಚಿಂತಿಸಿದ (ಆದಿ ಪರ್ವ, ೬ ಸಂಧಿ, ೨೮ ಪದ್ಯ)

ತಾತ್ಪರ್ಯ:
ಪರಶುರಾಮನು ಇವು ಮಹಾವೈಷ್ಣವ ದಿವ್ಯಾಸ್ತ್ರಗಳು, ಇವುಗಳ ಪ್ರಭಾವಕ್ಕೆ ಎಲ್ಲೆಯೇ ಇಲ್ಲ. ಇವನ್ನು ತೆಗೆದುಕೋ ಎಂದು ಹೇಳಿದನು. ದ್ರೋಣನು ಉಚಿತರೀತಿಯಲ್ಲಿ ಅವನ್ನು ಸ್ವೀಕರಿಸಿದನು. ಈ ಅಸ್ತ್ರಗಳಿಂದ ರಣರಂಗದಲ್ಲಿ ಶತ್ರುಗಳನ್ನು ಸಂಹರಿಸಬಹುದು. ಆದರೆ ಲೌಕಿಕ ವ್ಯವಹಾರಕ್ಕೆ ಏನು ಉಪಾಯವನ್ನು ಮಾಡಬೇಕೆಂದು ದ್ರೋಣನು ಚಿಂತಿಸಿದನು.

ಅರ್ಥ:
ನಿಸ್ಸೀಮ: ನಿಪುಣ, ಅತಿಶೂರ, ಪರಾಕ್ರಮಿ; ದಿವ್ಯಾಸ್ತ್ರ: ಶ್ರೇಷ್ಠವಾದ ಆಯುಧಗಳು; ನಿವಹ: ಗುಂಪು; ಕೊಟ್ಟರು: ನೀಡಿದರು; ಉಚಿತ: ಸರಿಯಾದ; ವಿಧಾನ: ರೀತಿ; ರಣರಂಗ: ಯುದ್ಧಭೂಮಿ; ಶಾತ್ರ: ಶತ್ರು; ನಿವಾರಣೆ: ನಾಶ; ವ್ಯವಹೃತಿ: ಲೌಕಿಕ ಜೀವನ; ಉಪಾಯ: ಯುಕ್ತಿ; ಚಿಂತಿಸು: ಯೋಚಿಸು;

ಪದವಿಂಗಡಣೆ:
ಇವು +ಮಹಾ+ನಿಸ್ಸೀಮತರ +ವೈ
ಷ್ಣವವಲೇ +ದಿವ್ಯಾಸ್ತ್ರ+ನಿವಹವನ್
ಅವರು +ಕೊಟ್ಟರು +ಕೊಂಡನ್+ಉಚಿತ +ವಿಧಾನದಲಿ +ದ್ರೋಣ
ಇವು +ಮಹಾರಣರಂಗದಲಿ +ಶಾ
ತ್ರವ+ ನಿವಾರಣವೈಸಲ್+ಎಮ್ಮೀ
ವ್ಯವಹೃತಿಗೆ +ತಾನೇನ್+ಉಪಾಯವ್+ಎನುತ್ತ+ ಚಿಂತಿಸಿದ

ಅಚ್ಚರಿ:
(೧) ಮಹಾನಿಸ್ಸೀಮ, ಮಹಾರಣರಂಗ – ಮಹಾ ಪದದ ಬಳಕೆ