ಪದ್ಯ ೩೪: ಕೃಷ್ಣನು ತೊಡೆ ಮುರಿದುದು ತಪ್ಪಲ್ಲವೆಂದು ಏಕೆ ಹೇಳಿದನು?

ಆ ಪತಿವ್ರತೆ ಬಯ್ದಳೀ ಕುರು
ಭೂಪ ತೊಡೆಗಳ ತೋರಿ ಜರೆಯಲು
ದ್ರೌಪದಿಯ ನುಡಿ ತಪ್ಪುವುದೆ ಋಷಿವಚನದನುಗತಿಗೆ
ಕೋಪ ಕುಡಿಯಿಡಲೀ ವೃಕೋದರ
ನಾಪನಿತನುಡಿದನು ಪ್ರತಿಜ್ಞಾ
ಸ್ಥಾಪನಕೆ ಬಳಿಕೇನ ಮಾಡುವುದೆಂದನಸುರಾರಿ (ಗದಾ ಪರ್ವ, ೮ ಸಂಧಿ, ೩೪ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ನುಡಿಯುತ್ತಾ, ತೊಡೆಯನ್ನು ತೋರಿಸಿ ಕೌರವನು ದ್ರೌಪದಿಯನ್ನು ಜರೆದಾಗ ಅವಳು ತೊಡೆ ಮುರಿದು ಸಾಯಿ ಎಂದು ಶಪಿಸಿದಳು. ಮೈತ್ರೇಯನ ನುಡಿಗೆ ಅನುಗುಣವಾಗಿ ದ್ರೌಪದಿಯೂ ಶಪಿಸಿದಳು. ನಿನ್ನ ತೊಡೆಗಲನ್ನು ಮುರಿಯುವೆನೆಂದು ಕೋಪದಿಂದ ಭೀಮನೂ ಭಾಷೆ ಮಾಡಿದನು. ಪ್ರತಿಜ್ಞೆಯಂತೆ ನಡೆದುಕೊಂಡರೆ ಅದರಲ್ಲೇನು ತಪ್ಪು ಎಂದು ಕೃಷ್ಣನು ಪ್ರಶ್ನಿಸಿದನು.

ಅರ್ಥ:
ಪತಿವ್ರತೆ: ಸಾಧ್ವಿ; ಬಯ್ದು: ಜರಿದು, ನಿಂದಿಸು; ಭೂಪ: ರಾಜ; ತೊಡೆ: ಜಂಘೆ; ತೋರು: ಪ್ರದರ್ಶಿಸು; ಜರೆ: ಬಯ್ಯು; ನುಡಿ: ಮಾತು; ತಪ್ಪು: ಸರಿಯಿಲ್ಲದ್ ಸ್ಥಿತಿ; ಋಷಿ: ಮುನಿ; ವಚನ: ಮಾತು ಅನುಗತಿ: ಸಾವು; ಕೋಪ: ಮುಳಿ; ಕುಡಿ: ಚಿಗುರು; ಪ್ರತಿಜ್ಣೆ: ಪ್ರಮಾಣ; ಸ್ಥಾಪನ: ಇಡು; ಬಳಿಕ: ನಂತರ; ಅಸುರಾರಿ: ಕೃಷ್ಣ;

ಪದವಿಂಗಡಣೆ:
ಆ +ಪತಿವ್ರತೆ+ ಬಯ್ದಳ್+ಈ+ ಕುರು
ಭೂಪ +ತೊಡೆಗಳ +ತೋರಿ +ಜರೆಯಲು
ದ್ರೌಪದಿಯ +ನುಡಿ +ತಪ್ಪುವುದೆ+ ಋಷಿ+ವಚನದ್+ಅನುಗತಿಗೆ
ಕೋಪ +ಕುಡಿಯಿಡಲ್+ಈ+ ವೃಕೋದರನ್
ಆಪನಿತ+ನುಡಿದನು +ಪ್ರತಿಜ್ಞಾ
ಸ್ಥಾಪನಕೆ +ಬಳಿಕೇನ +ಮಾಡುವುದೆಂದನ್+ಅಸುರಾರಿ

ಅಚ್ಚರಿ:
(೧) ಕೋಪ ಹೆಚ್ಚಾಯಿತು ಎಂದು ಹೇಳಲು – ಕೋಪ ಕುಡಿಯಿಡಲೀ ವೃಕೋದರನಾಪನಿತನುಡಿದನು

ಪದ್ಯ ೨೫: ಪಾಂಡವರೇಕೆ ಅಳಲಿದರು?

ಒಲೆದು ಬಿದ್ದನು ಭೀಮ ಕುಲಗಿರಿ
ಮಲಗುವಂದದಲೇರಬಾಯಿಂ
ದಿಳಿವ ಶೋಣಿತಧಾರೆ ಮಗ್ಗುಲ ಮುಸುಕಿತವನಿಯಲಿ
ಎಲೆ ಮಹಾದೇವಾ ವೃಕೋದರ
ನಳಿದನೇ ಹಾ ಭೀಮ ಹಾಯೆಂ
ದಳಲಿದುದು ಪರಿವಾರ ಸಾತ್ಯಕಿ ಸೃಂಜಯಾದಿಗಳು (ಗದಾ ಪರ್ವ, ೭ ಸಂಧಿ, ೨೫ ಪದ್ಯ)

ತಾತ್ಪರ್ಯ:
ಕುಲಗಿರಿಯು ಉರುಳ್ವಂತೆ ಭೀಮನು ಒಲೆದು ಬಿದ್ದನು. ಅವನ ಬಾಯಿಂದ ರಕ್ತ ಸುರಿದು ನೆಲ ನೆನೆಯಿತು. ಶಿವಶಿವಾ ಭೀಮನು ಮಡಿದನೇ! ಹಾ ಭೀಮಾ ಎಂದು ಸಾತ್ಯಕಿ ಸಂಜಯ ಮೊದಲಾದ ಪರಿವಾರದವರು ದುಃಖಿಸಿದರು.

ಅರ್ಥ:
ಒಲೆದು: ತೂಗಾಡು; ಬಿದ್ದು: ಬೀಳು; ಕುಲಗಿರಿ: ದೊಡ್ಡ ಬೆಟ್ಟ; ಮಲಗು: ನಿದ್ರಿಸು; ಇಳಿ: ಜಾರು; ಶೋಣಿತ: ರಕ್ತ; ಧಾರೆ: ವರ್ಷ; ಮಗ್ಗುಲು: ಪಕ್ಕ, ಪಾರ್ಶ್ವ; ಮುಸುಕು: ಹೊದಿಕೆ; ಯೋನಿ; ಅವನಿ: ಭೂಮಿ; ಅಳಿ: ಸಾವು; ಅಳಲು: ದುಃಖಿಸು; ಪರಿವಾರ: ಬಂಧುಜನ; ಆದಿ: ಮುಂತಾದ; ಏರ: ಆರೋಹಿಸು;

ಪದವಿಂಗಡಣೆ:
ಒಲೆದು +ಬಿದ್ದನು+ ಭೀಮ +ಕುಲಗಿರಿ
ಮಲಗುವಂದದಲ್+ಏರ+ಬಾಯಿಂ
ದಿಳಿವ +ಶೋಣಿತ+ಧಾರೆ +ಮಗ್ಗುಲ +ಮುಸುಕಿತ್+ಅವನಿಯಲಿ
ಎಲೆ +ಮಹಾದೇವಾ +ವೃಕೋದರನ್
ಅಳಿದನೇ +ಹಾ +ಭೀಮ +ಹಾಯೆಂದ್
ಅಳಲಿದುದು +ಪರಿವಾರ +ಸಾತ್ಯಕಿ+ ಸೃಂಜಯ+ಆದಿಗಳು

ಅಚ್ಚರಿ:
(೧) ರೂಪಕದ ಪ್ರಯೋಗ – ಒಲೆದು ಬಿದ್ದನು ಭೀಮ ಕುಲಗಿರಿ ಮಲಗುವಂದದಲ್

ಪದ್ಯ ೫: ಕೃಷ್ಣನು ಬಲರಾಮನಿಗೇನು ಹೇಳಿದ?

ತಿಳಿದು ನೋಡಿರೆ ರಾಮ ಧರ್ಮ
ಸ್ಥಳಕೆ ನೀವು ಸಹಾಯವಿನಿಬರ
ಗೆಲವು ನಿರ್ಮಳ ಧರ್ಮಮೂಲವೊ ಧರ್ಮವಿರಹಿತವೊ
ಛಲವ ಬಿಡಿರೇ ನಿಮ್ಮ ಶಿಷ್ಯನು
ಕಲಿವೃಕೋದರನಲ್ಲವೇ ತವೆ
ಬಳಸಬಹುದೇ ಪಕ್ಷಪಾತದೊಳೆಂದನಸುರಾರಿ (ಗದಾ ಪರ್ವ, ೬ ಸಂಧಿ, ೫ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಬಲರಾಮನಿಗೆ ನುಡಿಯುತ್ತಾ, ಅಣ್ಣ ಆಲೋಚಿಸಿ ನೋಡು, ಧರ್ಮವೆಲ್ಲಿದೆಯೋ ಅಲ್ಲಿ ನಿನ್ನ ಸಹಾಯವಿರುತ್ತದೆ. ಪಾಂಡವ ವಿಜಯವು ಧರ್ಮದಿಂದಾದುದೋ ಇಲ್ಲವೇ ಧರ್ಮದಿಂದ ದೂರವಾಗಿರುವುದೋ? ನಿಮ್ಮ ಛಲವನ್ನು ಬಿಡಿ. ಭೀಮನೂ ಸಹ ನಿನ್ನ ಶಿಷ್ಯನಲ್ಲವೇ? ಹೀಗಿದ್ದೂ ನೀವು ಪಕ್ಷಪಾತ ಮಾಡಬಹುದೇ ಎಂದು ಪ್ರಶ್ನಿಸಿದನು.

ಅರ್ಥ:
ತಿಳಿ: ಅರ್ಥೈಸು; ನೋಡು: ವೀಕ್ಷಿಸು; ಧರ್ಮ: ಧಾರಣೆ ಮಾಡಿದುದು; ಸ್ಥಳ: ಪ್ರದೇಶ; ಸಹಾಯ: ನೆರವು; ಇನಿಬರು: ಇಷ್ಟುಜನ; ಗೆಲುವು: ಜಯ; ನಿರ್ಮಳ: ಶುದ್ಧ; ಮೂಲ: ಉಗಮ; ವಿರಹಿತ: ಬಿಟ್ಟವನು, ತೊರೆದವನು; ಛಲ: ದೃಢ ನಿಶ್ಚಯ; ಬಿಡು: ತೊರೆ; ಶಿಷ್ಯ: ವಿದ್ಯಾರ್ಥಿ; ಕಲಿ: ಶೂರ; ವೃಕೋದರ: ಭೀಮ; ತವೆ: ಅತಿಶಯವಾಗಿ, ಹೆಚ್ಚಾಗಿ; ಬಳಸು: ಆವರಿಸುವಿಕೆ; ಪಕ್ಷಪಾತ: ಭೇದ, ವಂಚನೆ; ಅಸುರಾರಿ: ಕೃಷ್ಣ;

ಪದವಿಂಗಡಣೆ:
ತಿಳಿದು +ನೋಡಿರೆ +ರಾಮ +ಧರ್ಮ
ಸ್ಥಳಕೆ +ನೀವು +ಸಹಾಯವ್+ಇನಿಬರ
ಗೆಲವು +ನಿರ್ಮಳ +ಧರ್ಮಮೂಲವೊ +ಧರ್ಮವಿರಹಿತವೊ
ಛಲವ +ಬಿಡಿರೇ +ನಿಮ್ಮ+ ಶಿಷ್ಯನು
ಕಲಿ+ವೃಕೋದರನಲ್ಲವೇ +ತವೆ
ಬಳಸಬಹುದೇ +ಪಕ್ಷಪಾತದೊಳ್+ಎಂದನ್+ಅಸುರಾರಿ

ಅಚ್ಚರಿ:
(೧) ಧರ್ಮಮೂಲವೋ, ಧರ್ಮವಿರಹಿತವೊ – ಪದದ ಬಳಕೆ

ಪದ್ಯ ೫೧: ಭೀಮನು ಶಬರನಿಗೆ ಏನು ಹೇಳಿದನು?

ಆದರೆಕ್ಕಟಿ ಬಿನ್ನಹವ ನೀ
ವಾದರಿಪುದೆನೆ ತುಷ್ಟನಾಗಿ ವೃ
ಕೋದರನು ಕರಸಿದನು ಪರಿಮಿತಕಾ ಪುಳಿಂದಕರ
ಆದುದೇ ನೆಲೆ ಕುರುಪತಿಗೆ ದು
ರ್ಭೇದವಿದು ಮೆಚ್ಚುಂಟು ನಿಮಗೆನ
ಲಾ ದುರಾತ್ಮಕರರುಹಿದರು ಧೃತರಾಷ್ಟ್ರ ಕೇಳೆಂದ (ಗದಾ ಪರ್ವ, ೪ ಸಂಧಿ, ೫೧ ಪದ್ಯ)

ತಾತ್ಪರ್ಯ:
ಎಲೈ ಧೃತರಾಷ್ಟ್ರ ಕೇಳು, ಶಬರನು ಭೀಮನನ್ನು ಕಂಡು ಆತನೊಡನೆ ಏಕಾಂಗಿಯಾಗಿ ಮಾತನಾಡಲು ಬಯಸುತ್ತೇನೆ ಎಂದು ಹೇಳಲು, ಭೀಮನು ಸಂತುಷ್ಟನಾಗಿ ಆಪ್ತ ಪರಿವಾರದವರೊಡನೆ ಆ ಶಬರನನ್ನು ಕರೆಸಿದನು. ಕೌರವನು ಎಲ್ಲಿ ಅಡಗಿದನೆಂಬುದು ಗೊತ್ತೇ? ಈವರೆಗೆ ಆ ವಿಷಯ ತಿಳಿದುಬಂದಿಲ್ಲ. ನೀವು ಹೇಳಿದರೆ ನಿಮಗೆ ಉಡುಗೊರೆಯನ್ನು ಕೊಡುತ್ತೇನೆ ಎಂದು ಭೀಮನು ಹೇಳಲು, ಆ ಶಬರನು ಹೀಗೆಂದು ನುಡಿದನು.

ಅರ್ಥ:
ಎಕ್ಕಟಿ: ಒಬ್ಬಂಟಿಗ, ಏಕಾಕಿ; ಬಿನ್ನಹ: ಕೋರಿಕೆ; ತುಷ್ಟ: ತೃಪ್ತ, ಆನಂದ; ಕರಸು: ಬರೆಮಾಡು; ಪರಿಮಿತ: ಮಿತ, ಸ್ವಲ್ಪ; ಪುಳಿಂದಕ: ಬೇಟೆಗಾರ; ನೆಲೆ: ವಾಸಸ್ಥಾನ; ದುರ್ಭೇದ: ಭೇದಿಸಲಾಗದ; ಮೆಚ್ಚು: ಒಲುಮೆ, ಪ್ರೀತಿ; ದುರಾತ್ಮ: ದುಷ್ಟ; ಅರುಹು: ಹೇಳು; ಆದರ: ಆಸಕ್ತಿ, ವಿಶ್ವಾಸ;

ಪದವಿಂಗಡಣೆ:
ಆದರ್+ಎಕ್ಕಟಿ +ಬಿನ್ನಹವ +ನೀವ್
ಆದರಿಪುದ್+ಎನೆ +ತುಷ್ಟನಾಗಿ +ವೃ
ಕೋದರನು +ಕರಸಿದನು +ಪರಿಮಿತಕ್+ಆ+ ಪುಳಿಂದಕರ
ಆದುದೇ +ನೆಲೆ +ಕುರುಪತಿಗೆ+ ದು
ರ್ಭೇದವಿದು+ ಮೆಚ್ಚುಂಟು +ನಿಮಗ್+ಎನಲ್
ಆ+ ದುರಾತ್ಮಕರ್+ಅರುಹಿದರು +ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ಆದರ್, ಆದರಿಪು – ಪದದ ಬಳಕೆ
(೨) ಕೌರವನೆಲ್ಲಿದ್ದಾನೆ ಎಂದು ಹೇಳುವ ಪರಿ – ಆದುದೇ ನೆಲೆ ಕುರುಪತಿಗೆ

ಪದ್ಯ ೧೨: ಪಾಂಡವರ ಗುಂಪಿನಲ್ಲಿದ್ದ ಪರಾಕ್ರಮಿಗಳಾರು?

ಅರಸನೆಡವಂಕದಲಿ ಸಾತ್ಯಕಿ
ನರ ನಕುಲ ಸಹದೇವ ಸೋಮಕ
ವರ ಯುಧಾಮನ್ಯುತ್ತಮೌಜಸ ಸೃಂಜಯಾದಿಗಳು
ನೆರೆದುದಾ ಬಲವಂಕದಲಿ ತನು
ಜರು ವೃಕೋದರ ದ್ರುಪದಸುತ ದು
ರ್ಧರ ಶಿಖಂಡಿ ಪ್ರಮುಖ ಘನಪಾಂಚಾಲ ಪರಿವಾರ (ಶಲ್ಯ ಪರ್ವ, ೨ ಸಂಧಿ, ೧೨ ಪದ್ಯ)

ತಾತ್ಪರ್ಯ:
ಧರ್ಮಜನ ಎಡದಲ್ಲಿ ಸಾತ್ಯಕಿ ಅರ್ಜುನ, ನಕುಲ, ಸಹದೇವ ಸೋಮಕ, ಯುಧಾಮನ್ಯು, ಉತ್ತಮೌಜಸ, ಸೃಂಜಯರೇ ಮೊದಲಾದವರಿದ್ದರು. ಬಲಭಾಗದಲ್ಲಿ ಉಪಪಾಂಡವರು, ಭೀಮ ಧೃಷ್ಟದ್ಯುಮ್ನ, ಶಿಖಂಡಿ ಮತ್ತು ಉಳಿದ ಪಾಂಚಾಲರು ಇದ್ದರು.

ಅರ್ಥ:
ಅರಸ: ರಾಜ; ವಂಕ: ಬದಿ, ಮಗ್ಗುಲು; ನರ: ಅರ್ಜುನ; ಆದಿ: ಮುಂತಾದ; ನೆರೆ: ಗುಂಪು; ಬಲ: ದಕ್ಷಿಣ; ಎಡ: ವಾಮ; ತನುಜ: ಮಕ್ಕಳು; ಸುತ: ಮಗ; ಘನ: ಶ್ರೇಷ್ಠ; ಪರಿವಾರ: ಪರಿಜನ;

ಪದವಿಂಗಡಣೆ:
ಅರಸನ್+ಎಡವಂಕದಲಿ +ಸಾತ್ಯಕಿ
ನರ +ನಕುಲ +ಸಹದೇವ +ಸೋಮಕ
ವರ+ ಯುಧಾಮನ್ಯ+ಉತ್ತಮೌಜಸ+ ಸೃಂಜ+ಆದಿಗಳು
ನೆರೆದುದಾ +ಬಲವಂಕದಲಿ +ತನು
ಜರು +ವೃಕೋದರ +ದ್ರುಪದ+ಸುತ +ದು
ರ್ಧರ +ಶಿಖಂಡಿ +ಪ್ರಮುಖ +ಘನ+ಪಾಂಚಾಲ +ಪರಿವಾರ

ಅಚ್ಚರಿ:
(೧) ಎಡವಂಕ, ಬಲವಂಕ – ವಿರುದ್ಧ ಪದ
(೨) ಜೋಡಿ ಅಕ್ಷರದ ಪದ – ನರ, ನಕುಲ; ಸಹದೇವ ಸೋಮಕ

ಪದ್ಯ ೧೭: ಯಾರ ಮರಣದ ನಂತರ ಕರ್ಣನು ದುರ್ಯೋಧನನ ಕೈಹಿಡಿಯುತ್ತಾನೆ?

ಆ ವೃಕೋದರ ನರರೊಳಂತ
ರ್ಭಾವ ದುಶ್ಯಾಸನಗೆ ತನ್ನಯ
ಜೀವಸಖಗಾ ಭೀಮ ಪಾರ್ಥರ ಮರಣಸಿದ್ಧಿಯಲಿ
ಕೈವಿಡಿಯಲೇ ಕರ್ಣನಿಹನೆಂ
ದಾವು ನಿಶ್ಚಯಿಸಿದೆವು ಕರ್ಣನ
ಸಾವ ನಾಳಿನೊಳರಿವೆನೆಮ್ದನು ನಿನ್ನ ಮಗ ನಗುತ (ಶಲ್ಯ ಪರ್ವ, ೧ ಸಂಧಿ, ೧೭ ಪದ್ಯ)

ತಾತ್ಪರ್ಯ:
ಭೀಮಾರ್ಜುನರೊಳಗೇ ದುಶ್ಯಾಸನನಿದ್ದಾನೆ. ನನ್ನ ಪ್ರಾಣಸ್ನೇಹಿತ ಕರ್ಣನು ಭೀಮಾರ್ಜುನರ ಮರಣದಿಂದ ಸಿದ್ಧಿಸಿ ನನ್ನ ಕೈಹಿಡಿಯುತ್ತಾನೆಂದು ನಿಶ್ಚಯಿಸಿದ್ದೇನೆ. ಕರ್ಣನ ಮರಣದ ಸುದ್ದಿಯನ್ನು ನಾಳೆ ತಿಳಿದುಕೊಳ್ಳುತ್ತೇನೆ ಎಂದು ದುರ್ಯೋಧನನು ನಗುತ್ತಾ ಹೇಳಿದನು.

ಅರ್ಥ:
ವೃಕೋದರ: ಭೀಮ; ಉದರ: ಹೊಟ್ಟೆ; ನರ: ಅರ್ಜುನ; ಅಂತರ್ಭಾವ: ಒಳಭಾವನೆ; ಜೀವ: ಪ್ರಾಣ; ಸಖ: ಸ್ನೇಹಿತ; ಮರಣ: ಸಾವು; ಸಿದ್ಧಿ: ಸಾಧನೆ; ಕೈವಿಡಿ: ಕೈಹಿಡಿ; ನಿಶ್ಚಯ: ನಿರ್ಧಾರ; ಸಾವು: ಮರಣ; ನಾಳೆ: ಮರುದಿನ; ಅರಿ: ತಿಳಿ; ಮಗ: ಸುತ; ನಗು: ಹರ್ಷ, ಸಂತಸ;

ಪದವಿಂಗಡಣೆ:
ಆ +ವೃಕೋದರ +ನರರೊಳ್+ಅಂತ
ರ್ಭಾವ +ದುಶ್ಯಾಸನಗೆ+ ತನ್ನಯ
ಜೀವಸಖಗಾ +ಭೀಮ +ಪಾರ್ಥರ +ಮರಣ+ಸಿದ್ಧಿಯಲಿ
ಕೈವಿಡಿಯಲೇ +ಕರ್ಣನಿಹನೆಂದ್
ಆವು +ನಿಶ್ಚಯಿಸಿದೆವು+ ಕರ್ಣನ
ಸಾವ +ನಾಳಿನೊಳ್+ಅರಿವೆನ್+ಎಂದನು +ನಿನ್ನ +ಮಗ +ನಗುತ

ಅಚ್ಚರಿ:
(೧) ವೃಕೋದರ, ಭೀಮ – ಭೀಮನನ್ನು ಕರೆದ ಪರಿ

ಪದ್ಯ ೨೯: ಸಾತ್ಯಕಿಯು ಭೀಮನಲ್ಲಿ ಏನು ಹೇಳಿದನು?

ಮಿಡುಕಿದನು ಸಾತ್ಯಕಿ ವೃಕೋದರ
ನೊಡೆಯವಚಿದನು ಮತ್ತೆ ಪವನಜ
ಬಿಡು ನಿನಗೆ ನೃಪನಾಣೆ ಕುಡಿವೆನು ಖಳನ ಶೋಣಿತವ
ಬಿಡು ಬಿಡಕಟಾ ಭೀಮ ಸಾತ್ಯಕಿ
ಹಿಡಿಹಿಡಿಯ ಹಮ್ಮೈಸುವನು ಬಿಡು
ತೊಡಕಿ ನೋಡಲಿಯೆನುತ ಧೃಷ್ಟದ್ಯುಮ್ನನಳ್ಳಿರಿದ (ದ್ರೋಣ ಪರ್ವ, ೧೯ ಸಂಧಿ, ೨೯ ಪದ್ಯ)

ತಾತ್ಪರ್ಯ:
ಸಾತ್ಯಕಿಯು ತಪ್ಪಿಸಿಕೊಳ್ಳಲು ಯತ್ನಿಸಿದನು ಭೀಮನು ಅವನನ್ನು ಮತ್ತೆ ಅವಚಿದನು. ಸಾತ್ಯಕಿಯು, ಭೀಂಅ ದೊರೆಯಾಣೆ ನನ್ನನ್ನು ಬಿಡು, ಆ ನೀಚನ ರಕ್ತವನ್ನು ಕುಡಿಯುತ್ತೇನೆ ಎಂದನು. ಧೃಷ್ಟದ್ಯುಮ್ನನು ಭೀಮಾ ಬಿಟ್ಟುಬಿಡು, ಸಾತ್ಯಕಿ ಮಿಸುಕಾಡುತ್ತಿದ್ದಾನೆ ಅವನನ್ನು ಬಿಡು, ನನ್ನೊಡನೆ ಯುದ್ಧಮಾಡಿ ನೋಡಲಿ ಎಂದನು.

ಅರ್ಥ:
ಮಿಡುಕು: ಅಲುಗಾಟ; ಒಡೆಯ: ನಾಯಕ; ಅವಚು: ಆವರಿಸು, ಅಪ್ಪಿಕೊಳ್ಳು; ಪವನಜ: ಭೀಮ; ಬಿಡು: ತೊರೆ; ನೃಪ: ರಾಜ; ಆಣೆ: ಪ್ರಮಾಣ; ಕುಡಿ: ಪಾನಮಾದು; ಖಳ: ದುಷ್ಟ; ಶೋಣಿತ: ರಕ್ತ; ಅಕಟ: ಅಯ್ಯೋ; ಹಿಡಿ: ಗ್ರಹಿಸು; ಹಮ್ಮೈಸು: ಎಚ್ಚರ ತಪ್ಪು, ಮೂರ್ಛೆ ಹೋಗು; ತೊಡಕು: ಸಿಕ್ಕು, ಗೋಜು; ಅಳ್ಳಿರಿ: ನಡುಗಿಸು, ಚುಚ್ಚು;

ಪದವಿಂಗಡಣೆ:
ಮಿಡುಕಿದನು +ಸಾತ್ಯಕಿ +ವೃಕೋದರ
ನೊಡೆ+ಅವಚಿದನು +ಮತ್ತೆ +ಪವನಜ
ಬಿಡು +ನಿನಗೆ +ನೃಪನಾಣೆ+ ಕುಡಿವೆನು+ ಖಳನ +ಶೋಣಿತವ
ಬಿಡು +ಬಿಡ್+ಅಕಟಾ +ಭೀಮ +ಸಾತ್ಯಕಿ
ಹಿಡಿಹಿಡಿಯ+ ಹಮ್ಮೈಸುವನು+ ಬಿಡು
ತೊಡಕಿ +ನೋಡಲಿ+ಎನುತ +ಧೃಷ್ಟದ್ಯುಮ್ನನ್+ಅಳ್ಳಿರಿದ

ಅಚ್ಚರಿ:
(೧) ವೃಕೋದರ, ಪವನಜ, ಭೀಮ – ಭೀಮನನ್ನು ಕರೆದ ಪರಿ
(೨) ಬಿಡು ಬಿಡಕಟಾ, ಹಿಡಿಹಿಡಿ – ಜೋಡಿ ಪದಗಳ ಬಳಕೆ

ಪದ್ಯ ೪೧: ದ್ರೋಣನು ತನ್ನ ಮಗನನ್ನು ಯಾರಿಗೆ ಹೋಲಿಸಿದನು?

ಶಿವ ಶಿವಾ ಕರ್ಣಜ್ವರಾಯತ
ರವವಿದೆತ್ತಣದೋ ಕುಮಾರನ
ತಿವಿದರಾರೋ ತಾನಿದದುಭುತವೆನುತ ತನ್ನೊಳಗೆ
ತವಕಿಸುತ ತಿಳಿದನು ವೃಕೋದರ
ನಿವ ದುರಾತ್ಮನು ತನ್ನ ಮಗನಾ
ಶಿವನೊಡನೆ ಸಮಜೋಳಿ ಹುಸಿ ಹೋಗೆಂದನಾ ದ್ರೋಣ (ದ್ರೋಣ ಪರ್ವ, ೧೮ ಸಂಧಿ, ೪೧ ಪದ್ಯ)

ತಾತ್ಪರ್ಯ:
ಶಿವ ಶಿವಾ, ಇದು ಕಿವಿಗೆ ಜ್ವರ ಬರಿಸುವ ಮಾತು, ಈ ಧ್ವನಿ ಎತ್ತಣಿಂದ ಬಂದಿತು? ಅಶ್ವತ್ಥಾಮನನ್ನು ಕೊಂದವರಾರು? ಇದು ಪರಮಾದ್ಭುತ, ಎಂದು ಚಿಂತಿಸುತ್ತಾ ದ್ರೋಣನು ಈ ಮಾತನ್ನು ಹೇಳಿದವನು ಭೀಮನೆಂದು ತಿಳಿದು, ಇವನು ದುಷ್ಟ, ನನ್ನ ಮಗನು ಶಿವನಿಗೆ ಸಮಾನನಾದವನು. ಇದು ಸುಳ್ಳು ತೊಲಗು ಎಂದು ಹೇಳಿದನು.

ಅರ್ಥ:
ಕರ್ಣ: ಕಿವಿ; ಜ್ವರ: ಬೇನೆ; ಆಯತ: ಉಚಿತವಾದ; ರವ: ಶಬ್ದ; ಕುಮಾರ: ಮಗ; ತಿವಿ: ಚುಚ್ಚು; ಅದುಭುತ: ಆಶ್ಚರ್ಯ; ತವಕ: ಕಾತುರ; ತಿಳಿ: ಗೋಚರಿಸು; ವೃಕೋದರ: ತೋಳದಂತಹ ಹೊಟ್ಟೆ (ಭೀಮ); ದುರಾತ್ಮ: ದುಷ್ಟ; ಮಗ: ಸುತ; ಶಿವ: ಶಂಕರ; ಸಮಜೋಳಿ: ಸಮಾನವಾದ; ಹುಸಿ: ಸುಳ್ಳು; ಹೋಗು: ತೆರಳು;

ಪದವಿಂಗಡಣೆ:
ಶಿವ+ ಶಿವಾ+ ಕರ್ಣ+ಜ್ವರ+ಆಯತ
ರವವಿದ್+ಎತ್ತಣದೋ +ಕುಮಾರನ
ತಿವಿದರಾರೋ +ತಾನಿದ್+ಅದುಭುತವೆನುತ+ ತನ್ನೊಳಗೆ
ತವಕಿಸುತ +ತಿಳಿದನು +ವೃಕೋದರನ್
ಇವ +ದುರಾತ್ಮನು +ತನ್ನ +ಮಗನ್+ಆ
ಶಿವನೊಡನೆ +ಸಮಜೋಳಿ +ಹುಸಿ +ಹೋಗೆಂದನಾ +ದ್ರೋಣ

ಅಚ್ಚರಿ:
(೧) ರೂಪಕದ ಪ್ರಯೋಗ – ಶಿವ ಶಿವಾ ಕರ್ಣಜ್ವರಾಯತರವವಿದೆತ್ತಣದೋ
(೨) ಅಶ್ವತ್ಥಾಮನನ್ನು ಹೋಲಿಸುವ ಪರಿ – ತನ್ನ ಮಗನಾ ಶಿವನೊಡನೆ ಸಮಜೋಳಿ

ಪದ್ಯ ೪೩: ಕೃಷ್ಣನು ಯಾರನ್ನು ಕರೆಯಲು ಧರ್ಮಜನಿಗೆ ಹೇಳಿದನು?

ಕರಸು ಧರ್ಮಜ ಕಲಿಘಟೋತ್ಕಚ
ನಿರುಳುಬವರಕೆ ನಿಲಲಿ ಸಾತ್ಯಕಿ
ನರ ವೃಕೋದರ ನಕುಲ ಸಹದೇವಾದಿಗಳಿಗರಿದು
ಇರುಳು ರಣದಾಯತವನವನೇ
ಹಿರಿದು ಬಲ್ಲನು ಗೆಲುವನೆನೆ ಮುರ
ಹರನ ನೇಮದಲನಿಲತನಯನತನಯನೈತಂದ (ದ್ರೋಣ ಪರ್ವ, ೧೫ ಸಂಧಿ, ೪೩ ಪದ್ಯ)

ತಾತ್ಪರ್ಯ:
ಶ್ರೀ ಕೃಷ್ಣನು ಧರ್ಮಜನಿಗೆ ಹೇಳಿದನು, ಎಲೈ ಧರ್ಮಜ ಶೂರನಾದ ಘಟೋತ್ಕಚನನ್ನು ಕರೆಸು, ಈ ರಾತ್ರಿಯ ಕಾಳಗಕ್ಕೆ ಅವನೇ ಸರಿ, ಸಾತ್ಯಕಿ, ಅರ್ಜುನ, ಭೀಮ, ನಕುಲ ಸಹದೇವರಿಗೆ ರಾತ್ರಿಯ ಕಾಳಗ ತಿಳಿಯದು, ರಾತ್ರಿಯ ಯುದ್ಧದ ರೀತಿಯನ್ನು ಘಟೋತ್ಕಚನೇ ಬಲ್ಲ. ಅವನು ಗೆಲ್ಲುತ್ತಾನೆ ಎಂದು ಕೃಷ್ಣನು ಹೇಳಲು, ಧರ್ಮಜನ ಅಪ್ಪಣೆಯಂತೆ ಘಟೋತ್ಕಚನು ಬಂದನು.

ಅರ್ಥ:
ಕರಸು: ಬರೆಮಾಡು; ಕಲಿ: ಶೂರ; ಇರುಳು: ರಾತ್ರಿ; ಬವರ: ಯುದ್ಧ; ನಿಲಲಿ: ನಿಲ್ಲು; ನರ: ಅರ್ಜುನ; ವೃಕೋದರ: ಭೀಮ; ಆದಿ: ಮುಂತಾದ; ಇರುಳು: ರಾತ್ರಿ; ರಣ: ಯುದ್ಧ; ಆಯತ: ವಿಶಾಲವಾದ; ಹಿರಿದು: ಹೆಚ್ಚಿನದು; ಬಲ್ಲ: ತಿಳಿ; ಗೆಲುವು: ಜಯ; ಮುರಹರ: ಕೃಷ್ಣ; ನೇಮ: ನಿಯಮ, ಆಜ್ಞೆ; ಅನಿಲ: ವಾಯು; ತನಯ: ಮಗ; ಐತಂದ: ಬಂದು ಸೇರು;

ಪದವಿಂಗಡಣೆ:
ಕರಸು +ಧರ್ಮಜ +ಕಲಿ+ಘಟೋತ್ಕಚನ್
ಇರುಳು+ಬವರಕೆ +ನಿಲಲಿ +ಸಾತ್ಯಕಿ
ನರ+ ವೃಕೋದರ +ನಕುಲ+ ಸಹದೇವಾದಿಗಳಿಗ್+ಅರಿದು
ಇರುಳು +ರಣದ್+ಆಯತವನ್+ಅವನೇ
ಹಿರಿದು +ಬಲ್ಲನು +ಗೆಲುವನ್+ಎನೆ +ಮುರ
ಹರನ +ನೇಮದಲ್+ಅನಿಲ+ತನಯನ+ತನಯನ್+ಐತಂದ

ಅಚ್ಚರಿ:
(೧) ಬವರ, ರಣ – ಸಮಾನಾರ್ಥಕ ಪದ
(೨) ಘಟೋತ್ಕಚನನ್ನು ಕರೆಯುವ ಪರಿ – ಅನಿಲತನಯನತನಯ

ಪದ್ಯ ೬೪: ಭೀಮನ ರಕ್ಷಣೆಗೆ ಯಾರು ಬಂದರು?

ತಾಯ ಮಾತನು ಮೀರಿ ನಿನ್ನನು
ನೋಯಿಸಿದೆನದೆ ಸಾಕು ಜೀವವ
ಕಾಯಿದೆನು ಬಿಟ್ಟೆನು ವೃಕೋದರ ಹೋಗು ಹೋಗೆನಲು
ವಾಯುಸುತ ಸಿಲುಕಿದನಲಾ ಕಾ
ಳಾಯಿತೆನುತಸುರಾರಿ ರಥವನು
ಹಾಯಿಸಲು ಮುರಿಯೆಚ್ಚು ಕರ್ಣನ ತೆಗೆಸಿದನು ಪಾರ್ಥ (ದ್ರೋಣ ಪರ್ವ, ೧೩ ಸಂಧಿ, ೬೪ ಪದ್ಯ)

ತಾತ್ಪರ್ಯ:
ಕರ್ಣನು, ತಾಯ ಮಾತನ್ನು ಮೀರಿ ನಿನ್ನನ್ನು ನೋಯಿಸಿದ್ದೇನೆ, ಇಷ್ಟೇ ಸಾಕು. ನಿನ್ನ ಝಿವವನ್ನುಳಿಸಿ ಬಿಟ್ಟಿದ್ದೇನೆ. ಭೀಮ ಹೋಗು ಹೋಗು, ಎಂದು ಕರ್ನನು ಭಂಗಿಸುತ್ತಿರಲು, ಭೀಮನು ಶತ್ರುವಿಗೆ ಸಿಲುಕಿಕೊಂಡಿದ್ದಾನೆ, ಕೆಲಸಕೆಟ್ಟಿತು ಎಂದುಕೊಂಡು ಶ್ರೀಕೃಷ್ಣನು ರಥವನ್ನು ನಡೆಸಲು, ಅರ್ಜುನನು ಕರ್ಣನನ್ನು ಬಾಣಗಳಿಂದ ಹೊಡೆದು ಅವನ ದಾಳಿಯನ್ನು ತೆಗೆಸಿದನು.

ಅರ್ಥ:
ತಾಯಿ: ಮಾತೆ; ಮಾತು: ನುಡಿ; ಮೀರು: ಉಲ್ಲಂಘಿಸು, ಅತಿಕ್ರಮಿಸು; ನೋಯಿಸು: ಪೆಟ್ಟುನೀಡು; ಸಾಕು: ನಿಲ್ಲಿಸು; ಜೀವ: ಪ್ರಾಣ; ಕಾಯಿದೆ: ರಕ್ಷಿಸಿದೆ; ಬಿಟ್ಟು: ತೊರೆ; ವೃಕೋದರ: ತೋಳದಂತ ಹೊಟ್ಟೆಯುಳ್ಳವ (ಭೀಮ); ಹೋಗು: ತೆರಳು; ವಾಯುಸುತ: ಭೀಮ; ಸಿಲುಕು: ಬಂಧನಕ್ಕೊಳಗಾಗು; ಕಾಳ: ಕತ್ತಲೆ; ಅಸುರಾರಿ: ಕೃಷ್ಣ; ರಥ: ಬಂಡಿ; ಹಾಯಿಸು: ಓಡಿಸು; ಮುರಿ: ಸೀಳು; ಎಚ್ಚು: ಬಾಣ ಪ್ರಯೋಗ ಮಾಡು; ತೆಗೆಸು: ಸಡಲಿಸು;

ಪದವಿಂಗಡಣೆ:
ತಾಯ +ಮಾತನು +ಮೀರಿ +ನಿನ್ನನು
ನೋಯಿಸಿದೆನ್+ಅದೆ+ ಸಾಕು +ಜೀವವ
ಕಾಯಿದೆನು +ಬಿಟ್ಟೆನು +ವೃಕೋದರ +ಹೋಗು +ಹೋಗೆನಲು
ವಾಯುಸುತ+ ಸಿಲುಕಿದನಲಾ +ಕಾ
ಳಾಯಿತ್+ಎನುತ್+ಅಸುರಾರಿ +ರಥವನು
ಹಾಯಿಸಲು +ಮುರಿ+ಎಚ್ಚು +ಕರ್ಣನ +ತೆಗೆಸಿದನು +ಪಾರ್ಥ

ಅಚ್ಚರಿ:
(೧) ವೃಕೋದರ, ವಾಯುಸುತ – ಭೀಮನನ್ನು ಕರೆದ ಪರಿ