ನಿಜವರೂಥದಲಂದು ಕೌರವ
ವಿಜಯ ಮಾರುತಿ ಹೊಕ್ಕು ರಿಪು ಭೂ
ಭುಜರನರೆಯಟ್ಟಿದನು ಬಹಳಿತ ಸಿಂಹನಾದದಲಿ
ತ್ರಿಜಗ ತಲ್ಲಣಿಸಿದುದು ವರ ವಾ
ರಿಜವಿಲೋಚನ ಕೇಳಿದನು ಪವ
ನಜನ ಪಡಿಬಲ ಬಂದುದೆಮದರುಹಿದನು ಪಾರ್ಥಂಗೆ (ದ್ರೋಣ ಪರ್ವ, ೧೩ ಸಂಧಿ, ೧೭ ಪದ್ಯ)
ತಾತ್ಪರ್ಯ:
ಕೌರವರನ್ನು ಗೆದ್ದ ಭೀಮನು ತನ್ನ ರಥದಲ್ಲಿ ಕುಳಿತು ಸಿಂಹನಾದ ಮಾಡುತ್ತಾ ಶತ್ರುರಾಜರನ್ನರೆಯಟ್ಟಿದನು. ಮೂರು ಲೋಕಗಳೂ ಅವನ ಆರ್ಭಟಕ್ಕೆ ತಲ್ಲಣಿಸಿದವು. ಭೀಮನ ಕೂಗನ್ನು ಶ್ರೀಕೃಷ್ಣನು ಕೇಳಿ, ಭೀಮನ ಸಹಾಯ ಬಂದಿತು ಎಂದು ಅರ್ಜುನನಿಗೆ ಹೇಳಿದನು.
ಅರ್ಥ:
ನಿಜ: ತನ್ನ; ವರೂಥ:ತೇರು, ರಥ; ವಿಜಯ: ಗೆಲುವು; ಮಾರುತಿ: ಹನುಮ; ಹೊಕ್ಕು: ಸೇರು; ರಿಪು: ವೈರಿ; ಭೂಭುಜ: ಅರಸು; ಅಟ್ಟು: ಹಿಂಬಾಲಿಸು; ಬಹಳ: ತುಂಬ; ಸಿಂಹನಾದ: ಗರ್ಜನೆ; ತ್ರಿಜಗ: ಮೂರು ಪ್ರಪಂಚ; ತಲ್ಲಣ: ಅಂಜಿಕೆ, ಭಯ; ವರ: ಶ್ರೇಷ್ಠ; ವಾರಿಜ: ಕಮಲ ವಿಲೋಚನ: ಕಣ್ಣು; ಕೇಳು: ಆಲಿಸು; ಪವನಜ: ವಾಯುಪುತ್ರ (ಭೀಮ); ಪಡಿಬಲ: ಅಗತ್ಯಕ್ಕೆ ಸಹಾಯಕವಾಗಿ ಬರುವ ದೊಡ್ಡಪಡೆ; ಬಂದುದು: ಆಗಮಿಸು; ಅರುಹು: ಹೇಳು, ತಿಳಿಸು;
ಪದವಿಂಗಡಣೆ:
ನಿಜ+ವರೂಥದಲ್+ಅಂದು +ಕೌರವ
ವಿಜಯ +ಮಾರುತಿ +ಹೊಕ್ಕು +ರಿಪು +ಭೂ
ಭುಜರನ್+ಅರೆ+ಅಟ್ಟಿದನು +ಬಹಳಿತ +ಸಿಂಹನಾದದಲಿ
ತ್ರಿಜಗ +ತಲ್ಲಣಿಸಿದುದು +ವರ +ವಾ
ರಿಜ+ವಿಲೋಚನ +ಕೇಳಿದನು +ಪವ
ನಜನ +ಪಡಿಬಲ +ಬಂದುದೆಮದ್+ಅರುಹಿದನು +ಪಾರ್ಥಂಗೆ
ಅಚ್ಚರಿ:
(೧) ಕೃಷ್ಣನನ್ನು ವರ ವಾರಿಜ ವಿಲೋಚನ ಎಂದು ಕರೆದಿರುವುದು