ಹೇಳಬಾರದು ಮುಂದಣದು ದು
ಷ್ಕಾಲವಿಂದಿಗೆ ನಾಳೆ ನಾಳೆಗೆ
ನಾಳೆ ಬಿಟ್ಟಿತು ವರ್ಣಧರ್ಮಾಶ್ರಮದ ನೆಲೆಹೋಯ್ತು
ಕಾಲ ವಿಷಮವು ಕೌರವ ಕ್ಷಿತಿ
ಪಾಲ ಪಾಂಡು ಕುಮಾರರಲಿ ಕೈ
ಮೇಳವಿಸುವುದು ತಾಯೆ ಬಿಜಯಂಗೈಯಿ ನೀವೆಂದ (ಆದಿ ಪರ್ವ, ೫ ಸಂಧಿ, ೩೧ ಪದ್ಯ)
ತಾತ್ಪರ್ಯ:
ತಾಯೆ, ಮುಂದೆ ಬರುವುದು ಕೆಟ್ಟ ಕಾಲ, ಇಂದಿಗಿಂತ ನಾಳೆ ನಾಳೆಗಿಂತ ನಾಡಿದ್ದು ಹೆಚ್ಚು ಕಷ್ಟಕರ. ವರ್ಣಾಶ್ರಮ, ಧರ್ಮಗಳ ನೆಲೆ ತಪ್ಪಿತು. ವಿಷಮಕಾಲ ಬರುತ್ತದೆ. ಕೌರವರು ಪಾಂಡವರಿಗೆ ಯುದ್ಧವಾಗುತ್ತದೆ. ನೀವು ದಯಮಾಡಿಸಿ ಎಂದು ವ್ಯಾಸರು ಯೋಜನಗಂಧಿಗೆ ಹೇಳಿದರು.
ಅರ್ಥ:
ಹೇಳು: ತಿಳಿಸು; ಮುಂದಣ: ಭವಿಷ್ಯ; ದುಷ್ಕಾಲ: ಕೆಟ್ಟಕಾಲ; ನಾಳೆ: ಮರುದಿನ; ವರ್ಣ: ಬಣ, ಪಂಗಡ; ಧರ್ಮ: ಧಾರಣೆ ಮಾಡಿದುದು; ಆಶ್ರಮ: ಜೀವನದ ನಾಲ್ಕು ಘಟ್ಟಗಳು; ನೆಲೆ: ಆಶ್ರಯ, ಆಧಾರ; ಕಾಲ: ಸಮಯ; ವಿಷಮ: ಕೆಟ್ಟದ್ದು; ಕ್ಷಿತಿಪಾಲ: ರಾಜ; ಕೈಮೇಳವಿಸು: ಕಿತ್ತಾಡು; ಬಿಜಯಂಗೈ: ಹೊರಡು;
ಪದವಿಂಗಡಣೆ:
ಹೇಳಬಾರದು +ಮುಂದಣದು +ದು
ಷ್ಕಾಲವ್+ಇಂದಿಗೆ +ನಾಳೆ +ನಾಳೆಗೆ
ನಾಳೆ +ಬಿಟ್ಟಿತು+ ವರ್ಣ+ಧರ್ಮಾಶ್ರಮದ +ನೆಲೆಹೋಯ್ತು
ಕಾಲ+ ವಿಷಮವು +ಕೌರವ +ಕ್ಷಿತಿ
ಪಾಲ +ಪಾಂಡು +ಕುಮಾರರಲಿ+ ಕೈ
ಮೇಳವಿಸುವುದು +ತಾಯೆ +ಬಿಜಯಂಗೈಯಿ+ ನೀವೆಂದ
ಅಚ್ಚರಿ:
(೧) ಯುದ್ಧ ಎಂದು ಹೇಳುವ ಪರಿ – ಕೈಮೇಳವಿಸು
(೨) ನಾಳೆ ಪದದ ಬಳಕೆ – ನಾಳೆ ನಾಳೆಗೆ ನಾಳೆ